ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಕರ್ನಾಟಕದ ‘ಗ್ರಾಮಾರೋಗ್ಯ’ ಸಂಪೂರ್ಣವಾಗಿ ಹದಗೆಟ್ಟು ಹಳ್ಳಿಗಳೆಲ್ಲ ಹಾಸಿಗೆ ಹಿಡಿಯಲು ಮುಖ್ಯವಾಗಿ ಮೂರು ಕಾರಣಗಳುಂಟು. ಅವುಗಳೆಂದರೆ– ಆರೋಗ್ಯ ಮೂಲಸೌಕರ್ಯದ ಗೈರು, ವೈದ್ಯರ ಕೊರತೆ ಮತ್ತು ಆರೋಗ್ಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವಲ್ಲಿ ತೋರಲಾದ ದಿವ್ಯ ನಿರ್ಲಕ್ಷ್ಯ. ನೀವು ಚಾಮರಾಜನಗರದ ಯಾವುದೇ ಹಾಡಿಯಿಂದ ಬೀದರ್ನ ಕಟ್ಟಕಡೆಯ ಗ್ರಾಮದವರೆಗೆ, ದಕ್ಷಿಣ ಕನ್ನಡದ ಸಮುದ್ರ ತೀರದಿಂದ ಚಿತ್ರದುರ್ಗದ ಗುಡ್ಡದ ಮೇಲಿನ ಹಟ್ಟಿಯವರೆಗೆ ಎತ್ತಸುತ್ತಿ ನೋಡಿದರೂ ‘ಗ್ರಾಮಾರೋಗ್ಯ’ದ ತಪಾಸಣಾ ವರದಿಗಳಲ್ಲಿ ಇವೇ ಮೂರು ‘ರೋಗ ಲಕ್ಷಣ’ಗಳು ಎದ್ದು ಕಾಣುತ್ತವೆ.