ಬೆಂಗಳೂರು: ಯಲಹಂಕ ಸಮೀಪದ ಸಿಂಗಪುರ ಮುಖ್ಯರಸ್ತೆಯಲ್ಲಿ ಶುಕ್ರವಾರ ನಸುಕಿನ ವೇಳೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಶಾರೂಕ್ ಬೇಗ್ (27) ಎಂಬ ಮೆಕ್ಯಾನಿಕ್ ಮೃತಪಟ್ಟಿದ್ದಾರೆ.
ವಿದ್ಯಾರಣ್ಯಪುರ ಸಮೀಪದ ಆದಿತ್ಯನಗರ ನಿವಾಸಿಯಾದ ಶಾರೂಕ್, 3 ಗಂಟೆ ಸುಮಾರಿಗೆ ಬೈಕ್ನಲ್ಲಿ ಬಾಣಾವರ ಕಡೆಗೆ ಹೊರಟಿದ್ದರು. ಸಿಂಗಪುರ ರಸ್ತೆ ಹಾಳಾಗಿದ್ದು, ಅಲ್ಲಿ ಮಣ್ಣು ಸುರಿದು ಗುಂಡಿಗಳನ್ನು ಮುಚ್ಚಲಾಗಿದೆ.
ಶಾರೂಕ್ ಓಡಿಸುತ್ತಿದ್ದ ಬೈಕ್ಗೆ ಹೆಡ್ಲೈಟ್ ಇರಲಿಲ್ಲ. ಅವರು ಹೆಲ್ಮೆಟ್ ಸಹ ಧರಿಸಿರಲಿಲ್ಲ. ವೇಗವಾಗಿ ಬೈಕ್ ಓಡಿಸಿಕೊಂಡು ಬಂದಿರುವ ಅವರು, ಹಾಳಾದ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ತಲೆಗೆ ಕಲ್ಲು ಬಡಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಯಲಹಂಕ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣ: ದೇವನಹಳ್ಳಿಯ ಉಗನವಾಡಿ ಗೇಟ್ ಬಳಿ ಗುರುವಾರ ರಾತ್ರಿ ಬೈಕ್ಗೆ ಕಾರು ಡಿಕ್ಕಿ ಹೊಡೆದು ಮಧು (19) ಎಂಬಾತ ಮೃತಪಟ್ಟು, ಆತನ ಸ್ನೇಹಿತ ಅಜಿತ್ ಗಾಯಗೊಂಡಿದ್ದಾನೆ.
ಇಬ್ಬರೂ ಸೂಲಿಬೆಲೆ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು. ಸಿಂಗರಹಳ್ಳಿಯಲ್ಲಿ ಮಧು ಸಂಬಂಧಿಕರಿದ್ದು, ಗುರುವಾರ ಸಂಜೆ ಇಬ್ಬರೂ ಅವರ ಮನೆಗೆ ಹೋಗಿದ್ದರು.
ಅಲ್ಲಿಂದ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದಾಗ ಉಗನವಾಡಿ ಗೇಟ್ ಬಳಿ ಕಾರು ಡಿಕ್ಕಿ ಹೊಡೆದಿದೆ. ಮಧು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆರೋಪಿ ಚಾಲಕ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ ಎಂದು ದೇವನಹಳ್ಳಿ ಸಂಚಾರ ಪೊಲೀಸರು ತಿಳಿಸಿದ್ದಾರೆ.