ಬೆಂಗಳೂರು: ರಾಜಮುಡಿ ಭತ್ತದ ತಳಿಗೆ ಭೌಗೋಳಿಕ ಗುರುತು (ಜಿಐ– ಜಿಯಾಗ್ರಫಿಕಲ್ ಐಡೆಂಟಿಫಿಕೇಷನ್) ಪಡೆಯಲು ಸಿದ್ಧತೆ ಆರಂಭವಾಗಿದೆ. ಐವರು ಸದಸ್ಯರ ಸಮಿತಿಯೊಂದು ಅದಕ್ಕೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ನಡೆಸಿ ಈ ವರ್ಷಾಂತ್ಯದೊಳಗೆ ಗುರುತು ಸಿಗುವಂತೆ ಮಾಡುವ ಹೊಣೆ ವಹಿಸಿಕೊಳ್ಳಲಿದೆ.
ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಕೃಷಿ ಇಲಾಖೆ ನೇತೃತ್ವದಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಲಾಗುವುದು ಎಂದುಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರು, ಅಕ್ಕಿಮೇಳದಲ್ಲಿ ಪ್ರಕಟಿಸಿದ್ದರು.
‘ಭೌಗೋಳಿಕ ಗುರುತು ಸಿಗಲು ಬೇಕಾಗುವ ಎಲ್ಲ ವೆಚ್ಚಗಳನ್ನು ಈ ಸಮಿತಿ ಭರಿಸಲಿದೆ. ಒಂದು ವರ್ಷದ ಒಳಗೆ ಈ ಸ್ಥಾನಮಾನ ಸಿಗುವಂತಾಗಬೇಕು’ ಎಂದರು.
‘ರಾಜಮುಡಿ ಭತ್ತವನ್ನು ಅರಕಲಗೂಡು, ಸಕಲೇಶಪುರ ಮತ್ತು ಹೊಳೆ ನರಸೀಪುರ ಭಾಗದಲ್ಲಿ ಬೆಳೆಯಲಾಗುತ್ತಿದೆ. ಸದ್ಯ ರಾಜ್ಯದ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಬೆಳೆಯಲಾಗುತ್ತಿದೆ’ ಎಂದು ಅವರು ತಿಳಿಸಿದರು.
‘ಈ ಅಕ್ಕಿಯಲ್ಲಿ ಹೆಚ್ಚು (ಶೇ 8ರಿಂದ 10) ಪ್ರಮಾಣದ ಪ್ರೊಟೀನ್ ಅಂಶವಿದೆ’ ಎಂದು ಮಂಡ್ಯದ ವಿ.ಸಿ.ಫಾರಂನ ವಿಜ್ಞಾನಿ ಎಂ.ಪಿ.ರಾಜಣ್ಣ ತಿಳಿಸಿದರು.