ಕುವೈತ್ ನಗರ: ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯ ಮನೆ ಕೆಲಸದವರ ನೇಮಕಾತಿಯನ್ನು ವ್ಯವಸ್ಥಿತವಾಗಿಸುವ ಹಾಗೂ ಕಾನೂನಿನ ಚೌಕಟ್ಟಿನಲ್ಲೇ ಅವರಿಗೆ ರಕ್ಷಣೆ ದೊರೆಯುವಂತೆ ಮಾಡುವ ಒಡಂಬಡಿಕೆಯೊಂದಕ್ಕೆ (ಎಂಒಯು) ಭಾರತ ಮತ್ತು ಕುವೈತ್ ರಾಷ್ಟ್ರಗಳು ಸಹಿ ಹಾಕಿವೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಕುವೈತ್ನ ಅವರ ಸಹವರ್ತಿ ಶೇಖ್ ಅಹ್ಮದ್ ನಾಸೀರ್ ಅಲ್–ಮೊಹಮ್ಮದ್ ಅಲ್–ಸಭಾ ಅವರ ಸಮ್ಮುಖದಲ್ಲಿ ಗುರುವಾರ ಕುವೈತ್ನಲ್ಲಿರುವ ಭಾರತೀಯ ರಾಯಭಾರಿ ಸಿಬಿ ಜಾರ್ಜ್ ಮತ್ತು ಕುವೈತ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವ ಮಜಿದ್ ಅಹ್ಮದ್ ಅಲ್–ದಫೀರಿ ಅವರು, ಈ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಒಡಂಬಡಿಕೆಗೆ ಸಹಿ ಹಾಕಿದ್ದನ್ನು ಎರಡೂ ರಾಷ್ಟ್ರಗಳ ಸಚಿವರು ಸ್ವಾಗತಿಸಿದರು.
ಈ ಒಡಂಬಡಿಕೆ, ಕುವೈತ್ನಲ್ಲಿರುವ ಭಾರತೀಯ ಮನೆ ಕೆಲಸದವರ ನೇಮಕಾತಿಯನ್ನು ಸುಗಮಗೊಳಿಸುತ್ತದೆ. ಹಾಗೆಯೇ, ಅವರಿಗೆ ಕಾನೂನು ಚೌಕಟ್ಟಿನ ರಕ್ಷಣೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಉದ್ಯೋಗ ನೀಡುವವರನ್ನು ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಕಟ್ಟುಪಾಡುಗಳನ್ನು ಖಾತರಿ ಪಡಿಸುತ್ತದೆ.
ಜೈಶಂಕರ್ ಅವರು ಗುರುವಾರ ಮುಂಜಾನೆ ಕೊಲ್ಲಿ ರಾಷ್ಟ್ರವನ್ನು ತಲುಪಿದರು. ಇದು ಅವರ ಮೊದಲ ದ್ವಿಪಕ್ಷೀಯ ಭೇಟಿ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.