ಬೆಂಗಳೂರು: ಸಾಗರ ಫೋಟೊಗ್ರಾಫಿಕ್ ಸೊಸೈಟಿ ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಗ್ರಹಣಸ್ಪರ್ಧೆಯ ‘ಗ್ರಾಮೀಣ ಬದುಕು’ ವಿಭಾಗದಲ್ಲಿ ಮಂಗಳೂರಿನ ಕಾರ್ತಿಕ್ ಎಂ.ಡಿ. ಹಾಗೂ ‘ಮದುವೆಯ ಕ್ಯಾಂಡಿಡ್ ಕ್ಷಣ’ ವಿಭಾಗದಲ್ಲಿ ಧಾರವಾಡದ ಹರ್ಷದ್ ಉದಯ್ ಕಾಮತ್ ಅವರು ಕ್ಲಿಕ್ಕಿಸಿದ ಛಾಯಾಚಿತ್ರಗಳಿಗೆ ಪ್ರಥಮ ಬಹುಮಾನ ಲಭಿಸಿದೆ.
ಸೊಸೈಟಿಯ ಸ್ಥಾಪಕ ಅಧ್ಯಕ್ಷರಾದ ಡಾ.ಡಿ.ವಿ.ರಾಯ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ 2018ನೇ ಸಾಲಿನ ಸ್ಪರ್ಧೆಗೆ 78 ಯುವ ಛಾಯಾಗ್ರಾಹಕರು (35 ವರ್ಷಗಳೊಳಗಿನವರು) ಒಟ್ಟು 400 ಛಾಯಾಚಿತ್ರಗಳನ್ನು ಕಳುಹಿಸಿಕೊಟ್ಟಿದ್ದರು. ಛಾಯಾಗ್ರಾಹಕರ ಜಿ.ಆರ್.ಪಂಡಿತ್ ತೀರ್ಪುಗಾರರಾಗಿದ್ದರು.
ಅಂತಿಮ ಸುತ್ತಿಗೆ ಆಯ್ಕೆಗೊಂಡ 110 ಛಾಯಾಚಿತ್ರಗಳ ಪ್ರದರ್ಶನ ಹಾಗೂ ಬಹುಮಾನ ವಿತರಣಾ ಸಮಾರಂಭವು ಏಪ್ರಿಲ್ ತಿಂಗಳಿನಲ್ಲಿ ಸಾಗರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.