ಬಳ್ಳಾರಿ: ‘ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದರಿಂದ ನನಗೆ ಅನ್ಯಾಯವಾಗಿದೆ’ ಎಂದು ಅಭ್ಯರ್ಥಿ ಹಾಗೂ ಅದೇ ವಿಭಾಗದ ಅತಿಥಿ ಉಪನ್ಯಾಸಕಿ ಬಿ. ಶ್ರೀವಾಣಿ ಆರೋಪಿಸಿದ್ದಾರೆ.
‘ವಿಭಾಗದ ಎರಡು ಹುದ್ದೆಗಳ ಪೈಕಿ ಒಂದು ಸಾಮಾನ್ಯ ವರ್ಗಕ್ಕೆ ಮತ್ತು ಇನ್ನೊಂದು ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. 21 ಮಂದಿಯ ಸಂದರ್ಶನ ನಡೆದಿತ್ತು. ಸಾಮಾನ್ಯ ವರ್ಗದಲ್ಲಿದ್ದ ನಾನು ಸಂದರ್ಶನ ಹೊರತುಪಡಿಸಿ ಮಿಕ್ಕೆಲ್ಲ ವಿಷಯಗಳಲ್ಲಿ ಅತ್ಯಧಿಕ ಅಂಕ ಪಡೆದಿದ್ದೆ. ಆದರೆ ನನಗಿಂತ ಕಡಿಮೆ ಅಂಕ ಪಡೆದಿದ್ದ ಪರಿಶಿಷ್ಟ ಜಾತಿಯ ಎಂ.ಸಿದ್ದೇಶ್ವರಿ ಅವರಿಗೆ ನೇಮಕ ಪತ್ರ ನೀಡಲಾಗಿದೆ. ಸಂದರ್ಶನದ ಪ್ರಕ್ರಿಯೆಯ ವಿಡಿಯೊ ಬಹಿರಂಗಪಡಿಸಬೇಕು' ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅಕ್ರಮ ನಡೆದಿಲ್ಲ: ‘ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ. ಸಾಮಾನ್ಯ ಎಂದು ಘೋಷಣೆಯಾಗಿರುವ ಹುದ್ದೆಗೆ, ಅರ್ಹರಾದ ಯಾವ ವರ್ಗದವರನ್ನು ಬೇಕಾದರೂ ನೇಮಕ ಮಾಡಬಹುದು. ಆಯ್ಕೆಪಟ್ಟಿಯನ್ನು ಪ್ರಕಟಿಸಲೇಬೇಕು ಎಂಬ ನಿಯಮವಿಲ್ಲ’ ಎಂದು ಕುಲಪತಿ ಪ್ರೊ.ಎಂ.ಎಸ್.ಸುಭಾಷ್ ಪ್ರತಿಕ್ರಿಯೆ ನೀಡಿದರು.