ಮಂಗಳೂರು: ‘ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಾಯ್ದೆಗಳ ಹಿಂದಿನ ಮನೋಧರ್ಮವು ಆತಂಕ ಉಂಟು ಮಾಡುತ್ತಿದೆ’ ಎಂದು ಹಿರಿಯ ಸಾಹಿತಿ ನಾ.ಡಿಸೋಜ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇಶದಲ್ಲಿನ ಸದ್ಯದ ಪರಿಸ್ಥಿತಿ ನೋಡಿದರೆ, ದೀಪ ಆರುವ ಮುನ್ನ ಜೋರಾಗಿ ಉರಿಯುವಂತೆ ಭಾಸವಾಗುತ್ತದೆ. ಆದರೆ, ಅದು ಬೆಳಕಾಗಬೇಕೇ ಹೊರತು ಬೆಂಕಿಯಾದರೆ ದೇಶಕ್ಕೇ ನಷ್ಟ’ ಎಂದು ಮಾರ್ಮಿಕವಾಗಿ ನುಡಿದರು.
‘ಈ ಹಿಂದೆಲ್ಲ ಇಂತಹ ಸಂದರ್ಭ ಬಂದಾಗ ಅಡಿಗರು, ಕಾರಂತರಂತಹ ಸಾಹಿತಿಗಳು ದನಿ ಎತ್ತುತ್ತಿದ್ದರು. ಆದರೆ, ಈಗ ಸಾಹಿತ್ಯ ವಲಯವೇ ಪ್ರಶಸ್ತಿ, ಅಕಾಡೆಮಿಗಳಂತಹ ಪ್ರಲೋಭನೆಗೆ ಒಳಗಾಗುತ್ತಿದೆ. ಜ್ಞಾನಕ್ಕಿಂತ ಬೇರೆ ವಿಷಯಗಳೇ ಜಾಸ್ತಿಯಾಗಿದೆ’ ಎಂದು ಟೀಕಿಸಿದರು.
‘ಸಂದಿಗ್ಧ ಸ್ಥಿತಿಯಲ್ಲಿ ಸಾಹಿತಿಗಳು ಮಾತನಾಡುತ್ತಾರೆ’ ಎಂಬ ನಂಬಿಕೆ ಸಮಾಜದಲ್ಲಿ ಇತ್ತು. ಆದರೆ, ಇಂದು ಕೆಲವರು ಮಾತುಕತೆ ನಡೆಸುತ್ತಾರೆ. ಪ್ರಲೋಭನೆಗೆ ಒಳಗಾಗಿರುವ ತಮ್ಮ ಉದ್ದೇಶದ ಈಡೇರಕೆಗಾಗಿ’ ಎಂದು ಲೇವಡಿ ಮಾಡಿದರು.
‘ಸ್ವಾತಂತ್ರ್ಯ ಸಿಕ್ಕಿದ ಆರಂಭಿಕ ದಶಕದಲ್ಲಿದ್ದ ಮನೋಸ್ಥಿತಿ ಈಗ ಬದಲಾಗಿದೆ. ಅಂದು ರಾಜಕೀಯ ಹಾಗೂ ಇತರ ಕ್ಷೇತ್ರಗಳು ಬೇರೆಯಾಗಿದ್ದವು. ಆದರೆ, ಈಗ ಎಲ್ಲೆಡೆ ರಾಜಕೀಯ ಹಾಸುಹೊಕ್ಕುತ್ತಿದ್ದು, ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಮಸ್ಯೆಗಳೇ ಹೆಚ್ಚುತ್ತಿದೆ. ಸಾಮಾಜಿಕ ಅವನತಿ ಉಂಟಾಗುತ್ತಿದೆಯೇ? ಎಂಬ ಭಯ ಕಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.