ಕುಂದಾಪುರ: ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ರಾಜ್ಯ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಶ್ರೀ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಭಾನುವಾರ ಬೆಳಿಗ್ಗೆ ತಾಲ್ಲೂಕಿನ ಕುಂಭಾಸಿಯ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನ ಹಾಗೂ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆ ಅವರು, ಕೊಲ್ಲೂರಿಗೆ ಬಂದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಅವರನ್ನು ಸ್ವಾಗತಿಸಲಾಯಿತು.
ಪೂರ್ವ ಸೂಚನೆ ನೀಡದೇ ದೇವಸ್ಥಾನಕ್ಕೆ ಬಂದ ಸಚಿವರು, ದೇವರ ದರ್ಶನ ಪಡೆದ ಬಳಿಕ, ಪಕ್ಷದ ಸ್ಥಳೀಯ ಮುಖಂಡ ರವಿ ಶೆಟ್ಟಿ ಅವರೊಂದಿಗೆ ಮಾತನಾಡಿದರು. ಈ ವೇಳೆ ಮೈತ್ರಿ ಸರ್ಕಾರದ ಉಳಿವಿನ ಬಗ್ಗೆ ಭರವಸೆ ವ್ಯಕ್ತಪಡಿಸಿದ ಅವರು, ಮೈತ್ರಿ ಸರ್ಕಾರ ಅವಧಿಯನ್ನು ಪೂರ್ತಿಗೊಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ದೇವರ ದರ್ಶನದ ಬಳಿಕ, ದೇವಸ್ಥಾನದಲ್ಲಿ ಅನ್ನಪ್ರಸಾದ ಸ್ವೀಕರಿಸಿದ ಅವರು, ಕಟೀಲು ಹಾಗೂ ಧರ್ಮಸ್ಥಳ ಕ್ಷೇತ್ರ ದರ್ಶನಕ್ಕಾಗಿ ತೆರಳಿದರು.