ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಸಾವಿರ ಕುಟುಂಬಗಳ ಸ್ಥಳಾಂತರ; ನೊಯ್ಡಾದಲ್ಲಿ ಇಬ್ಬರು ಬಾಲಕಿಯರ ಸಾವು

ಮಹಾರಾಷ್ಟ್ರ, ಗೋವಾದಲ್ಲಿ ವ್ಯಾಪಕ ಮಳೆ
Last Updated 6 ಆಗಸ್ಟ್ 2019, 19:40 IST
ಅಕ್ಷರ ಗಾತ್ರ

ಕೊಲ್ಹಾಪುರ/ ನೊಯ್ಡಾ/ ಪಣಜಿ:ಉತ್ತರ ಭಾರತದ ವಿವಿಧೆಡೆ ಸುರಿಯುತ್ತಿರುವ ಮಹಾ ಮಳೆ ಮಂಗಳವಾರ ಇಬ್ಬರು ಬಾಲಕಿಯರನ್ನು ಬಲಿ ತೆಗೆದುಕೊಂಡಿದೆ.

ಮಹಾರಾಷ್ಟ್ರ, ಗೋವಾದಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಕೆಲವೆಡೆ ಜನಜೀವನ ಅಸ್ತವ್ಯಸ್ತ ಆಗಿದೆ. ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಯಲ್ಲಿ ಪ್ರವಾಹ ಹಿನ್ನೆಲೆಯಲ್ಲಿ 50 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗೋವಾದ ದಿವಾರ್‌ ದ್ವೀಪ ಪ್ರವಾಹಕ್ಕೆ ಸಿಲುಕಿದೆ.

ಅಪಾಯಕ್ಕೆ ಸಿಲುಕಿರುವವರ ರಕ್ಷಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ಅಗ್ನಿಶಾಮಕ ದಳ, ಸ್ಥಳೀಯ ಆಡಳಿತ ಮತ್ತು ಪೊಲೀಸರು ಶ್ರಮಿಸುತ್ತಿದ್ದಾರೆ.

ಕುಟುಂಬಗಳ ಸ್ಥಳಾಂತರ

ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದ್ದು, 11,165 ಕುಟುಂಬಗಳ 50 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

‘ಎನ್‌ಡಿಆರ್‌ಎಫ್‌ ತಂಡ ಇಬ್ಬರು ಗರ್ಭಿಣಿಯರನ್ನು ರಕ್ಷಿಸಿದೆ. ಅಪಾಯಕ್ಕೆ ಸಿಲುಕಿರುವವರ ರಕ್ಷಣೆಗೆವಾಯು ಮತ್ತು ನೌಕಾ ಪಡೆಯ ನೆರವು ಕೋರಲಾಗಿದೆ’ ಎಂದು ಪುಣೆಯ ವಿಭಾಗೀಯ ಆಯುಕ್ತ ದೀಪಕ್‌ ಮೈಶೇಖರ್‌ ತಿಳಿಸಿದ್ದಾರೆ.

ದಕ್ಷಿಣ ಕೊಲ್ಹಾಪುರ ಮತ್ತು ಕರ್ನಾಟಕದ ಬೆಳಗಾವಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆ ಆಗುತ್ತಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕೊಲ್ಹಾಪುರದ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ದೇಶ್‌ಮುಖ್‌ ಹೇಳಿದ್ದಾರೆ.

ವಿದ್ಯುತ್‌ ಕಡಿತ: ಮುಂಜಾಗ್ರತಾ ಕ್ರಮವಾಗಿ 85,523 ಮನೆಗಳಿಗೆ ವಿದ್ಯುತ್‌ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿರುವುದಾಗಿ ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ಪೂರೈಕೆ ಕಂಪನಿ (ಎಂಎಸ್‌ಇಡಿಸಿಎಲ್‌) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಮಹಾರಾಷ್ಟ್ರದಲ್ಲಿ 2005ರಲ್ಲಿ ಉಂಟಾಗಿದ್ದ ಮಹಾ ಮಳೆಗಿಂತ, ಈ ಬಾರಿಯ ಪರಿಸ್ಥಿತಿ ಹದಗೆಟ್ಟಿದೆ. ಕೊಲ್ಹಾಪುರದ ಜಿಲ್ಲಾಧಿಕಾರಿ ಕಚೇರಿ ಆವರಣ ಸೇರಿದಂತೆ ನಗರದ ಕೆಲ ಭಾಗಗಳು ಜಲಾವೃತವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಲ್ಹಾಪುರದ ಪಂಚ್‌ಗಂಗಾ ನದಿ ಅಪಾಯದ ಮಟ್ಟ (49 ಅಡಿ) ಮೀರಿ ಹರಿಯುತ್ತಿದ್ದು, ಮಂಗಳವಾರ 52 ಅಡಿ ತಲುಪಿದೆ.

ಸತಾರ ಮತ್ತು ಸಾಂಗ್ಲಿಯ ಕೆಲ ಭಾಗ ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿವೆ. ಕೊಯ್ನಾ ಮತ್ತು ರಾಧಾನಗರಿ ಅಣೆಕಟ್ಟುಗಳಿಂದ ಹೆಚ್ಚುವರಿ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವ ಕಾರಣ ಕೃಷ್ಣಾ ಮತ್ತು ಪಂಚ್‌ಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಆಲಮಟ್ಟಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಕೋರಿದ್ದಾರೆ.

ಮಳೆಯ ಕಾರಣ ಮಹಾರಾಷ್ಟ್ರದ ಪುಣೆ, ಸತಾರ, ಕೊಲ್ಹಾಪುರ ಮತ್ತು ಸಾಂಗ್ಲಿಯಲ್ಲಿ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ನೀಡಲಾಗಿತ್ತು.

ನವದೆಹಲಿಯಲ್ಲಿ ಮಂಗಳವಾರ ಪ್ರವಾಹ ಸ್ಥಿತಿಯಿದ್ದ ರಸ್ತೆಯಲ್ಲಿ ಸಿಕ್ಕಿಕೊಂಡ ವಿದ್ಯಾರ್ಥಿನಿಯ ಆಕ್ರಂದನ
ನವದೆಹಲಿಯಲ್ಲಿ ಮಂಗಳವಾರ ಪ್ರವಾಹ ಸ್ಥಿತಿಯಿದ್ದ ರಸ್ತೆಯಲ್ಲಿ ಸಿಕ್ಕಿಕೊಂಡ ವಿದ್ಯಾರ್ಥಿನಿಯ ಆಕ್ರಂದನ

ಮನೆ ಕುಸಿತ

ಎರಡು ದಿನಗಳಿಂದ ಗ್ರೇಟರ್‌ ನೊಯ್ಡಾ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ದುಬ್ಲಿ ಗ್ರಾಮದಲ್ಲಿ ಮಂಗಳವಾರ ಎರಡು ಅಂತಸ್ತಿನ ಮನೆ ಕುಸಿದು ಇಬ್ಬರು ಬಾಲಕಿಯರು ಜೀವ ತೆತ್ತಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗೋವಾದಲ್ಲಿ ಮಳೆ

ಗೋವಾದಲ್ಲಿ ಸತತ ಮಳೆಯಿಂದ ದಿವಾರ್‌ ದ್ವೀಪ ಸೇರಿದಂತೆ ಕೆಲವೆಡೆ ಪ್ರವಾಹ ಉಂಟಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿದ್ದ ಎಂಟು ಬಸ್ಸುಗಳು ಗೋವಾ– ಕರ್ನಾಟಕ ಗಡಿಯಲ್ಲಿ ಸೋಮವಾರ ರಾತ್ರಿಯಿಂದ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

‘ದಿವಾರ್‌ ದ್ವೀಪದಲ್ಲಿ ಪ್ರವಾಹಕ್ಕೆ ಸಿಲುಕಿರುವವರ ಸಂಖ್ಯೆ ಎಷ್ಟು ಎಂದು ಖಚಿತವಾಗಿ ಗೊತ್ತಾಗಿಲ್ಲ. ಇಲ್ಲಿನ ನಿವಾಸಿಯೊಬ್ಬರು ಪ್ರವಾಹಕ್ಕೆ ಸಿಲುಕಿರುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಪೋಸ್ಟ್‌ ಮಾಡಿದ್ದಾರೆ.

ನಾಲ್ಕು ದಿನಗಳಿಂದ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.ದ್ವೀಪದಲ್ಲಿ ಪ್ರವಾಹಕ್ಕೆ ಸಿಲುಕಿರುವವರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ಗೋವಾ ಸರ್ಕಾರ ತಿಳಿಸಿದೆ.

ಮಾಂಡೋವಿ ನದಿ ಅಪಾಯದ ಹಂತ ತಲುಪಿ ಹರಿಯುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಗೋವಾದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಜತೆಗೆ ‘ಆರೇಂಜ್‌ ಅಲರ್ಟ್‌’ ಅನ್ನು ಹವಾಮಾನ ಇಲಾಖೆ ಹೊರಡಿಸಿದೆ. ಮೀನುಗಾರರಿಗೆ ನೀರಿಗಿಳಿಯದಂತೆ ಸೂಚಿಸಿದೆ.

ದೆಹಲಿ ಮಳೆ; ಸಂಚಾರ ವ್ಯತ್ಯಯ

ರಾಷ್ಟ್ರದ ರಾಜಧಾನಿ ದೆಹಲಿಯಲ್ಲೂ ಮಂಗಳವಾರ ಮಳೆಯಾಗಿದೆ. ಸಫ್ದರ್ಜಂಗ್‌ ಪ್ರದೇಶದಲ್ಲಿ 12.6 ಮಿ.ಮೀ ಹಾಗೂ ಪಾಲಂ ಬಳಿ 38.5 ಮಿ.ಮೀ ಮಳೆ ದಾಖಲಾಗಿದೆ. ಮಳೆಯಿಂದಾಗಿ ದೆಹಲಿಯಲ್ಲಿ ಸಂಚಾರ ವ್ಯತ್ಯಯವಾಗಿತ್ತು.

‘ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ’

ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಒಡಿಶಾ, ಪಶ್ಚಿಮ ಬಂಗಾಳದ ಕೆಲವೆಡೆ ಇದೇ 9ರವರೆಗೆ, ಇನ್ನೂ ಕೆಲವೆಡೆ ಇದೇ 11 ರವರೆಗೆ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಇನ್ನೂ ಕೆಲ ದಿನ ಮೀನುಗಾರಿಕೆಗೆ ಹೋಗದಂತೆ ಮೀನುಗಾರರಿಗೆ ಸೂಚಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT