ಧಾರವಾಡ: ಪಾಕಿಸ್ತಾನ ಪರ ಘೋಷಣೆ ಕೂಗಿದ, ಬೆಳಗಾವಿ ಜೈಲಿನಲ್ಲಿರುವ ಕೆಎಲ್ಇ ತಾಂತ್ರಿಕ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ಸಲ್ಲಿಕೆ ಶುಕ್ರವಾರ ಪೊಲೀಸ್ ಸರ್ಪಗಾವಲಿನಲ್ಲಿ ನಡೆಯಿತು.
ಕಳೆದ ಮಂಗಳವಾರ ಕೂಡಾ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿ ಸಿದ್ದ ಬೆಂಗಳೂರಿನ ವಕೀಲ ನರೇಂದ್ರ ತಂಡದ ಮೈತ್ರಿ ಕೃಷ್ಣನ್, ನಿಯಾಜ್ ಮತ್ತು ರಾಜೇಶ್ ಸ್ಥಳೀಯ ವಕೀಲರ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ಸಲ್ಲಿಸದೇ ಮರಳಿದ್ದರು.
ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ವಕೀಲರ ತಂಡ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಆರೋಪಿಗಳಿಂದ ವಕಾಲತ್ಗೆ ಸಹಿ ಮಾಡಿಸಿಕೊಂಡು ಮಧ್ಯಾಹ್ನ 2.30 ರವೇಳೆಗೆ ಜಿಲ್ಲಾ ನ್ಯಾಯಾಲಕ್ಕೆ ಆಗಮಿಸಿತು. ಬೆಳಿಗ್ಗೆಯಿಂದಲೇ ಪೊಲೀಸರು ನ್ಯಾಯಾಲಯಕ್ಕೆ ಬಿಗಿ ಭದ್ರತೆ ಮಾಡಿದ್ದರು. ಬೆಂಗಳೂರಿನ ವಕೀಲರನ್ನು ಹಿಂಬಾಗಿಲಿನಿಂದ ನ್ಯಾಯಾಲಯದ ಆಡಳಿತಾಧಿಕಾರಿ ಕಚೇರಿಗೆ ಕರೆದುಕೊಂಡು ಹೋದರು.
ಬಿಜೆಪಿ ಕಾಯಕರ್ತರಿಂದ ‘ಗೋ ಬ್ಯಾಕ್’ ಘೋಷಣೆ: ಬೆಂಗಳೂರಿನಿಂದ ಬಂದಿದ್ದ ವಕೀಲರನ್ನು ಜಿಲ್ಲಾ ನ್ಯಾಯಾಲಯದ ಹಿಂಬಾಗಿಲಿನ ಮೂಲಕ ಪೊಲೀಸರು ಕರೆತರುವ ಸಂದರ್ಭದಲ್ಲಿ ‘ಗೋ ಬ್ಯಾಕ್’, ‘ಭಾರತ ಮಾತಾ ಕಿ ಜೈ’ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.