ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯಕ್ಕೆ ದೌರ್ಜನ್ಯವೇ ಉತ್ತರ: ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ

Last Updated 18 ಡಿಸೆಂಬರ್ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ದಲಿತರ ಮೇಲೆ ದೌರ್ಜನ್ಯ ನಡೆದರೆ ಮರು ದೌರ್ಜನ್ಯಕ್ಕೆ ನಾವೂ ಸಿದ್ಧರಿದ್ದೇವೆ ಎಂಬ ಭಯವನ್ನು ಹುಟ್ಟುಹಾಕಿದರೆ ಮಾತ್ರ ಇಂತಹ ಪ್ರಕರಣಗಳು ನಿಲ್ಲಲಿವೆ’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ’ ಹಾಗೂ ‘ಕರ್ನಾಟಕದಲಿತ ಮಹಿಳಾ ವೇದಿಕೆ’ ಸಿದ್ಧಪಡಿಸಿರುವ ಈ ವಾರ್ಷಿಕ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೆ.ಆರ್.ನಗರದ ಸಾಲಿಗ್ರಾಮದಲ್ಲಿ ದಲಿತರ ಮೇಲೆ ಇತ್ತೀಚೆಗೆ ದೌರ್ಜನ್ಯ ನಡೆದಿದೆ. ದೌರ್ಜನ್ಯ ನಡೆಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ 24 ಗಂಟೆಯಲ್ಲಿ ನಾವೂ ಅದೇ ರೀತಿಯ ದೌರ್ಜನ್ಯ ನಡೆಸುತ್ತೇವೆ ಎಂಬ ಹೇಳಿಕೆ ನೀಡಿದೆವು. ಕೂಡಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗ್ರಾಮಕ್ಕೆ ಹೋಗಿ ಪರಿಸ್ಥಿತಿ ಅವಲೋಕಿಸಿದರು. ಈ ರೀತಿಯ ಭಯ ಹುಟ್ಟಿಸುವ ಕೆಲಸ ಮಾಡಬೇಕಿದೆ’ ಎಂದರು.

ಇದಕ್ಕೆ ಧ್ವನಿಗೂಡಿಸಿದ ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಎಲ್‌.ಹನುಮಂತಯ್ಯ, ‘ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಅಂಕಿ–ಅಂಶ ಬಿಡುಗಡೆ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ. ‍ದೌರ್ಜನ್ಯ ನಡೆಸಿದವರಿಗೆ ಜಾಮೀನು ನೀಡಬಾರದು ಎಂದು ಕಾಯ್ದೆಯಲ್ಲಿ
ದ್ದರೂ, ನ್ಯಾಯಾಲಯಗಳು ಜಾಮೀನು ನೀಡುತ್ತಿವೆ. ಆರೋಪಿಗಳನ್ನು ಬಂಧಿಸುವ ಬದಲು ಪೊಲೀಸರೇ ಜಾಮೀನು ಪಡೆದು ಬರುವಂತೆ ವಾಪಸ್ ಕಳುಹಿಸುತ್ತಾರೆ. ಹೀಗಾಗಿಯೇ ದೌರ್ಜನ್ಯಗಳು ಇನ್ನೂ ನಿಂತಿಲ್ಲ’ ಎಂದರು.

‘ಈ ಕಾರಣದಿಂದಲೇ ಅಂಬೇಡ್ಕರ್ ಅವರು ಸಮತಾ ಸೈನಿಕ ದಳವನ್ನು ಕಟ್ಟಿದ್ದರು. ಅದೇ ಮಾರ್ಗವನ್ನು ಸಂಘಟನೆಗಳು ಈಗ ಅನುಸರಿಸಬೇಕಿದೆ. ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 100 ಯುವಕರ ಪಡೆಯನ್ನು ಹುಟ್ಟುಹಾಕಬೇಕು. ತಾಲ್ಲೂಕಿನ ಯಾವುದೇ ದಲಿತರ ಮೇಲೆ ದೌರ್ಜನ್ಯ ನಡೆದರೆ ಮರು ದೌರ್ಜನ್ಯ ನಡೆಯುತ್ತದೆ ಎಂಬ ಭೀತಿಯನ್ನು ಹುಟ್ಟುಹಾಕಿ. ದೌರ್ಜನ್ಯ ಪ್ರಕರಣಗಳು ತಾನಾಗಿಯೇ ಕಡಿಮೆಯಾಗುತ್ತವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT