ಬೆಳಗಾವಿ: ‘ಲಿಂಗಾಯತರು ಹಾಗೂ ಇತರೆ ಹಿಂದುಳಿದ ಜನಾಂಗದ ಮತದಾರರು ಬಿಜೆಪಿಯತ್ತ ವಾಲಿರುವುದು ಈ ಉಪಚುನಾವಣೆಯಿಂದ ಸಾಬೀತಾಗಿದೆ. ಇನ್ನುಳಿದಿರುವ ಎಸ್.ಸಿ, ಎಸ್.ಟಿ ಹಾಗೂ ಮುಸ್ಲಿಮರನ್ನು ಪಕ್ಷದತ್ತ ಕರೆತರುವುದು ನನ್ನ ಜವಾಬ್ದಾರಿ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ಗೆ ಮೋಸ ಹೋಗಬೇಡಿ ಎಂದು ಈ ಸಮಾಜದವರಿಗೆ ತಿಳಿಹೇಳುವ ಕೆಲಸ ಮಾಡುವೆ. ಮುಂದಿನ ಚುನಾವಣೆಯಲ್ಲಿ ಇವರನ್ನೆಲ್ಲ ಬಿಜೆಪಿ ಕಡೆ ಕರೆತರುವೆ’ ಎಂದು ನುಡಿದರು.
‘ಸಚಿವರನ್ನಾಗಿ ಮಾಡುವ ತೀರ್ಮಾನ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು. ಅವರು ಯಾವ ಖಾತೆ ಕೊಟ್ಟರೂ ನಿಭಾಯಿಸುವೆ. ಜಲಸಂಪನ್ಮೂಲ ಖಾತೆ ದೊಡ್ಡದು. ಅದು ಸಿಕ್ಕರೆ ನನ್ನ ಪುಣ್ಯ’ ಎಂದು ಪ್ರತಿಕ್ರಿಯಿಸಿದರು.