ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕಿತ ಉಗ್ರರಿಗೆ ನೇಪಾಳದಲ್ಲಿ ತರಬೇತಿ: ವಿಚಾರಣೆಯಿಂದ ಬಯಲು

‘ಐಎಸ್‌’ ಜೊತೆ ‘ಅಲ್‌–ಹಿಂದ್’ ನಂಟು
Last Updated 15 ಜನವರಿ 2020, 3:03 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟು ಹಾಕಲು ಹಾಗೂ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿರುವ 16ಕ್ಕೂ ಹೆಚ್ಚು ಶಂಕಿತ ಉಗ್ರರು ನೇಪಾಳದಲ್ಲಿ ತರಬೇತಿ ಪಡೆದಿರುವ ಮಾಹಿತಿ ಹೊರಬಿದ್ದಿದೆ.

ತಮಿಳುನಾಡು ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಜಂಟಿಯಾಗಿ ಮೂವರು ಶಂಕಿತ ಉಗ್ರರನ್ನು ಇತ್ತೀಚೆಗೆ ಬಂಧಿಸಿದ್ದರು. ಅವರ ವಿಚಾರಣೆಯಿಂದ ಈ ಸಂಗತಿ ಬಯಲಿಗೆ ಬಂದಿದೆ.

ಶಂಕಿತ ಉಗ್ರ ಮೆಹಬೂಬ್ ಪಾಷಾ ಹಾಗೂ ಆತನ 16 ಸಹಚರರ ವಿರುದ್ಧ ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗ, ರಾಮನಗರ, ಕೋಲಾರ ಹಾಗೂ ಬೆಂಗಳೂರಿನಲ್ಲೇ ಶಂಕಿತ ಉಗ್ರರು ತಲೆಮರೆಸಿಕೊಂಡು ಓಡಾಡುತ್ತಿರುವ ಮಾಹಿತಿ ಲಭಿಸಿದ್ದು, ಅವರ ಬಂಧನಕ್ಕೂ ಜಂಟಿ ಕಾರ್ಯಾಚರಣೆ ಈಗಾಗಲೇ ಆರಂಭವಾಗಿದೆ.

‘ಶಂಕಿತ ಉಗ್ರರ ಪೈಕಿ ಹಲವರು ನೇಪಾಳದಲ್ಲಿ ತರಬೇತಿ ಪಡೆದಿದ್ದಾರೆ. ಅಲ್ಲಿಯೇ ಅವರಿಗೆ ಐಎಸ್ ಉಗ್ರರ ಸಂಪರ್ಕ ಲಭಿಸಿದೆ. ಕಚ್ಚಾ ವಸ್ತುಗಳನ್ನು ಬಳಸಿ ಸ್ಫೋಟಕ ತಯಾರಿಸುವ ಹಾಗೂ ಆತ್ಮಾಹುತಿ ಬಾಂಬರ್ ಆಗುವ ಬಗ್ಗೆ ತರಬೇತಿಯನ್ನು ಐಎಸ್ ಉಗ್ರರಿಂದಲೇ ಕಲಿತುಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಉತ್ತರಪ್ರದೇಶದ ಗೋರಖ್‌ಪುರಕ್ಕೆ ಹೋಗಿದ್ದ ಶಂಕಿತ ಉಗ್ರರು, ಅಲ್ಲಿಂದಲೇ ವ್ಯಾನ್‌ನಲ್ಲಿ ನೇಪಾಳ ಪ್ರವೇಶಿಸಿದ್ದರು. ತರಬೇತಿ ಮುಗಿಸಿಕೊಂಡು ಅದೇ ಮಾರ್ಗವಾಗಿ ವಾಪಸ್‌ ದೇಶಕ್ಕೆ ಬಂದಿದ್ದರು. ಬೆಂಗಳೂರನ್ನೇ ಕೇಂದ್ರವಾಗಿಸಿಕೊಂಡು ತಂಡದ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುತ್ತಿದ್ದರು’ ಎಂದು ತಿಳಿಸಿವೆ.

‘ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಲೋಮನ್‌ ಸಂಘಟನೆಯನ್ನು ಹಲವು ವರ್ಷಗಳ ಹಿಂದೆಯೇ ನಿಷೇಧಿಸಲಾಗಿದೆ. ಅದರದ್ದೇ ಸದಸ್ಯರು ‘ಅಲ್‌–ಹಿಂದ್‌’ ಸಂಘಟನೆ ಕಟ್ಟಿಕೊಂಡಿದ್ದಾರೆ. ಇದು ‘ಐಎಸ್‌’ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದೆ’ ಎಂದು ಮೂಲಗಳು ತಿಳಿಸಿವೆ.

ಮತ್ತೆ ಮೌಲ್ವಿ ವಿಚಾರಣೆ

ಚಾಮರಾಜನಗರ: ಶಂಕಿತ ಭಯೋತ್ಪಾದಕರ ಚಲನವಲನಗಳಿಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪಟ್ಟಣ ವ್ಯಾಪ್ತಿಯ ಮೌಲ್ವಿಯೊಬ್ಬರನ್ನು ಭಾನುವಾರ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದ ಬೆಂಗಳೂರಿನ ಪೊಲೀಸರು, ಮಂಗಳವಾರ ಮತ್ತೆ ವಿಚಾರಣೆಗಾಗಿ ಕರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT