ಹುಣಸೂರು/ ಬೇಲೂರು: ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಣಸೂರು ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದ ರೈತ ಸುರೇಶ್ (45) ನದಿಗೆ ಹಾರಿದ್ದರೆ, ಬೇಲೂರು ತಾಲ್ಲೂಕಿನ ಕೋನೇರ್ಲುವಿನಲ್ಲಿ ರೈತ ಕೆ.ಪಿ.ಪರಮೇಶ್ (53) ನೇಣಿಗೆ ಶರಣಾಗಿದ್ದಾರೆ.
ಸಂಬಂಧಿಕರ ಮನೆಗೆಂದು ಶುಕ್ರವಾರ ಮನೆಯಿಂದ ಹೋಗಿದ್ದ ಸುರೇಶ್ ಮೃತದೇಹವು ಬೈಲುಕುಪ್ಪೆ ಬಳಿ ಕಾವೇರಿ ನದಿಯಲ್ಲಿ ಮಂಗಳವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಎಚ್ಡಿಎಫ್ಸಿ ಬ್ಯಾಂಕಿನಲ್ಲಿ ₹ 5 ಲಕ್ಷ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು. ಸಾಲದ ಬಾಕಿ ಪಾವತಿಸುವಂತೆ ಬ್ಯಾಂಕ್ನ ಸಿಬ್ಬಂದಿ ಮನೆಗೂ ಭೇಟಿ ನೀಡಿದ್ದರು. ಜತೆಗೆ ₹ 2 ಲಕ್ಷ ಕೈ ಸಾಲವೂ ಇತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ.
ಬೇಲೂರು ತಾಲ್ಲೂಕಿನ ರೈತ ಪರಮೇಶ್, ಮಗಳ ಮದುವೆಗೆಂದು ಕೆನರಾ ಬ್ಯಾಂಕಿನಲ್ಲಿ ₹ 5 ಲಕ್ಷ ಸಾಲ ಮಾಡಿದ್ದರು. ಶುಂಠಿ ಕೃಷಿಗೂ ಸಾಲ ಮಾಡಿದ್ದು, ಜತೆಗೆ ₹ 5 ಲಕ್ಷ ಕೈ ಸಾಲ ಮಾಡಿದ್ದರು ಎಂದು ಅವರ ಪತ್ನಿ ಯಶೋಧಾ ತಿಳಿಸಿದ್ದಾರೆ.
ಸೋಮವಾರ ಸಂಜೆ ಜಮೀನಿಗೆ ಹೋಗಿದ್ದ ಪರಮೇಶ್ ಸಂಜೆಯಾದರೂ ಮರಳಿರಲಿಲ್ಲ. ಜಮೀನಿನ ಬಳಿ ಹೋಗಿ ನೋಡಿದಾಗ ಮರಕ್ಕೆ ನೇಣುಹಾಕಿಕೊಂಡಿದ್ದು ಕಂಡುಬಂದಿದೆ.