ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

Published 11 ಜನವರಿ 2024, 13:12 IST
Last Updated 11 ಜನವರಿ 2024, 13:12 IST
ಅಕ್ಷರ ಗಾತ್ರ

ಯುವ ಜನತೆಗೆ ಸ್ಫೂರ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಪ್ರತಿ ವರ್ಷ ಜನವರಿ 12ರಂದು ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆಯಲ್ಲಿ ಇಂದಿನ ಯುವಕರ ಆಲೋಚನೆಗಳು ಯಾವುದರೆಡೆಗೆ ಇರಬೇಕೆಂಬುವುದರ ಕುರಿತ ವಿಶೇಷ ಲೇಖನ ಇಲ್ಲಿದೆ.

ನಮ್ಮದೇ ಅನುಭವದ ನೆನಪು, ನಾವು ಇನ್ನು ಮುಂದೆ ಚಿಂತಿಸದಿರುವಂತಹ ಸ್ಥಿತಿಗೆ ನಮ್ಮನ್ನು ಕೊಂಡೊಯ್ಯುತ್ತದೆ. ನೀವು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರೆ ಅಥವಾ ಭವಿಷ್ಯವು ನಿರಾಶಾದಾಯಕವಾಗಿದೆ ಅಥವಾ ಅನಿಶ್ಚಿತವಾಗಿದೆ ಎಂದು ನೀವು ಭಾವಿಸಿದ್ದರೆ, ಸ್ವಲ್ಪ ಹಿಂದಿರುಗಿ ನೋಡಿ. ನಿಮಗೆ ಈ ರೀತಿಯಾಗಿ ಅನಿಸಿದ್ದು ಇದೇ ಮೊದಲಲ್ಲ. ಹಿಂದೆಯೂ ಆತಂಕಗೊಂಡಿದ್ದಿರಿ. ಕಾಲೇಜಿನಲ್ಲಿ ಪ್ರವೇಶವನ್ನು ಪಡೆಯುವ ಬಗ್ಗೆ, ಅಥವಾ ಕೆಲಸವನ್ನು ಪಡೆಯುವ ಬಗ್ಗೆ ಅನಿಶ್ಚಿತರಾಗಿದ್ದಿರಿ. ಆ ಸಮಯಗಳ ನೆನಪಿದೆಯೆ? ಸ್ವ-ಸಂಶಯಗಳ, ಆತಂಕದ ಕ್ಷಣಗಳನ್ನೆಲ್ಲಾ ದಾಟಿ ಬಂದಿರಿ. ಇವುಗಳನ್ನೂ ದಾಟಿ ಮುಂದೆ ಹೋಗುತ್ತೀರಿ.

ಯುವಕರು ಯಾವುದರ ಬಗ್ಗೆ ಚಿಂತಿಸಬೇಕು? ಎರಡನೆಯ ವಿಷಯವೆಂದರೆ, ನವೀನವಾದುದನ್ನು ಸೃಷ್ಟಿಸಬಲ್ಲ ನಿಮ್ಮ ಸ್ಫೂರ್ತಿಯನ್ನು, ಕನಸನ್ನು ನಂಬಿ. ಚಿಂತಿಸುವವರಿಗೆ ಕನಸನ್ನು ಕಾಣಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಾಗಿ, ಯುವಕರಾಗಿ, ಸಮಾಜಕ್ಕೆ ನೀವು ಏನನ್ನು ಹಿಂದಿರುಗಿಸಬಲ್ಲಿರಿ ಎಂಬುದರ ಬಗ್ಗೆ ಕನಸನ್ನು ಕಾಣಿ. ಈ ಜಗತ್ತಿನಿಂದ ನೀವು ಏನನ್ನು ಪಡೆಯಬಲ್ಲಿರಿ ಎಂದು ಮಾತ್ರ ಆಲೋಚಿಸುತ್ತಿದ್ದರೆ, ನಿಮ್ಮ ಚಿಂತೆಗೆ ಕೊನೆಯೇ ಇರುವುದಿಲ್ಲ. "ನನಗೆ ಅಷ್ಟೊಂದು ಒಳ್ಳೆಯ ಶಿಕ್ಷಣ ನೀಡಲಾಗಿದೆ. ನಾನು ಹಿಂದಿರುಗಿಸಿ ಯಾವ ಕಾಣಿಕೆಯನ್ನಾದರೂ ನೀಡುವ ಬಗ್ಗೆ ಆಲೋಚಿಸಬೇಕು. ಆರ್ಥಿಕತೆಗೆ ನಾನು ಹೇಗೆ ಸಹಾಯ ಮಾಡಲಿ? ಜನರನ್ನು ಒಗ್ಗೂಡಿಸಲು ನಾನು ಏನು ಮಾಡಲಿ? ಸಮಾಜದಲ್ಲಿ ಬಿರುಕನ್ನು ಉಂಟು ಮಾಡಿರುವಂತಹ ವ್ಯತ್ಯಾಸಗಳ ನಡುವೆ ಸೇತುವೆಯನ್ನು ಕಟ್ಟಲು ನಾನೇನು ಮಾಡಲಿ?" - ಈ ರೀತಿಯ ಚಿಂತನೆಗಳಿಂದ ನಿಮ್ಮ ಸಣ್ಣಪುಟ್ಟ ಚಿಂತೆಗಳಿಂದ ಹೊರಬರಬಹುದು. ನಿಮ್ಮ ದೃಷ್ಟಿಕೋನವನ್ನು ವಿಶಾಲವಾಗಿ ಮಾಡಿಕೊಂಡು, ದೊಡ್ಡ ಕಾರಣಕ್ಕಾಗಿ ಚಿಂತಿಸುವುದರಿಂದ ನಿಮ್ಮಿಂದ ಮಹಾನಾದ ಏನೋ ಒಂದು ಹೊರಬರುತ್ತದೆ.

ಮುಗುಳ್ನಗೆಯಿಂದ ಯಶಸ್ಸಿನ ಮಾಪನೆ. ಜೀವನದಲ್ಲಿ ನೀವು ಯಶಸ್ವಿಗಳಾಗಲು ಬಯಸುತ್ತೀರಿ. ಆದರೆ ಯಶಸ್ವಿಗಳಾಗುವುದು ಎಂದರೆ ನಿಜವಾಗಿಯೂ ಏನು? ಮರಣಿಸದಂತಹ ವಿಶ್ವಾಸ ಮತ್ತು ಬಾಡದಂತಹ ಮುಗುಳ್ನಗೆಯು ಯಶಸ್ಸಿನ ಚಿಹ್ನೆ. ನೀವು ಯಶಸ್ಸಿನ ಹಿಂದೆ ಬಿದಿದ್ದರೆ, ನಿಮ್ಮದೇ ಸಾಮರ್ಥ್ಯ ನಿಮಗೇ ತಿಳಿದಿಲ್ಲ ಎನ್ನಬಹುದು. ಒಂದು ನಿರ್ದಿಷ್ಟವಾದ ಗುರಿಯನ್ನು ಸಾಧಿಸುವುದೇ ದೊಡ್ಡ ಯಶಸ್ಸು ಎಂದುಕೊಳ್ಳುತ್ತೀರಿ. ಇದರ ಅರ್ಥ ನೀವು ಏನೆಲ್ಲಾ ಮಾಡಬಲ್ಲಿರಿ ಎಂದೇ ನಿಮಗೆ ತಿಳಿದಿಲ್ಲವೆಂದು. ಉದಾಹರಣೆಗೆ, ನಿಮ್ಮ ಮೊಬೈಲನ್ನು ಯಶಸ್ವಿಯಾಗಿ ಚಲಾಯಿಸಿದಿರಿ ಅಥವಾ ಒಂದು ನಂಬರಿಗೆ ಯಶಸ್ವಿಯಾಗಿ ಡಯಲ್ ಮಾಡಿದಿರಿ ಎಂದು ನೀವು ಹೇಳುವುದಿಲ್ಲ. ನಿಮಗೆ ಕಷ್ಟಕರವಾದುದನ್ನು ಮಾಡಿ ಮುಗಿಸಿದಾಗ ಯಶಸ್ಸು ಸಿಕ್ಕಿತು ಎಂದು ಹೇಳುತ್ತೀರಿ. ಅದನ್ನು ಸಾಧಿಸಿದ ನಂತರ ಹೆಮ್ಮೆ ಪಡುತ್ತೀರಿ.

ನಿಮ್ಮ ಆಂತರ್ಯದತ್ತ ನೋಡಿಕೊಳ್ಳಿ. ನಿಮ್ಮನ್ನು ನೀವೇ ಕಡಿಮೆಯಾಗಿ ಅಂದಾಜು ಮಾಡುತ್ತಿರುವಿರಿ ಎಂಬುದೇ ನಮ್ಮ ಅಭಿಮತ.

ಮತ್ತೊಂದು ವಿಷಯವೆಂದರೆ, ಯಶಸ್ಸಿನ ಹಿಂದೆ ಓಡುವುದರಿಂದ ನಿಮ್ಮಲ್ಲಿ ಜ್ವರತೆ ಉಂಟಾಗುತ್ತದೆ. ಯಶಸ್ಸು ಸಿಗದ ಹೊರತು, ಯಾರೂ ಯಾವುದನ್ನೂ ಮಾಡಲು ಸಿದ್ಧರಾಗಿರುವುದಿಲ್ಲ. "ನಾನು ಏನೇ ತೆಗೆದುಕೊಂಡರೂ ಸಹ ಅದನ್ನು ಯಶಸ್ವಿಯಾಗಿ ಸಾಧಿಸಿಯೇ ತೀರುತ್ತೇನೆ" ಎಂಬ ಆತ್ಮವಿಶ್ವಾಸವೊಂದೇ ಸಾಕು, ಒಂದು ಯಶಸ್ಸಿನ ನಂತರ ಮತ್ತೊಂದು ಯಶಸ್ಸನ್ನು ಪಡೆಯಲು.

ಆತಂಕದಿಂದ ತುಂಬಿದ, ಚಂಚಲವಾದ ಈ ಮನಸ್ಸನ್ನು ಹೇಗೆ ನಿಯಂತ್ರಿಸುವುದು? ಮನಸ್ಸಿನ ಸ್ವಭಾವವೇ ಹಾಗೆ. ಯಾರಾದರೂ ನಿಮಗೆ ಹತ್ತು ಅಭಿನಂದನೆಗಳನ್ನು ನೀಡಿ, ಒಂದು ಸಲ ಅಪಮಾನ ಮಾಡಿದರೆ ಸಾಕು. ಮನಸ್ಸು ಆ ಒಂದು ಅಪಮಾನವನ್ನೇ ಹಿಡಿದಿಟ್ಟು ಕೊಳ್ಳುತ್ತದೆ. ಅದೇ ರೀತಿಯಾಗಿ ಮನಸ್ಸು ಗತದಲ್ಲಿ ನಡೆದ ಘಟನೆಗಳ ಬಗ್ಗೆ ಕೋಪದಿಂದಿರುತ್ತದೆ ಅಥವಾ ಪಶ್ಚಾತ್ತಾಪ ಪಡುತ್ತಿರುತ್ತದೆ. ಭವಿಷ್ಯದ ಬಗ್ಗೆ ಭಯದಿಂದ ಅಥವಾ ಆತಂಕದಿಂದ ತುಂಬಿರುತ್ತದೆ. ಇದನ್ನು ಅರಿತ ಕೂಡಲೇ ಮನಸ್ಸು ವರ್ತಮಾನದ ಕ್ಷಣಕ್ಕೆ ಬಂದುಬಿಡುತ್ತದೆ.

ಗತದ ಘಟನೆಯು ಕಳೆದು ಹೋಗಿದ್ದರೂ ಸಹ, ಮನಸ್ಸು ಗತದಲ್ಲೇ ಸಿಲುಕಿಕೊಂಡಿರುತ್ತದೆ. ಹೀಗೆ ಅಂಟಿಕೊಳ್ಳುವ ಈ ಮನಸ್ಸನ್ನು ಹೇಗೆ ನಿಯಂತ್ರಿಸುವುದು? ಮನಸ್ಸನ್ನು ಗತದಿಂದ ಮುಕ್ತಗೊಳಿಸುವ ಪವಾಡವು ಧ್ಯಾನದಲ್ಲಿ ಅಡಗಿದೆ. ಪ್ರಾಣಾಯಾಮ ಮಾಡಿ, ಧ್ಯಾನ ಮಾಡಿ, ಹಾಡಿ, ನರ್ತಿಸಿ, ಕುಣಿಯಿರಿ, ಯಾವುದೋ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಈ ಎಲ್ಲಾ ಕಾರ್ಯಗಳಲ್ಲಿ ನಾವು ತೊಡಗಿದ್ದಾಗ ಅಥವಾ ಆಳವಾದ ವಿಶ್ರಾಂತಿಯೊಳಗೆ ಹೊಕ್ಕಾಗ, ನಮ್ಮ ಮನಸ್ಸಿನ ಮೇಲೆ ನಿಯಂತ್ರಣವನ್ನು ಹೊಂದಲು ಆರಂಭಿಸುತ್ತೇವೆ. ಹಾನಿಕಾರಕವಾದ ಅಭ್ಯಾಸಗಳಿಂದ, ಮಾದರಿಗಳಿಂದ ಹೊರಬರುವುದು. ನೀವು ಏನನ್ನಾದರೂ ಮಾಡುತ್ತಿದ್ದರೆ ಅಥವಾ ತಪ್ಪು ಎಂದು ನೀವು ಭಾವಿಸಿರುವ ಒಂದು ಅಭ್ಯಾಸವನ್ನು ನೀವು ಹೊಂದಿದ್ದಲ್ಲಿ, ಅದರಿಂದ ಹೊರಬರುವ ದಾರಿಯೊಂದಿದೆ. ಒಂದು ಅಭ್ಯಾಸದ ಬಗ್ಗೆ ಆಕರ್ಷಣೆ ಮತ್ತು ಅದರ ಬಗ್ಗೆ ಅಪರಾಧಿಭಾವ, ಇವೆರಡರ ನಡುವೆ ಸಾಮಾನ್ಯವಾಗಿ ಸಿಲುಕಿಕೊಂಡಿರುತ್ತೀರಿ. ಆದ್ದರಿಂದ, ಕಡಿಮೆ ಅವಧಿಗೆ ಶಪಥಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ, ನೀವು ಮೊಬೈಲಿನ ಗೀಳಿನೊಡನೆ ಸೆಣಸಾಡುತ್ತಿದ್ದರೆ, ಮುಂದಿನ ಮೂರು ದಿವಸಗಳಿಗೆ ಮಾತ್ರ ನೀವು ಮೊಬೈಲಿನ ಬಳಿ ಸುಳಿಯುವುದಿಲ್ಲ ಎಂದು ಶಪಥ ಮಾಡಿ. ಒಂದು ಕಾಲಕ್ಕೆ ಸೀಮಿತವಾದಂತಹ ಶಪಥವನ್ನು ಮಾತ್ರ ತೆಗೆದುಕೊಳ್ಳಿ. ಕ್ರಮೇಣವಾಗಿ ಆ ದುರಾಭ್ಯಾಸದಿಂದ ಹೊರಬರುವ ಮನಸ್ಸಿನ ಶಕ್ತಿ ನಿಮ್ಮಲ್ಲಿ ಏಳುತ್ತದೆ. ಜೀವನವು ಒಳ್ಳೆಯ ಹಾಗೂ ಕೆಟ್ಟ ಅನುಭವಗಳ ಸಮ್ಮಿಶ್ರಣ. ಒಂದೇ ರೀತಿಯ ಅನುಭವವನ್ನು ಮಾತ್ರ ಬಯಸಲು ಸಾಧ್ಯವಿಲ್ಲ. ಅವೆಲ್ಲವನ್ನೂ ಪರಿಪೂರ್ಣವಾಗಿ ತೆಗೆದುಕೊಂಡು ಮುಂದೆ ನಡೆಯುತ್ತಲಿರಿ. ಆಗ ಮಾತ್ರವೇ ಜೀವನವನ್ನು ನಿಜವಾಗಿಯೂ ಸಂಭ್ರಮಿಸಲು ಸಾಧ್ಯ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ 45 ಸೆಕೆಂಡುಗಳಿಗೊಮ್ಮೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾವೆಲ್ಲರೂ ಕೈಜೋಡಿಸಿ, ಖಿನ್ನತೆ, ಉದ್ರಿಕ್ತತೆ ಮತ್ತು ಆತ್ಮಹತ್ಯಾ ಪ್ರವೃತ್ತಿಯಿಂದ ಬಳಲುತ್ತಿರುವವರ ಬಳಿ ತಲುಪಿ, ಅವರನ್ನು ಗುಣಮುಖಗೊಳಿಸಲು ಸಹಾಯ ಮಾಡಬೇಕು. ಧ್ಯಾನ, ಸುದರ್ಶನ ಕ್ರಿಯೆ, ಉಸಿರಾಟದ ಪ್ರಕ್ರಿಯೆಗಳು ಈ ಯುದ್ಧದಲ್ಲಿ ನಮಗೆ ಸಹಾಯಕವಾಗಿ ನಿಲ್ಲಬಲ್ಲವು. ಉತ್ತಮ ಮಾನಸಿಕ ಆರೋಗ್ಯಕ್ಕೆ ಇದು ಅತ್ಯಾವಶ್ಯಕ. ಉತ್ತಮ ಮಾನಸಿಕ ಆರೋಗ್ಯವು ಪ್ರತಿಯೊಬ್ಬ ವ್ಯಕ್ತಿಯ, ಪ್ರತಿಯೊಬ್ಬ ಯುವಕರ ಜನ್ಮಸಿದ್ಧ ಹಕ್ಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT