ಬೆಂಗಳೂರು: ‘ವಿಶ್ವವಿದ್ಯಾಲಯಗಳ ನೇಮಕಾತಿಗಳಲ್ಲಿ ಬಲಪಂಥೀಯರಿಗೆ ಆದ್ಯತೆ ನೀಡುವ ಮೂಲಕ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ಈಗ ವಿಶ್ವವಿದ್ಯಾಲಯ ಪ್ರವೇಶಿಸುತ್ತಿರುವ ಬಲಪಂಥೀಯರು ಪೈಕಿ ಎಲ್ಲರೂ ವಿದ್ವಾಂಸರಲ್ಲ. ಅವರಲ್ಲಿ ಕೆಲವರು ಅರೆ ರಾಜಕೀಯ ತಜ್ಞರು ಹಾಗೂ ಕೆಲವರು ಗೂಂಡಾಗಳು’ ಎಂದು ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಪುರುಷೋತ್ತಮ ಬಿಳಿಮಲೆ ಟೀಕಿಸಿದರು.
ನಗರದಲ್ಲಿ ಶನಿವಾರ ನಡೆದ ಭಾರತ ವಿದ್ಯಾರ್ಥಿ ಫೆಡರೇಷನ್ನ (ಎಸ್ಎಫ್ಐ) ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಹಾಳು ಮಾಡಲಾಗುತ್ತಿದೆ. ದೇಶಪ್ರೇಮವನ್ನು ಪಾಠ ಮಾಡಬೇಕು ಎಂಬ ಕಾರ್ಯಸೂಚಿಯನ್ನು ಯುಜಿಸಿ ತಯಾರು ಮಾಡುತ್ತಿದೆ. ಅತ್ಯಂತ ಕಳಪೆಯಾದ ಸುಳ್ಳು ಪಠ್ಯಕ್ರಮಗಳನ್ನು ಅಳವಡಿಸುವ ಕೆಲಸವೂ ನಡೆಯುತ್ತಿದೆ’ ಎಂದರು.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ‘ದೇಶದಲ್ಲಿ ಎರಡು ತಿಂಗಳಿಂದ 60 ವಿಶ್ವವಿದ್ಯಾಲಯಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಆದರೆ, ಬೆಂಗಳೂರಿನ ವಿಶ್ವವಿದ್ಯಾಲಯಗಳಲ್ಲಿ ಇಂತಹ ಪ್ರತಿಭಟನೆ ನಡೆದಿಲ್ಲ’ ಎಂದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ‘ಶಿಕ್ಷಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕೊಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿಯೂ ಖಾಸಗಿಯವರಿಗೆ ರತ್ನಗಂಬಳಿ ಹಾಸಲಾಗುತ್ತಿದೆ’ ಎಂದರು.