ಕಠ್ಮಂಡು: ‘ಪೊಖರಾದಲ್ಲಿ ನಡೆದಿದ್ದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದ ಭಾರತೀಯರ ಪೈಕಿ ಮತ್ತೆ ಇಬ್ಬರ ಗುರುತು ಪತ್ತೆಯಾಗಿದೆ’ ಎಂದು ನೇಪಾಳದ ಆರೋಗ್ಯ ಇಲಾಖೆ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
‘ದುರಂತದಲ್ಲಿ ಉತ್ತರಪ್ರದೇಶದ ಐವರು ಸಾವಿಗೀಡಾಗಿದ್ದರು. ಈ ಪೈಕಿ ಅಭಿಷೇಕ್ ಕುಶ್ವಾಹ (25) ಮತ್ತು ಅನಿಲ್ಕುಮಾರ್ ರಾಜಭರ್ (27) ಅವರ ಗುರುತು ಭಾನುವಾರ ಪತ್ತೆಯಾಗಿದೆ’ ಎಂದು ತ್ರಿಭುವನ್ ವಿಶ್ವವಿದ್ಯಾಲಯ ಆಸ್ಪತ್ರೆಯ ಮೂಲಗಳು ತಿಳಿಸಿವೆ.
‘ಮೃತರ ಪೈಕಿ ಸಂಜಯ್ ಜೈಸ್ವಾಲ್ ಎಂಬುವರ ಮೃತದೇಹವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಉಳಿದ ನಾಲ್ವರ ಶವಗಳನ್ನು ಸೋಮವಾರ ಅವರ ಕುಟುಂಬದವರಿಗೆ ಒಪ್ಪಿಸಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.