ನವದೆಹಲಿ:‘ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧರಿಸಬೇಕು’ ಎಂದು ಸುಪ್ರೀಂಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ಸಂವಿಧಾನದ 190ನೇ ವಿಧಿ ಅನ್ವಯ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ನಿರ್ಣಯಿಸಬೇಕು. ಅದಕ್ಕೆ ಕಾಲಮಿತಿ ನಿಗದಿಗೊಳಿಸಿಲ್ಲ. ಹಾಗಾಗಿ ರಾಜೀನಾಮೆ ಕುರಿತು ಮಧ್ಯಸ್ಥಿಕೆ ವಹಿಸುವುದಿಲ್ಲ. ಶಾಸಕರನ್ನು ಅಧಿವೇಶನದಲ್ಲಿ ಭಾಗವಹಿಸುವಂತೆ ಒತ್ತಾಯ ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಗಳ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ವಿಸ್ತೃತ ಪರಮಾರ್ಶೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ‘ಸೂಕ್ತ ನಿರ್ದಿಷ್ಟ ಕಾಲಮಿತಿ’ಯಲ್ಲಿ ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ವಿಚಾರ ಇತ್ಯರ್ಥಪಡಿಸಬೇಕು ಎಂದು ಸುಪ್ರೀಂಕೋರ್ಟ್ ಇಂದು ತನ್ನ ಮಧ್ಯಂತರ ತೀರ್ಪಿನಲ್ಲಿ ನಿರ್ದೇಶಿಸಿತು.
ಆದರೆ ನಿರ್ದಿಷ್ಟ ಕಾಲಮಿತಿಯನ್ನು ವಿವರಿಸಲು ಕೋರ್ಟ್ ಹಿಂಜರಿಯಿತು. ರಾಜೀನಾಮೆ ನೀಡಿರುವ 15 ಮಂದಿ ಶಾಸಕರನ್ನು ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತೆ ಇಲ್ಲ ಎಂದು ನ್ಯಾಯಾಲಯ ಆದೇಶ ಮಾಡಿತು.
ಈ ಪ್ರಕರಣದಲ್ಲಿ ಸಾಕಷ್ಟು ಸೂಕ್ಷ್ಮ ಅಂಶಗಳು ಇವೆ. ಉತ್ತರ ಕಂಡುಕೊಳ್ಳಬೇಕಾದ ಕಾನೂನಿಗೆ ಸಂಬಂಧಿಸಿದ ಹಲವು ಕಾನೂನಾತ್ಮಕಪ್ರಶ್ನೆಗಳು ಇವೆ. ಮುಂದಿನ ಹಂತದಲ್ಲಿ ವಿಸ್ತೃತ ಪರಾಮರ್ಶೆಯ ಅಗತ್ಯವಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠ ಈ ತೀರ್ಪನ್ನು ಓದಿತು.
ಅತೃಪ್ತರ ಪರವಕೀಲರಾದ ಮುಕುಲ್ ರೋಹಟಗಿ, ಸ್ಪೀಕರ್ ರಮೇಶ್ಕುಮಾರ್ ಅವರನ್ನು ವಕೀಲ ಅಭಿಷೇಕ್ ಮನು ಸಿಂಘ್ವಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಕೀಲ ರಾಜೀವ್ ಧವನ್ ಪ್ರತಿನಿಧಿಸಿದ್ದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಟಿಕೆಟ್ನಿಂದ ಆಯ್ಕೆಯಾಗಿದ್ದ ಕರ್ನಾಟಕದ10 ಶಾಸಕರು ತಮ್ಮ ರಾಜೀನಾಮೆಯನ್ನು ಅಂಗೀಕರಿಸಲುಸ್ಪೀಕರ್ ತಡ ಮಾಡುತ್ತಿದ್ದಾರೆ ಎಂದು ದೂರಿಜುಲೈ 10ರಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಜುಲೈ 11ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಅತೃಪ್ತ ಶಾಸಕರ ರಾಜೀನಾಮೆ ವಿಚಾರದ ಬಗ್ಗೆ ಶೀಘ್ರ ಪರಿಶೀಲನೆ ನಡೆಸುವಂತೆ ಸ್ಪೀಕರ್ ರಮೇಶ್ಕುಮಾರ್ ಅವರಿಗೆ ನಿರ್ದೇಶಿಸಿತ್ತು.
ಆದೇಶ ಮರುಪರಿಶೀಲಿಸಬೇಕು ಎಂದು ಕೋರಿ ಸ್ಪೀಕರ್ ರಮೇಶ್ಕುಮಾರ್ ಸುಪ್ರೀಂಕೋರ್ಟ್ಗೆ ಮನವಿ ಮಾಡಿದರು. ಸಂವಿಧಾನದ 190 (1) (ಬಿ) ಪರಿಚ್ಛೇದದ ಅನ್ವಯ ರಾಜೀನಾಮೆ ಪತ್ರಗಳನ್ನು ಕೂಲಂಕಶ ಪರಿಶೀಲನೆಯ ನಂತರವೇ ರಾಜೀನಾಮೆ ಪತ್ರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. 1974ರಸಂವಿಧಾನ(33ನೇ) ತಿದ್ದುಪಡಿ ಅನ್ವಯ ರಾಜೀನಾಮೆಯನ್ನು ಸ್ವಯಂಪ್ರೇರಿತವಾಗಿ ಸಲ್ಲಿಸಲಾಗಿದೆ ಮತ್ತು ಅವುಮೌಲಿಕವಾಗಿವೆ ಸ್ಪೀಕರ್ಗೆ ಮನವರಿಕೆಯಾದ ನಂತರವೇ ಅಂಗೀಕರಿಸಲು ಸಾಧ್ಯ ಎಂದು ರಮೇಶ್ಕುಮಾರ್ ತಮ್ಮ ಅರ್ಜಿಯಲ್ಲಿ ಹೇಳಿದ್ದರು.
ಜುಲೈ 12ರಂದು ಪ್ರಕರಣ ವಿಚಾರಣೆಗೆ ಬಂದಾಗ ಶಾಸಕರ ರಾಜೀನಾಮೆ ಮತ್ತು ಅನರ್ಹಗೊಳಿಸುವಪ್ರಕ್ರಿಯೆಯಲ್ಲಿಸ್ಪೀಕರ್ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದುಸೂಚಿಸಿತು. ಸಂವಿಧಾನದ 164, 190 ಮತ್ತು 361 ಪರಿಚ್ಛೇದಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ಹೀಗಾಗಿ ಸುದೀರ್ಘ ವಿಚಾರಣೆಅಗತ್ಯ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಈಗಾಗಲೇ ರಾಜೀನಾಮೆ ಕೊಟ್ಟಿರುವವರು ಸಲ್ಲಿಸಿರುವ ಅರ್ಜಿಯ ಜೊತೆಗೆ ನಮ್ಮ ಅರ್ಜಿಯನ್ನೂ ವಿಚಾರಣೆಗೆಪರಿಗಣಿಸಬೇಕು ಎಂದು ಐವರು ಅತೃಪ್ತರು ಕಳೆದ ಶನಿವಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.