ತಿರುವನಂತಪುರ: ಕೆಲವು ವರ್ಷಗಳ ಹಿಂದೆ ತಾಲಿಬಾನ್ಗಳಿಂದ ಪಾರಾಗಿ ಪ್ರಾಣವನ್ನು ರಕ್ಷಿಸಿಕೊಂಡು ಹಕೀಮ್ ಜಾನ್ ಮುಫಕೇರ್ ಓಡಿ ಬಂದಿದ್ದರು. ಆದರೆ, ಅವರ ಕುಟುಂಬಸ್ಥರು ಅಫ್ಗಾನಿಸ್ತಾನದಲ್ಲಿ ಸಿಲುಕಿರುವುದರಿಂದ ಮುಫಕೇರ್ ಆತಂಕಗೊಂಡಿದ್ದಾರೆ.
ಪ್ರಸ್ತುತ ಕೇರಳದಲ್ಲಿರುವಹಕೀಮ್, 2019ರಿಂದ ಕೇರಳ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಫಕೇರ್ ಪತ್ನಿ ಮತ್ತು ಮಕ್ಕಳು ಇಲ್ಲೇ ಇದ್ದಾರೆ. ಆದರೆ, ಅವರ ತಂದೆ–ತಾಯಿ, ಸಹೋದರರು ಕಾಬೂಲ್ನಲ್ಲಿ ಇದ್ದಾರೆ.
ಹಲವು ವರ್ಷಗಳ ಹಿಂದೆ ಕಾಬೂಲ್ನಿಂದ ನನ್ನ ಗ್ರಾಮ ಪಕ್ತಿಯಾಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲೆಂದು ತೆರಳುತ್ತಿದ್ದೆ. ಆಗ ಸ್ಥಳೀಯ ತಾಲಿಬಾನ್ಗಳು ನನ್ನನ್ನು ಕೊಲ್ಲಲು ಅಥವಾ ಅಪಹರಿಸಲು ಸಂಚು ಹೂಡಿದ್ದಾರೆ ಎಂಬ ವಿಷಯವು ಸಂಬಂಧಿಯೊಬ್ಬರಿಂದ ತಿಳಿಯಿತು. ಇದರಿಂದ ನಾನು ತುಂಬಾ ಭಯಭೀತಗೊಂಡಿದೆ. ಎರಡು ರಾತ್ರಿ ನಿದ್ದೆಯಿಲ್ಲದೆ ಕಳೆದೆ. ಗ್ರಾಮದಲ್ಲೇ ಸ್ವಲ್ಪ ದಿನ ಅವಿತು ಕುಳಿತಿದ್ದೆ. ಬಳಿಕ ರಹಸ್ಯವಾಗಿ ಅಲ್ಲಿಂದ ಕಾಬೂಲ್ಗೆ ಓಡಿ ಬಂದಿದ್ದೆ’ ಎಂದು ಅವರು ಹೇಳಿದರು.
‘ಈಗ ಅಫ್ಗಾನಿಸ್ತಾನವು ತಾಲಿಬಾನ್ ಉಗ್ರರ ಕೈವಶದಲ್ಲಿದೆ. ನನ್ನ ಪೋಷಕರು, ಸಹೋದರರು ಅಲ್ಲಿ ಸಿಲುಕಿದ್ದಾರೆ. ನಾನು ಅವರೊಂದಿಗೆ ಫೋನ್ನಲ್ಲಿ ಮಾತನಾಡಿದೆ. ಅವರು ತುಂಬಾ ಭಯಬೀತರಾಗಿದ್ದಾರೆ. ಅಲ್ಲದೆ ನನ್ನ ತಮ್ಮ ಅಫ್ಗನ್ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಅವನ ಪ್ರಾಣಕ್ಕೆ ಹೆಚ್ಚಿನ ಅಪಾಯವಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
‘ಅಫ್ಗಾನಿಸ್ತಾನದಲ್ಲಿ ಸರ್ಕಾರ ಪತನಗೊಂಡಿದೆ. ನಾಯಕರು ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ನನ್ನ ತಮ್ಮ ಮನೆಗೆ ಮರಳಿ ಬಂದಿದ್ದಾನೆ. ತಾಲಿಬಾನ್ಗೆ ಪಾಕಿಸ್ತಾನವು ನೆರವು ನೀಡುತ್ತಿದೆ ಎಂದು ಅವನು ಆರೋಪಿಸಿದ್ದ. ಒಂದು ವೇಳೆ ಅಫ್ಗಾನಿಸ್ತಾನದಲ್ಲಿ ಪಾಕಿಸ್ತಾನದ ಕೆಟ್ಟ ನೀತಿಯನ್ನು ತಾಲಿಬಾನ್ ಹೇರಿದರೆ, ಅದರ ವಿರುದ್ಧ ಅಫ್ಗನ್ನರು ನಿಲ್ಲಲಿದ್ದಾರೆ’ ಎಂದುಮುಫಕೇರ್ ಹೇಳಿದರು.
‘ಅಫ್ಗಾನಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸಿದರೆ, ನಾನು ನನ್ನ ದೇಶಕ್ಕೆ ಬದ್ಧನಾಗಿರುತ್ತೇನೆ. ಇಲ್ಲದಿದ್ದರೆ, ಭಾರತ ಅಥವಾ ಬೇರೆ ಯಾವುದಾದರೂ ಪಾಶ್ಚಿಮಾತ್ಯ ದೇಶಗಳಲ್ಲಿ ಉಳಿಯಲು ಬಯಸುತ್ತೇನೆ’ ಎಂದು ತಿಳಿಸಿದರು.