ಹೊಸದುರ್ಗ: ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶಿವಕುಮಾರ ರಂಗಪ್ರಯೋಗ ಶಾಲೆಯ ‘ಮಧ್ಯಮ ವ್ಯಾಯೋಗ’ ನಾಟಕವು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯು 2020ರ ಜನವರಿಯಲ್ಲಿ ಹಮ್ಮಿಕೊಂಡಿರುವ 21ನೇ ಅಂತರರಾಷ್ಟ್ರೀಯ ನಾಟಕೋತ್ಸವಕ್ಕೆ ಆಯ್ಕೆಯಾಗಿದೆ.
ಕಳೆದ ಸಾಲಿನಲ್ಲಿ ಶಿವಕುಮಾರ ರಂಗಶಾಲೆಯ ‘ಅಶ್ವತ್ಥಾಮ’ ನಾಟಕ ಆಯ್ಕೆಯಾಗಿತ್ತು. ಈ ಬಾರಿ ದೇಶದ 795 ನಾಟಕಗಳಲ್ಲಿ 56 ನಾಟಕಗಳು ಮಾತ್ರ ಅಂತರರಾಷ್ಟ್ರೀಯ ನಾಟಕೋತ್ಸವಕ್ಕೆ ಆಯ್ಕೆಯಾಗಿವೆ. ‘ಮಧ್ಯಮ ವ್ಯಾಯೋಗ’ ನಾಟಕವನ್ನು ಸಂಸ್ಕೃತದ ಮಹಾಕವಿ ಭಾಸ ರಚಿಸಿದ್ದು, ಎಲ್.ಗುಂಡಪ್ಪ ಕನ್ನಡಕ್ಕೆ ಅನುವಾದಿಸಿದ್ದಾರೆ.
ಶಿವಕುಮಾರ ರಂಗಶಾಲೆಯ ಪ್ರಾಂಶುಪಾಲ ಆರ್.ಜಗದೀಶ್ ನಿರ್ದೇಶಿಸಿದ್ದು, ಶಿಕ್ಷಕ ವಿನೋದ್ ಲಕ್ಷ್ಮಣ್ ಭಂಡಾರಿ ಹಾಗೂ ಬಿ.ಜಿ. ಪ್ರತಿಭಾ ಸಹನಿರ್ದೇಶನವಿದೆ. ರಂಗಶಾಲೆಯ ಪ್ರಶಿಕ್ಷಣಾರ್ಥಿಗಳು ಅಭಿನಯಿಸುವರು. ನಾಟಕವು ಜನಪದ ಕಲೆ, ಕೇರಳದ ಕೂಡಿಯಟ್ಟಂ ಹಾಗೂ ಯಕ್ಷಗಾನ ಶೈಲಿಗಳನ್ನು ಒಳಗೊಂಡಿದೆ.
ಸತತ ಎರಡನೇ ಬಾರಿಗೆ ಅಂತರರಾಷ್ಟ್ರೀಯ ನಾಟಕೋತ್ಸವಕ್ಕೆ ಶಿವಕುಮಾರ ರಂಗಶಾಲೆಯ ನಾಟಕ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.