ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಮಾತು ಕೇಳುವುದೋ, ಜನರ ಮಾತು ಕೇಳುವುದೋ?:ಯು. ಬಿ. ಬಣಕಾರ ಪ್ರಶ್ನೆ

Last Updated 1 ಡಿಸೆಂಬರ್ 2019, 13:13 IST
ಅಕ್ಷರ ಗಾತ್ರ

ಹಾವೇರಿ: ‘ಬಿ.ಸಿ.ಪಾಟೀಲರಿಗೆ ಕೈಲಾದಷ್ಟು ಸಹಾಯ ಮಾಡಿ’ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ, ‘ನೀವು ಚುನಾವಣೆಗೆ ಸ್ಪರ್ಧಿಸಲೇಬೇಕು’ ಎಂದು ಮತದಾರರು ಒತ್ತಾಯಿಸುತ್ತಿದ್ದಾರೆ. ಈಗ ಪ್ರಭುಗಳ ಮಾತು ಕೇಳುವುದೋ? ಜನರ ಮಾತು ಕೇಳುವುದೋ ತಿಳಿಯದೆ ಧರ್ಮಸಂಕಟದಲ್ಲಿದ್ದೇನೆ...

ಹಿರೇಕೆರೂರು ಕ್ಷೇತ್ರದ ಬಿಜೆಪಿ ಮುಖಂಡ ಯು.ಬಿ.ಬಣಕಾರ ತಮ್ಮ ಸ್ಥಿತಿಯನ್ನು ಈ ಮೇಲಿನ ರೀತಿ ವಿವರಿಸಿದರು. ಕ್ಷೇತ್ರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದ ಬಣಕಾರ ಬೆಂಬಲಿಗರು, ‘ನಮಗೆ ಬಿಜೆಪಿಯೂ ಬೇಡ. ಕಾಂಗ್ರೆಸ್ಸೂ ಬೇಡ. ಪಕ್ಷೇತರರಾಗಿಯೇ ಶಕ್ತಿ ಪ್ರದರ್ಶಿಸುತ್ತೇವೆ’ ಎಂದು ಘೋಷಣೆ ಕೂಗಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಬಣಕಾರ, ‘ಮಂಗಳವಾರ ಯಡಿಯೂರಪ್ಪ ಸಭೆಕರೆದಿದ್ದರು. ಪಾಟೀಲರು ಅಭ್ಯರ್ಥಿಯಾದರೆ ಅವರನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಅವರ ಮಾತಿಗೆ ಬೆಲೆ ಕೊಡಲು ಸಿದ್ಧನಿದ್ದೇನೆ. ಆದರೆ, ‘ನಮ್ಮನ್ನು ಕೊಲ್ಲಲು ನಿರ್ಧರಿಸಿದ್ದೀರಾ? ಹೊಟ್ಟೆಗೆ ವಿಷ ಹಾಕಿ ಹೋಗ್ತೀರಾ’ ಎಂದು ಇಲ್ಲಿನ ಮತದಾರರು ಕೇಳುತ್ತಿದ್ದಾರೆ. ಏನೆಂದು ಉತ್ತರಿಸಲಿ’ ಎಂದರು.

‘ನಾನು ಹಾಗೂ ಪಾಟೀಲರು ಪರಸ್ಪರ 4 ಚುನಾವಣೆಗಳನ್ನು ಎದುರಿಸಿದ್ದೇವೆ. ಇದು ಸುದೈವವೋ, ದುರ್ದೈವವೋ ಗೊತ್ತಿಲ್ಲ. ನಾವೇ ಒಂದು ಅಥವಾ ಎರಡನೇ ಸ್ಥಾನದಲ್ಲಿ ಉಳಿಯುತ್ತ ಬಂದಿದ್ದೇವೆ. ಅಷ್ಟೊಂದು ಜಿದ್ದಾಜಿದ್ದಿ ಇರುವಾಗ ಅವರಿಗೇ ಕ್ಷೇತ್ರ ಬಿಟ್ಟುಕೊಡಲು ನನ್ನ ಬೆಂಬಲಿಗರು ಬಿಡುತ್ತಾರ?ನಾಯಕರು ಹೊಂದಾಣಿಕೆ ಮಾಡಿಕೊಂಡರೆ, ಮತದಾರರೂ ಹೊಂದಿಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು.

‘ನಾಮಪತ್ರ ಸಲ್ಲಿಸಲು ಸೋಮವಾರದವರೆಗೆ ಸಮಯವಿದೆ.ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದರೆ ಕ್ಷೇತ್ರದಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಸ್ಥಿತಿ ಇದೆ. ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ. ಜಿಲ್ಲೆಯ ಉಸ್ತುವಾರಿ ಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಎಲ್ಲ ನಾಯಕರನ್ನೂ ಇಲ್ಲಿಗೇ ಕರೆತರುತ್ತೇನೆ. ಅವರೇ ಮತದಾರರ ಮನವೊಲಿಸಲಿ’ ಎಂದೂ ಬಣಕಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT