ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್ ಪಾಲಿನ ಸಚಿವ ಸ್ಥಾನಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂಬ ಒತ್ತಡ ಹೇರಲು ಶಾಸಕರ ದಂಡು ಮುಂಬಯಿ ಯಾತ್ರೆ ಹೊರಟಿದೆ.
ವಿಧಾನ ಮಂಡಲ ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ಆಗಲಿದೆ ಎಂದು ರಾಜ್ಯ ನಾಯಕರು ಪ್ರತಿಪಾದಿಸುತ್ತಿದ್ದಾರೆ . ಡಿಸೆಂಬರ್ 5ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಕೂಡ ಈ ವಿಷಯ ಚರ್ಚೆಗೆ ಬರಲಿದೆ ಎನ್ನಲಾಗಿದೆ.
ಆದರೆ, ಲೋಕಸಭೆ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆಯೆಂಬ ಜೇನುಗೂಡಿಗೆ ಕೈ ಹಾಕುವುದು ಬೇಡ ಎಂಬುದು ಹೈಕಮಾಂಡ್ ಚಿಂತನೆ ಎಂದು ಹೇಳಲಾಗುತ್ತಿದೆ. ಈ ಸುಳಿವು ಅರಿತಿರುವ ಸಚಿವ ಸ್ಥಾನ ಆಕಾಂಕ್ಷಿಗಳು ಒಂದು ಗುಂಪಾಗಿದ್ದುಕೊಂಡು, ರಾಜ್ಯ ನಾಯಕರ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.
ಡಿಸೆಂಬರ್ 10 ರಿಂದ ಅಧಿವೇಶನ ಆರಂಭವಾಗಲಿದ್ದು, ಈ ಹೊತ್ತಿನಲ್ಲಿ ಕಲಾಪದಿಂದ ದೂರ ಉಳಿಯುವುದು, ಮಸೂದೆಗಳನ್ನು ಮತ ಹಾಕಿದಾಗ ಬಹುಮತ ಇಲ್ಲದಂತೆ ಮಾಡಿ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುವುದಾಗಿ ಪರೋಕ್ಷ ಬೆದರಿಕೆ ಹಾಕುವುದು ಯಾತ್ರೆಯ ಉದ್ದೇಶ ಎನ್ನಲಾಗಿದೆ.
ಸಚಿವ ಸ್ಥಾನ ಆಕಾಂಕ್ಷಿಗಳಾದ ಡಾ.ಸುಧಾಕರ್,ಎಂ.ಟಿ.ಬಿ. ನಾಗರಾಜ್, ಟಿ.ರಘುಮೂರ್ತಿ ಈ ಗುಂಪಿನ ನೇತೃತ್ವ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.