ಬೆಂಗಳೂರು: ಉಸ್ತುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿದ್ದು, ಕೊನೆಯ ಹಂತದಲ್ಲಿ ಅತೃಪ್ತ ಶಾಸಕರನ್ನು ಸಂಪರ್ಕಿಸಿ, ಅವರ ನಿಲುವು ತಿಳಿದುಕೊಳ್ಳಲು ನೆರವಾಗಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
‘ಪಕ್ಷದಲ್ಲಿ ನಿಮ್ಮ ಹಿರಿತನಕ್ಕೆ ಬೆಲೆ ಕೊಟ್ಟಿಲ್ಲ ಎಂಬ ಬಗ್ಗೆ ನನಗೂ ನೋವಿದೆ. ಡಿ.ಕೆ.ಶಿವಕುಮಾರ್ ಅವರು ಮುಂಬೈಗೆ ಹೋಗಿದ್ದರೂ ಅತೃಪ್ತ ಶಾಸಕರನ್ನು ಸಂಪರ್ಕಿಸುವುದು ಸಾಧ್ಯವಾಗಿರಲಿಲ್ಲ.ಆದರೆ ನೀವು ಕೊನೆಯ ಹಂತದಲ್ಲಿ ಅತೃಪ್ತರನ್ನು ಸಂಪರ್ಕಿಸಿ ಅವರ ನಿಲುವನ್ನು ಸ್ಪಷ್ಟವಾಗಿ ತಿಳಿಯುವ ಕೆಲಸ ಮಾಡಿದ್ದೀರಿ’ ಎಂದು ಕುಮಾರಸ್ವಾಮಿ ಹೇಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಶಾಸಕಿ ಸೌಮ್ಯಾ ರೆಡ್ಡಿ ಸಹ ಇದ್ದರು.