ತುಮಕೂರು: ಸಿದ್ಧಗಂಗಾಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಸ್ವಾಮೀಜಿಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಕಡೆಯ ಭಕ್ತರು ಬಂದಿದ್ದಾರೆ.
ಬೆಳಿಗ್ಗೆ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಮಠದಲ್ಲಿ ವಿಶೇಷ ಪೂಜೆ ನಡೆದವು.
10:30ಕ್ಕೆ ಮಠದ ಆವರಣದಲ್ಲಿರುವ ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.
ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದಕ್ಕೂ ಪೂರ್ವದಲ್ಲಿ ಮಠದ ಆವರಣದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರ ಮೆರವಣಿಗೆ ನಡೆಯಲಿದೆ.
ಸಿದ್ಧಗಂಗಾಮಠದಲ್ಲಿ ಪ್ರಸಾದ ತಯಾರಿಯನ್ನುಸಿದ್ಧಲಿಂಗ ಸ್ವಾಮೀಜಿ ಪರಿಶೀಲಿಸಿದರು. ಬೆಳಿಗ್ಗೆ ಉಪಾಹಾರಕ್ಕೆ ಸಿಹಿ ಪೊಂಗಲ್, ಖಾರಾ ಪೊಂಗಲ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟಕ್ಕೆಬೂಂದಿ, ಪಾಯಸ, ಜಾಂಗೀರ್, ಚಿತ್ರಾನ್ನ, ಅನ್ನ ಸಾಂಬಾರು, ಮೊಸರನ್ನ, ಪಲ್ಯ, ತುಪ್ಪ ಇರಲಿದೆ.
ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಕ್ಷಣಗಣನೆ. ವೇದಿಕೆಯ ಮೇಲಿರುವ ಶಿವಕುಮಾರ ಸ್ವಾಮೀಜಿ ಅವರ ಕಂಚಿನ ಪುತ್ಥಳಿ ಗಮನ ಸೆಳೆಯುತ್ತಿದೆ. ನಾಡಿನ ವಿವಿಧ ಮಠಗಳ ಮಠಾಧೀಶರು, ವಿವಿಧ ಕಡೆಗಳಿಂದ ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯಿಂದ ಭಾವಚಿತ್ರದ ಮೆರವಣಿಗೆ ಹೊರಟಿದೆ. ಮೆರವಣಿಗೆ ಜೊತೆ ಬಿ.ಎಸ್.ಯಡಿಯೂರಪ್ಪ ಹಾಗೂ ಗಣ್ಯರು ಇದ್ದಾರೆ.
ಮೃತ್ಯುಂಜಯ ದೊಡ್ಡವಾಡ ಅವರಿಂದ ವಚನ ಗಾಯನ. ಮಠದ ಆವರಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ವಿಐಪಿ ಪ್ರವೇಶದಲ್ಲಿ ಕಿರಿಕಿರಿ: ಗಣ್ಯರು ವೇದಿಕೆಗೆ ಬರುವ ದಾರಿಯಲ್ಲಿ ಪೊಲೀಸರು ಮತ್ತು ಗಣ್ಯರ ಹಿಂಬಾಲಕರ ನಡಯವೆ ಕಿರಿಕಿರಿ ಉಂಟಾಗಿದೆ. ಗಣ್ಯರು ಒಬ್ಬರ ಹಿಂದೊಬ್ಬರು ವೇದಿಕೆಗೆ ಬರುತ್ತಿದ್ದಾರೆ. ಈ ವೇಳೆ ಅವರ ಹಿಂಬಾಲಕರನ್ನು ಪೊಲೀಸರು ತಡೆದಿದ್ದು, ಪೊಲೀಸರು ಮತ್ತು ಹಿಂಬಾಲಕರ ನಡುವೆ ಕೆಲ ಕಾಲವಾಗ್ವಾದ ನಡೆದಿದೆ.