ಬೆಳಗಾವಿ: ‘ರೈತರ ಬೇಡಿಕೆ ಪ್ರಕಾರ ಬೆಳೆ ಪರಿಹಾರ ನೀಡಿದರೆ, ನಾನೇ ₹1 ಕೋಟಿ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ನೆರೆಯಿಂದಾಗಿ ನನ್ನ 100 ಎಕರೆ ಬೆಳೆ ಕೂಡ ಹಾನಿಯಾಗಿದೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
‘ಎಕರೆಗೆ ₹ 50ಸಾವಿರ ಅಥವಾ ₹ 1 ಲಕ್ಷ ಪರಿಹಾರ ಕೊಡಿ ಎನ್ನುವುದು ರೈತರ ಆಗ್ರಹವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಪರಿಗಣಿಸಬೇಡಿ ಎಂದು ಅವರು ಹೇಳುತ್ತಾರೆ. ಎಲ್ಲರಿಗೂ ಗರಿಷ್ಠ ಪರಿಹಾರ ಕೊಡಿ ಎನ್ನುತ್ತಾರೆ. ಹಾಗೆಲ್ಲ ಮಾಡಲಾಗುವುದಿಲ್ಲ’ ಎಂದು ಪತ್ರಕರ್ತರಿಗೆ ತಿಳಿಸಿದರು.
‘ಕೇಂದ್ರವು ಕೊಡುವ ಬೆಳೆ ಪರಿಹಾರದದೊಂದಿಗೆ ನಾವೂ ಒಂದಷ್ಟು ಸೇರಿಸಿ ನೀಡಬೇಕು ಎಂಬ ಚಿಂತನೆ ನಡೆಸುತ್ತಿದ್ದೇವೆ. ಆಗಲೂ ರೈತ ಮುಖಂಡರಿಗೆ ಸಮಾಧಾನ ಆಗದಿದ್ದರೆ ನಾನೇನೂ ಮಾಡಲಾಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಇದಕ್ಕೂ ಮುನ್ನ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಬಂದ ರೈತ ಮುಖಂಡರಿಗೆ, ‘ನೀವು ಕೇಳಿದಷ್ಟು ಕೊಡಲಾಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಹೀಗಾಗಿ, ಅವರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
* ಯಾವುದೇ ಜಿಲ್ಲೆಗಳ ವಿಭಜನೆ ಪ್ರಸ್ತಾವ ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ. ಚಿಕ್ಕೋಡಿ, ಅಥಣಿ, ಜಮಖಂಡಿ ಭಾಗದವರು ಪ್ರತ್ಯೇಕ ಜಿಲ್ಲೆ ಮಾಡುವಂತೆ ಕೇಳುತ್ತಿದ್ದಾರೆ.