ನನ್ನ ಶಿಸ್ತುಬದ್ಧ ಜೀವನ, ಸರಳ ಹಾಗು ಸ್ವಾಭಿಮಾನ ಜೀವನಕ್ಕೆ ಸ್ಪೂರ್ತಿಯೆ ದಿ.ಇಂದಿರಮ್ಮ ಮತ್ತು ಶ್ರೀಮತಿ ಸುಂದರಮ್ಮ ಸಹೋದರಿಯರು. ಇವರಿಬ್ಬರನ್ನು ನಾನು ಬಹಳ ಹತ್ತಿರದಿಂದ ನೋಡಿ ಬಲ್ಲೆ. ಅವರ ಕಷ್ಟ ಕಾರ್ಪಣ್ಯಗಳಿಗೆ ಅಂತ್ಯವೇ ಇರದಂತೆ ಒಂದರ ಮೇಲೆ ಒಂದು ಆಘಾತ ಅವರನ್ನು ಶಿಸ್ತುಬದ್ಧ ಜೀವನ ನಡೆಸಲು ಪ್ರೇರೇಪಿಸಿರಬಹುದು.
ಇಂದಿರಮ್ಮ ಮದುವೆಯಾಗಿ ಒಂದು ಮಗುವಿಗೇನೊ ಜನ್ಮಕೊಟ್ಟರು. ಆದರೆ ಸಂತೋಷಪಡುವ ಮೊದಲೇ ವಿಧಿವಶವಾಯಿತು. ಕಾಲಗತಿಯಲ್ಲಿ ಅವರ ಜೀವನ ಸಂಗಾತಿಯು ಇವರಿಂದ ದೂರವಾದರು. ಚಿಕ್ಕವರಾದ ಸುಂದರಮ್ಮನ ಜೀವನವು ದುರಂತವೆ ಆಯಿತು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಲವು ದಿನಗಳಲ್ಲೆ ವೈಧವ್ಯ ಪ್ರಾಪ್ತಿಯಾಯಿತು. ಈ ಘಟನೆಯಿಂದ ಹೊರಬಂದು ಹೆಚ್ಚಿನ ವಿದ್ಯಾಭ್ಯಾಸವಿಲ್ಲದ ಈ ಸಹೋದರಿಯರು ಜೀವನ ನಿರ್ವಹಣೆಗೆ ಆಯ್ದುಕೊಂಡದ್ದು ಮೈಸೂರು ಲ್ಯಾಂಪ್ಸ್ ವರ್ಕ್ಸ್ ಸಂಸ್ಥೆಯಲ್ಲಿ ದಿನಗೂಲಿ ಕೆಲಸ. ಮನೆಯಿಂದ ಬುತ್ತಿಕಟ್ಟಿಕೊಂಡು ಎರಡೂವರೆ ಕಿಲೊಮೀಟರ್ ನಡೆದು ಕೆಲಸ ಮಾಡಿ ಸಂಜೆ ಅದೆ ರೀತಿ ಮನೆಗೆ ಬರುವುದು. ಆಗಿನ ಕಾಲದಲ್ಲಿ ಅವರ ದಿನದ ಭತ್ಯೆ ಎಂಟಾಣೆ. ಸಂಪಾದನೆಯ ಹಣವನ್ನು ಅತಿ ಜಾಣ್ಮೆಯಿಂದ ಉಳಿಸಿ ಕರ್ನಾಟಕ ಹೌಸಿಂಗ್ ಬೋರ್ಡ್ ಅಡಿಯಲ್ಲಿ ಒಂದು ಮನೆ ಖರೀದಿಸಿದರು. ಇತರರ ಸಹಾಯ ಯಾಚಿಸದೆ ಈ ಸಾಧನೆಯನ್ನು ಮಾಡಿದ ಆ ಸಹೋದರಿಯರನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೆ.