ಮಂಡ್ಯ: ಕಟಾವಿಗೆ ಬಂದಿದ್ದ ಟೊಮೆಟೊ, ಬೀನ್ಸ್ ಮಾರಾಟವಾಗದ ಕಾರಣ ಮನನೊಂದ ಪಾಂಡವಪುರ ತಾಲ್ಲೂಕು, ಹೊಸಹಳ್ಳಿ ಗ್ರಾಮದ ರೈತರೊಬ್ಬರು ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಮೇಗೌಡ (60) ಆತ್ಮಹತ್ಯೆ ಮಾಡಿಕೊಂಡ ರೈತ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಹಾಕಿಕೊಂಡಿದ್ದಾರೆ. ಲಾಕ್ಡೌನ್ನಿಂದಾಗಿ ಒಂದು ಎಕರೆ ಹೊಲದಲ್ಲಿ ಬೆಳೆದಿದ್ದ ಟೊಮೆಟೊ, ಬೀನ್ಸ್ ಮಾರಾಟವಾಗಿರಲಿಲ್ಲ. ಖರೀದಿಗೆ ವರ್ತಕರು ಬರುತ್ತಿಲ್ಲ ಎಂದು ಮನನೊಂದಿದ್ದರು.
ಪಾಂಡವಪುರ ಪಿ.ಎಲ್.ಡಿ ಬ್ಯಾಂಕ್, ನಾರಾಯಣಪುರ ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿ ತಲಾ ₹ 1 ಲಕ್ಷ ಸೇರಿ 4 ಲಕ್ಷದವರೆಗೆ ಸಾಲ ಮಾಡಿಕೊಂಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
‘ರಾಮೇಗೌಡರು ತೋಟಗಾರಿಕೆ ಇಲಾಖೆಯ ಗಮನಕ್ಕೆ ತಂದಿದ್ದರೆ ನಾವೇ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಿದ್ದೆವು. ಮುಂದೆ ಯಾವುದೇ ರೈತ ಆತ್ಮಹತ್ಯೆ ಬಗ್ಗೆ ಚಿಂತಿಸದೆ ನಮ್ಮ ಗಮನಕ್ಕೆ ತರಬೇಕು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಎಸ್.ರಾಜು ತಿಳಿಸಿದರು. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.