ಕಠ್ಮಂಡು : ನೇಪಾಳದ ಸಂಸತ್ತು ಮತ್ತು ಪ್ರಾಂತ್ಯವಾರು ವಿಧಾನಸಭೆಗಳಿಗೆ ನೂತನ ಸದಸ್ಯರ ಆಯ್ಕೆಗೆ ಭಾನುವಾರ ಚುನಾವಣೆ ನಡೆದಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.
ದಶಕದಿಂದ ದೇಶವನ್ನು ಬಾಧಿಸುತ್ತಿರುವ ರಾಜಕೀಯ ಅನಿಶ್ಚಿತತೆಗೆ ಈ ಚುನಾವಣೆ ಫಲಿತಾಂಶವು ಅಂತ್ಯಹಾಡಲಿದೆ ಎಂದು ಆಶಿಸಲಾಗಿದೆ. ದೇಶದಾದ್ಯಂತ ಚುನಾವಣೆಗೆ 22 ಸಾವಿರ ಮತಗಟ್ಟೆ ಸ್ಥಾಪಿಸಲಾಗಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬಿರುಸಿನಿಂದ ಸಾಗಿತು. ಮಧ್ಯಾಹ್ನದವರೆಗೆ ಶೇ 46ರಷ್ಟು ಮತ ಚಲಾವಣೆಯಾಗಿದೆ ಎಂದು ಗೃಹ ಕಾರ್ಯದರ್ಶಿ ವಿನೋದ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ಕೈಲಾಲಿ ಜಿಲ್ಲೆಯ ಧಾಗಂಧಿಯ ಶಾಲೆಯೊಂದರಲ್ಲಿದ್ದ ಮತಗಟ್ಟೆಯ ಬಳಿ ಸಣ್ಣ ಸ್ಫೋಟ ಸಂಭವಿಸಿತು. ಯಾರಿಗೂ ಹಾನಿಯಾಗಿಲ್ಲ. ಅಲ್ಲದೆ, ವಿವಿಧೆಡೆ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿರುವ ವರದಿಗಳಿವೆ. ಉಳಿದಂತೆ ಮತದಾನ ಪ್ರಕ್ರಿಯೆಯು ಒಟ್ಟಾರೆ ಶಾಂತಿಯುತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಪ್ರಧಾನಿ, ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಅಧ್ಯಕ್ಷ ಕೆ.ಪಿ.ಶರ್ಮಾ ಒಲಿ ಅವರು ಭಕ್ತಾಪುರ್ ಜಿಲ್ಲೆಯಲ್ಲಿ, ಸಿಪಿಎನ್–ಮಾವೋವಾದಿ ಸೆಂಟರ್ ಪಕ್ಷದ ಅಧ್ಯಕ್ಷರಾಗಿರುವ ಮಾಜಿ ಪ್ರಧಾನಿ ಪುಷ್ಪ ಕಮಲ್ ದಾಹಲ್ ಅವರು ಚೈತ್ವಾನ್ ಜಿಲ್ಲೆಯ ಭರತ್ಪುರ್ನಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಸಂಸತ್ತಿನ ಸದಸ್ಯ ಬಲ 275. ಒಟ್ಟು 1.79 ಕೋಟಿ ಮತದಾರರಿದ್ದಾರೆ. ಮತಎಣಿಕೆ ಡಿ.8ರಂದು ನಡೆಯಲಿದೆ.