ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಕ್ಕೆ ತೆರಳಲು ಭಾರತೀಯರಿಗೆ ತಾಲಿಬಾನ್‌ ಬೆಂಗಾವಲು!

ಮಧ್ಯರಾತ್ರಿ ಕಾಬೂಲ್‌ ತೊರೆದ ಸಿಬ್ಬಂದಿ, ನಾಗರಿಕರು: ಐದು ಕಿಲೋ ಮೀಟರ್‌ ಸಂಚರಿಸಲು ಐದು ಗಂಟೆ
Last Updated 18 ಆಗಸ್ಟ್ 2021, 10:15 IST
ಅಕ್ಷರ ಗಾತ್ರ

ಕಾಬೂಲ್‌: ಇಲ್ಲಿರುವ ಭಾರತದ ರಾಯಭಾರಿ ಕಚೇರಿಯ ಕಬ್ಬಿಣದ ಗೇಟುಗಳ ಹೊರಗೆ ತಾಲಿಬಾನ್‌ ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ಕಾಯುತ್ತಿದ್ದರು. ಮಷಿನ್‌ ಗನ್‌ಗಳು ಮತ್ತು ಗ್ರೆನೇಡ್‌ಗಳು ಅವರ ಬಳಿಯಿದ್ದವು.

ಆವರಣದ ಒಳಗೆ 150 ಜನ ಭಾರತದ ರಾಜತಾಂತ್ರಿಕರು ಮತ್ತು ನಾಗರಿಕರು ಇದ್ದರು. ರಾಜಧಾನಿ ಕಾಬೂಲ್‌ ಸಂಪೂರ್ಣ ಬಿಗಿ ಹಿಡಿತ ಸಾಧಿಸಿರುವ ಸುದ್ದಿ ಕೇಳಿ ಇವರೆಲ್ಲರೂ ಆತಂಕಗೊಂಡಿದ್ದರು. ಭವಿಷ್ಯ ಅನಿಶ್ಚಿತತೆಯಿಂದ ಕೂಡಿತ್ತು.

ಭಾರತದ ರಾಯಭಾರಿ ಕಚೇರಿಯ ಹೊರಗಿದ್ದ ತಾಲಿಬಾನಿಗಳು ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿರಲಿಲ್ಲ. ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಇವರೆಲ್ಲರನ್ನೂ ಬೆಂಗಾವಲಿನಲ್ಲಿ ಕರೆದೊಯ್ಯಲು ಸಜ್ಜಾಗಿ ನಿಂತಿದ್ದರು. ವಿಮಾನ ನಿಲ್ದಾಣದಲ್ಲಿ ಭಾರತದ ಮಿಲಿಟರಿ ವಿಮಾನವು ಇವರಿಗಾಗಿ ಕಾಯುತ್ತಿತ್ತು.

ಇದು ಸೋಮವಾರ ತಡರಾತ್ರಿ ಕಾಬೂಲ್‌ನಲ್ಲಿನ ಸನ್ನಿವೇಶ. ಭಾರತೀಯರ ಜತೆ ತಾಲಿಬಾನಿಗಳ ನಡವಳಿಕೆ ಬಗ್ಗೆ ಅಧಿಕಾರಿಗಳು ಮತ್ತು ನಾಗರಿಕರು ತಮ್ಮ ಅನುಭವಗಳನ್ನು ವಿವರಿಸಿದ್ದಾರೆ.

ಸೋಮವಾರ ತಡರಾತ್ರಿ ಸುಮಾರು 12 ವಾಹನಗಳು ರಾಯಭಾರಿ ಕಚೇರಿಯಿಂದ ವಿಮಾನ ನಿಲ್ದಾಣಕ್ಕೆ ತೆರಳಿದವು. ಕೆಲವು ತಾಲಿಬಾನಿಗಳು ಪ್ರಯಾಣಿಕರತ್ತ ನಗೆಬೀರಿ ಕೈಬೀಸಿದರು ಮತ್ತು ವಿಮಾನ ನಿಲ್ದಾಣಕ್ಕೆ ತೆರಳಲು ಮಾರ್ಗದರ್ಶನ ಮಾಡಿದರು. ಪ್ರಯಾಣಿಕರಲ್ಲಿ ‘ಎಎಫ್‌ಪಿ’ ಪ್ರತಿನಿಧಿಯೂ ಇದ್ದರು.

‘ತಾಲಿಬಾನ್‌ ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಮುನ್ನವೇ ಸುಮಾರು 50 ಮಂದಿಯನ್ನು ಅಫ್ಗಾನಿಸ್ತಾನದಿಂದ ಭಾರತಕ್ಕೆ ಕಳುಹಿಸಲಾಗಿತ್ತು. ಎರಡನೇ ಗುಂಪುನ್ನು ಸ್ವದೇಶಕ್ಕೆ ಕಳುಹಿಸುವಾಗ ತಾಲಿಬಾನಿಗಳು ಎದುರಾದರು. ಹಸಿರು ವಲಯದ ಮೂಲಕ ತೆರಳಲು ನಮಗೆ ಅವಕಾಶ ನೀಡಲಿಲ್ಲ. ಆಗ ನಾವು ತಾಲಿಬಾನ್‌ ನಾಯಕರನ್ನು ಸಂಪರ್ಕಿಸಿ, ನಮಗೆ ಬೆಂಗಾವಲು ಒದಗಿಸುವಂತೆ ಕೋರಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

’ವಿಮಾನ ನಿಲ್ದಾಣಕ್ಕೆ ತೆರಳುವವರೆಗೂ ನಮಗೆ ಅದೊಂದು ರೀತಿಯ ಗೃಹ ಬಂಧನವಾಗಿತ್ತು. ಕೊನೆಗೂ ಐದು ಕಿಲೋ ಮೀಟರ್‌ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ತೆರಳಲು ಅವಕಾಶ ದೊರೆಯಿತು. ಆದರೆ, ವಾಹನಗಳು ಅತಿ ನಿಧಾನವಾಗಿ ಚಲಿಸಿದವು. ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಹಲವೆಡೆ ತಪಾಸಣೆ ಠಾಣೆಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಕ್ಷಣ ದಾಳಿಯ ಆತಂಕ ಎದುರಾಗುತ್ತಿತ್ತು. ಕೊನೆಗೂ ಐದು ಗಂಟೆಯ ಪ್ರಯಾಣದ ಬಳಿಕ ವಿಮಾನ ನಿಲ್ದಾಣ ತಲುಪಲಾಯಿತು’ ಎಂದು ಆತಂಕದ ಕ್ಷಣಗಳನ್ನು ವಿವರಿಸಿದ್ದಾರೆ.

‘ಭಾರತೀಯರಿದ್ದ ವಾಹನಗಳಿಗೆ ಬೆಂಗಾವಲು ಇದ್ದ ತಾಲಿಬಾನಿಗಳು ಜನದಟ್ಟಣೆ ಇರುವ ಸ್ಥಳಗಳಲ್ಲಿ ತಮ್ಮ ವಾಹನಗಳಿಂದ ಜಿಗಿದು ಬಂದೂಕು ತೋರಿಸಿ ಹಿಂದೆ ಸರಿಯುವಂತೆ ಜನರಿಗೆ ಬೆದರಿಕೆ ಹಾಕುತ್ತಿದ್ದರು. ಒಬ್ಬ ವ್ಯಕ್ತಿಯಂತೂ ಗಾಳಿಯಲ್ಲಿ ಗುಂಡು ಹಾರಿಸಿದ. ವಾಹನ ವಿಮಾನ ನಿಲ್ದಾಣ ತಲುಪಿದ ಬಳಿಕ ಬೆಂಗಾವಲಿಗೆ ಇದ್ದ ತಾಲಿಬಾನಿಗಳು ಹಿಂತಿರುಗಿದರು. ವಿಮಾನ ನಿಲ್ದಾಣದಲ್ಲಿ ಅಮೆರಿಕದ ಸೈನಿಕರು ಭದ್ರತಾ ವ್ಯವಸ್ಥೆ ಕೈಗೊಂಡು ವಿಮಾನಗಳ ಸಂಚಾರವನ್ನು ನಿಯಂತ್ರಿಸುತ್ತಿದ್ದರು’ ಎಂದು ವಿವರಿಸಿದ್ದಾರೆ.

ಮತ್ತೆ ಎರಡು ಗಂಟೆ ಕಾದ ಬಳಿಕ, ಪ್ರಯಾಣಿಕರ ಗುಂಪು ಭಾರತದ ಸಿ–17 ಮಿಲಿಟರಿ ವಿಮಾನದ ಮೂಲಕ ಮಂಗಳವಾರ ಬೆಳಿಗ್ಗೆ ಭಾರತಕ್ಕೆ ತೆರಳಿತು.

‘ಭಾರತ ಸ್ವರ್ಗ. ಭಾರತಕ್ಕೆ ಮರಳಿರುವುದರಿಂದ ಅಪಾರ ಸಂತಸವಾಗಿದೆ’ ಎಂದು ಏರ್‌ ಇಂಡಿಯಾ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಎರಡು ವರ್ಷದ ಪುತ್ರಿಯೊಂದಿಗೆ ಭಾರತಕ್ಕೆ ವಾಪಸ್‌ ಬಂದ ನಾಗರಿಕರೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘ತಾಲಿಬಾನಿಗಳು ನಾನು ಕೆಲಸ ಮಾಡುತ್ತಿದ್ದ ಕಚೇರಿಗೆ ಬಂದಿದ್ದರು. ಅವರು ಸಭ್ಯತೆಯಿಂದ ನಡೆದುಕೊಂಡರು. ಆದರೆ, ಹೋಗುವಾಗ ನಮ್ಮ ಎರಡು ವಾಹನಗಳನ್ನು ತೆಗೆದುಕೊಂಡು ಹೋದರು. ಆಗ ನಾನು ಪರಿಸ್ಥಿತಿ ಬಿಗಡಾಯಿಸಿದೆ ಎಂದು ಅರಿತುಕೊಂಡು ಕುಟುಂಬದೊಂದಿಗೆ ಭಾರತಕ್ಕೆ ತೆರಳಲು ನಿರ್ಧರಿಸಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT