ಬೆಂಗಳೂರು: ‘ಪತ್ನಿಯ ಸಮ್ಮತಿ ಇಲ್ಲದೆ ಲೈಂಗಿಕ ಸಂಪರ್ಕ ಬೆಳೆಸುವುದನ್ನು ಅತ್ಯಾಚಾರವೆಂದು ಪರಿಗಣಿಸಬೇಕೆಂಬ ಕಾನೂನು ತರಲು ಹೊರಟಿದ್ದಾರೆ. ಅದು ಜಾರಿಯಾದರೆ, ರಿಜಿಸ್ಟರ್ನಲ್ಲಿ ಪತ್ನಿಯ ಸಹಿ ಪಡೆದು ಮುಂದುವರಿಯುವ ಸ್ಥಿತಿ ಬರಬಹುದು’ ಎಂದು ಸಾಹಿತಿ ಎಸ್.ಎಲ್. ಭೈರಪ್ಪ ಚಟಾಕಿ ಹಾರಿಸಿದರು.
ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದಿರುವ ಸುಮತೀಂದ್ರ ನಾಡಿಗ ಅವರ ಕೊನೆಯ ಕೃತಿ ‘ಶ್ರೀವತ್ಸ ಸ್ಮೃತಿ’ಯನ್ನು ಭಾನುವಾರ ಇಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಈ ಕಾನೂನು ಹಿಂದೂಗಳಿಗೆ ಮಾತ್ರವಂತೆ. ಇದು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ ಎಂದು ಕೇಂದ್ರ ಗೃಹ ಸಚಿವರು ಈಗಾಗಲೇ ಹೇಳಿದ್ದಾರೆ. ಏಕೆಂದರೆ, ಮೈನಾರಿಟಿ (ಅಲ್ಪಸಂಖ್ಯಾತರು) ಅವರಿಗೆ ಸ್ಪೆಷಾಲಿಟಿ ಇದೆಯಲ್ಲ. ಅವರ ತ್ರಿವಳಿ ತಲಾಖ್ ನಿಷೇಧದ ಬಗ್ಗೆ ಏಕೆ ಎಲ್ಲರೂ ಗಟ್ಟಿಯಾಗಿ ಮಾತನಾಡಲ್ಲ’ ಎಂದು ಪ್ರಶ್ನಿಸಿದರು.
‘ನಮ್ಮ ಸಮಾಜ, ಸಂಸಾರ ವ್ಯವಸ್ಥೆ, ದಾಂಪತ್ಯ ಬದುಕಿನ ಗಟ್ಟಿತನವನ್ನು ಒಡೆದು, ಭೀತಿ ಹುಟ್ಟಿಸುವ ಹುನ್ನಾರಗಳಿವು. ಈ ಯೋಜನೆಗಳೆಲ್ಲ ವ್ಯಾಟಿಕನ್ನಲ್ಲಿ ಸಿದ್ಧವಾಗುತ್ತವೆ.ಇವೆಲ್ಲ ಹಿಂದೂ ಸಮಾಜವನ್ನು ಒಡೆಯುವ ತಂತ್ರಗಳು’ ಎಂದರು.