ಚಿತ್ರದುರ್ಗ: ಇಲ್ಲಿನ ಮುರುಘಾ ಮಠ ಆಯೋಜಿಸುವ ಶರಣ ಸಂಸ್ಕೃತಿ ಉತ್ಸವಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ಸಿಕ್ಕಿತು.
ಶರಣರ ನಡಿಗೆ ಸೌಹಾರ್ದದ ಕಡೆಗೆ ಕಾಲ್ನಡಿಗೆ ಜಾಥಾವನ್ನು ಚಿತ್ರ ನಿರ್ಮಾಪಕ ಹಾಗೂ ನಟ ರಾಕ್ ಲೈನ್ ವೆಂಕಟೇಶ್ ಉದ್ಘಾಟಿಸಿದರು.
ಶ್ರೀ ಮಠದ ಆವರಣದಿಂದ ಹೊರಟ ಜಾಥಾ ನಗರದ ವಿವಿಧ ರಸ್ತೆಗಳಲ್ಲಿ ಸಾಗಿತು. ಶಿವಮೂರ್ತಿ ಮುರುಘಾ ಶರಣರೊಂದಿಗೆ ಇತರ ಸ್ವಾಮೀಜಿಗಳು ಹೆಜ್ಜೆ ಹಾಕಿದರು. ಗಾಂಧಿ ವೃತ್ತದಲ್ಲಿ ಜಮಾಯಿಸಿದ ಭಕ್ತರು ಜಾಥಾಗೆ ಸಾಥ್ ನೀಡಿದರು.
ಚಿತ್ರನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಕೂಡ ಶರಣರ ಜೊತೆ ಕಾಲ್ನಡಿಗೆಯಲ್ಲಿ ಸಾಗಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, 'ಶರಣರ ಆಹ್ವಾನದ ಮೇರೆಗೆ ಉತ್ಸವಕ್ಕೆ ಬಂದಿದ್ದೇವೆ. ಮದಕರಿ ನಾಯಕ ಚಿತ್ರದ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ' ಎಂದರು.