ಗುಬ್ಬಿ: ಪಟ್ಟಣದ ಗೋಸಲ ಚನ್ನಬಸವೇಶ್ವರಸ್ವಾಮಿ ರಥೋತ್ಸವ ಶನಿವಾರ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸುಡು ಬಿಸಿಲಿನಲ್ಲೂ ಸಾವಿರಾರು ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ದೇವರ ಮೂರ್ತಿಯನ್ನು ರಥಕ್ಕೆ ಕುಳ್ಳಿರಿಸುವ ಮುನ್ನ ಉಪ್ಪರಿಗೆಯಲ್ಲಿ ದೇವರನ್ನು ತೂಗಿ ಪೂಜಿಸಲಾಯಿತು.
ಜಾತ್ರಾ ಮಹೋತ್ಸವ ಪ್ರಯುಕ್ತ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 18 ಕೋಮಿನ ಮುಖಂಡರು ರಥ ಎಳೆದು ಚಾಲನೆ ನೀಡಿದರು. ರಥ ಸಾಗುತ್ತಿದ್ದಂತೆಯೇ ರಥದ ಕಳಸಕ್ಕೆ ಭಕ್ತರು ಬಾಳೆ ಹಣ್ಣು, ದವನ ತೂರಿ ಅರ್ಪಿಸಿದರು.
ರಥೋತ್ಸವದ ಬಳಿಕ ನೆರೆದಿದ್ದ ಭಕ್ತರಿಗೆ ಪಾನಕ, ಫಲಾಹಾರ ವ್ಯವಸ್ಥೆಯನ್ನು ವಿವಿಧ ಸಮುದಾಯದವರು ಮಾಡಿದ್ದರು.