ಬೆಂಗಳೂರು: ಬ್ಯಾಂಕ್ ಖಾತೆಗಳಿಗೆಆಧಾರ್ ಜೋಡಣೆ ಮಾಡದ ಕಾರಣ ವಿದ್ಯಾರ್ಥಿವೇತನ ದೊರಕದೆ ಇರುವ ಸಮಸ್ಯೆ ಮುಂದುವರಿದಿದ್ದು, 2.62 ಲಕ್ಷ ಮಕ್ಕಳಿಗೆ ಈ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಡಿಡಿಪಿಐಗಳಿಗೆ ಸೂಚನೆ ನೀಡಿದ್ದಾರೆ.
ಇ–ಆಡಳಿತ ಇಲಾಖೆಯು ಬ್ಯಾಂಕ್ ಖಾತೆ–ಆಧಾರ್ ಜೋಡಣೆ ಕುರಿತು ಮಾಹಿತಿ ಕಲೆ ಹಾಕಿದಾಗ ವಿದ್ಯಾರ್ಥಿವೇತನಕ್ಕಾಗಿ ಸುಮಾರು 44 ಲಕ್ಷ ಮಕ್ಕಳು ಅರ್ಜಿ ಸಲ್ಲಿಸಿದ್ದರೂ, 38 ಲಕ್ಷ ಮಂದಿಗೆ ಮಾತ್ರ ಪೋರ್ಟಲ್ ಮೂಲಕ ವಿದ್ಯಾರ್ಥಿವೇತನ ಪಾವತಿಯಾಗಿದ್ದು ಕಂಡುಬಂದಿತ್ತು.
ಉಳಿದ ವಿದ್ಯಾರ್ಥಿಗಳ ಪೈಕಿ 2.62 ಲಕ್ಷ ಮಂದಿಯ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿಲ್ಲದ್ದನ್ನು ಕಂಡುಕೊಂಡಿತ್ತು. ಮತ್ತೆ ಕೆಲವು ಅರ್ಜಿಗಳು ತಿರಸ್ಕೃತಗೊಂಡಿರುವ ಸಾಧ್ಯತೆ ಇದೆ. ‘ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ತಪ್ಪಾಗಿದ್ದಲ್ಲಿ ತೊಂದರೆ ಕಾಣಿಸುತ್ತದೆ. ಮುಖ್ಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೆ ಹೋದರೆ ಹಣ ಜಮಾ ಆಗುವುದಿಲ್ಲ. ಇದನ್ನು ತಕ್ಷಣ ಗುರುತಿಸಿ ಮಾಹಿತಿ ನೀಡುವಂತೆ ಡಿಡಿಪಿಐಗಳಿಗೆ ಸೂಚಿಸಲಾಗಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.