ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿಗೆ ಹೋಗೋಣ್ವಾ? ಪ್ರೀತಿ – ಆಕರ್ಷಣೆಯ ನಡುವೆ...

Last Updated 25 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಹದಿವಯಸ್ಸಿನ ಜೋಡಿಗಳ ಮೊದಲ ಭೇಟಿಯ ಪ್ರೀತಿ ಶಾಶ್ವತವಾಗಿ ಉಳಿಯಬೇಕು. ಈ ಹಂತದಲ್ಲಿ ಹುಟ್ಟುವ ಗೊಂದಲಗಳ ನಿವಾರಣೆಗೆ ಅನುಸರಿಸಬಹುದಾದ ಗೌರವಯುತ ದಾರಿಗಳು ಇಲ್ಲಿವೆ.

***

ಕಾಲೇಜು ಕ್ಯಾಂಪಸ್ಸಿನಲ್ಲೋ ಸಾಮಾಜಿಕ ಸಂದರ್ಭದಲ್ಲೋ ಭೇಟಿಯಾಗುತ್ತೀರಿ. ಕಣ್ಣೋಟಗಳು ಸೇರಿದಂತೆ ಒಂದು ಕ್ಷಣ ದೇಹ ಸ್ಪಂದಿಸುತ್ತದೆ. ಅಲ್ಲಿಂದಲೇ ಕಾಡುವ ಸೆಳೆತದ ಆರಂಭ. ಇದೇನು ಮೊದಲ ನೋಟದ ಪ್ರೀತಿಯೇ?

ಹದಿಯವಸ್ಸಿಗೆ ಬಂದಂತೆ ದೇಹದಲ್ಲಿ ಹಾರ್ಮೋನ್‌ಗಳನ್ನು ಸೃಜಿಸಿ ಗಂಡು–ಹೆಣ್ಣುಗಳನ್ನು ಹತ್ತಿರ ಸೆಳೆಯುವ ಪ್ರಕೃತಿಯ ಪವಾಡ ಇದು. ಇದನ್ನು ಆಕರ್ಷಣೆ ಎಂದು ಕರೆಯೋಣ. ಸಾಹಿತ್ಯ, ಸಿನಿಮಾಗಳಲ್ಲಿ ಇದನ್ನೇ ಪ್ರೀತಿ ಎನ್ನುತ್ತಾರೆ. ಪ್ರೀತಿ ಆಕರ್ಷಣೆಯಿಂದಲೇ ಪ್ರಾರಂಭವಾಗುತ್ತದೆ. ಆದರೆ ನಮ್ಮ ಸಾಮಾಜಿಕ ಸಂದರ್ಭಗಳಲ್ಲಿ ದೀರ್ಘಕಾಲ ಉಳಿಯಬೇಕಾದ ಸಂಬಂಧಕ್ಕೆ ಕಣ್ಣೋಟದ ಆಕರ್ಷಣೆಯಿಂದ ಮುಂದೆ ಹೋಗಿ ಪರಸ್ಪರ ಪರಿಚಿತರಾಗಬೇಕಾಗುತ್ತದೆ. ಇಲ್ಲಿಂದಲೇ ಆಕರ್ಷಣೆ ಪ್ರೀತಿಗಳ ನೂರಾರು ಗೊಂದಲಗಳು ನಿಮ್ಮೆದುರು ತೆರೆದುಕೊಳ್ಳುತ್ತದೆ.

‘ಕಾಫಿಗೆ ಬರ್ತೀರಾ?’ ಎಂದು ನೀವೇ ಕೇಳಬಹುದು ಅಥವಾ ಅವನು/ಳು ಕೇಳಬಹುದು. ಇದನ್ನು ಪ್ರೀತಿ ಗಟ್ಟಿಯಾಗುತ್ತಿರುವುದರ ಸೂಚನೆಯೆಂದು ನಿಮ್ಮೊಳಗಿನ ಹಾರ್ಮೋನ್‌ಗಳು ಹೇಳಬಹುದು. ಸ್ವಲ್ಪ ನಿಧಾನಿಸಿ, ನಿಮ್ಮೊಳಗೆ ಆಕರ್ಷಣೆ ಮೂಡುತ್ತಿರುವುದನ್ನು ಗುರುತಿಸಿಕೊಳ್ಳಿ ಮತ್ತು ಅದನ್ನು ಸಹಜವೆಂದು ಒಪ್ಪಿಕೊಳ್ಳಿ. ಪ್ರೀತಿಯ ದಾರಿ ಇನ್ನೂ ದೂರವಿದೆ ಎಂದು ನೆನಪಿಸಿಕೊಳ್ಳಿ.

ಸ್ನೇಹಿತ/ತೆಯ ಆಹ್ವಾನ ನಿಮಗೆ ಒಪ್ಪಿಗೆಯಿಲ್ಲದಿದ್ದರೆ ‘ಕ್ಷಮಿಸಿ‘ ಎಂದು ನಯವಾಗಿ ಹೇಳಿ ಮುನ್ನಡೆಯಿರಿ. ಅನಗತ್ಯವಾದ ಸಿಟ್ಟು ಟೀಕೆ, ಚುಚ್ಚುಮಾತುಗಳ ಅಗತ್ಯವೇನಿರುವುದಿಲ್ಲ. ಹಾಗೊಮ್ಮೆ ನಿಮ್ಮ ಆಹ್ವಾನವನ್ನು ಅವನು/ಳು ತಿರಸ್ಕರಿಸಿದರೂ ‘ಧನ್ಯವಾದಗಳು’ ಎಂದು ಹೇಳಿ ದೂರವಿರಿ. ತಕ್ಷಣಕ್ಕೆ ನಿಮ್ಮ ಕುರಿತು ನಿಮ್ಮೊಳಗೇ ಕಹಿಭಾವನೆಗಳು ಮೂಡಬಹುದು. ಅವರು ತಿರಸ್ಕರಿಸುತ್ತಿರುವುದು ನಿಮ್ಮ ಸ್ನೇಹದ ಆಹ್ವಾನವನ್ನೇ ಹೊರತು, ನಿಮ್ಮ ಸಂಪೂರ್ಣ ವ್ಯಕ್ತಿತ್ವವನ್ನಲ್ಲ ಎಂದು ನೆನಪು ಮಾಡಿಕೊಳ್ಳಿ. ‘ನಿಮ್ಮ ಆತ್ಮಗೌರವವನ್ನು ನೀವಾಗಿಯೇ ಬಿಟ್ಟುಕೊಡದಿದ್ದರೆ ಯಾರೂ ಕಸಿದುಕೊಳ್ಳಲಾಗುವುದಿಲ್ಲ’ ಎನ್ನುವ ಗಾಂಧೀಜಿಯ ಮಾತುಗಳನ್ನು ಅನ್ವಯಿಸಿಕೊಳ್ಳಿ.

ಸರಿ, ಇಬ್ಬರ ಒಪ್ಪಿಗೆಯಿಂದ ಭೇಟಿ ನಿರ್ಧಾರವಾಯಿತು. ಹಾಗಿದ್ದರೂ ಸಂಬಂಧಗಳು ಗಟ್ಟಿಯಾಗಲು ಸಾಕಷ್ಟು ಸಮಯದ ಅಗತ್ಯವಿರುತ್ತದೆ. ಆದರೇನು ಮಾಡುವುದು? ಹದಿವಯಸ್ಸಿನ ಹಾರ್ಮೋನ್‌ಗಳು ನಿಮ್ಮೊಳಗೆ ತೀವ್ರವಾಗಿ ಒತ್ತಡವನ್ನು ಹೇರುತ್ತಿರುತ್ತವೆ. ಇದನ್ನು ಆಗಾಗ ನೆನಪಿಸಿಕೊಂಡು ನಿಮ್ಮನ್ನೇ ಸಂತೈಸಿಕೊಳ್ಳಿ. ಭೇಟಿಯಾದಾಗ ಅಲ್ಲಿ ಮಾತನಾಡುವುದು ವರ್ತಿಸುವುದು ಹೇಗೆ? ಎಲ್ಲಾ ಭೇಟಿಗಳಿಗೆ ಉಪಯುಕ್ತವಾಗುವ ಕೆಲವು ಸರಳ ಅಂಶಗಳನ್ನು ಹೇಳುತ್ತೇನೆ.

ನಿಮ್ಮೊಳಗೆ ಅನಿಶ್ಚಿತತೆ, ಆತಂಕ ಕಾಡುತ್ತಿದ್ದರೆ ಮೊದಲೇ ಅದನ್ನು ಹೇಳಿಕೊಂಡು ಬಿಡಿ. ಇದರಿಂದ ಮುಂದಿನ ಮಾತುಕತೆ ಸರಾಗವಾಗುತ್ತದೆ.

ಎಲ್ಲಾ ಮಾಹಿತಿಯನ್ನು ತಿಳಿಯುವ ಮತ್ತು ಹಂಚಿಕೊಳ್ಳುವ ಕುತೂಹಲ ಸಹಜವಾದದ್ದು. ಆದರೆ ತುಂಬಾ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುವಷ್ಟು ಸಂಬಂಧಗಳು ಗಟ್ಟಿಯಾಗಿವೆಯೇ ಎನ್ನುವ ಎಚ್ಚರಿಕೆಯೂ ಇರಬೇಕಲ್ಲವೇ? ಅದಿಲ್ಲದಿದ್ದರೆ ಅನಗತ್ಯವಾಗಿ ತೊಂದರೆಗಳನ್ನು ಆಹ್ವಾನಿಸಿಕೊಂಡಂತಾಗಬಹದು.

ಉದಾಹರಣೆಗೆ ಹಿಂದಿನ ಸ್ನೇಹಿತ/ತೆಯ ಕುರಿತ ಮಾಹಿತಿಗಳನ್ನು ಹೇಳಿಕೊಳ್ಳುವ ಅಥವಾ ತಿಳಿದುಕೊಳ್ಳುವಂತಹ ಸೂಕ್ಷ್ಮ ವಿಚಾರಗಳನ್ನು ಮೊದಲ ಕೆಲವು ಭೇಟಿಯಲ್ಲಿ ಮಾತನಾಡುವುದು ಕಷ್ಟವಾಗಬಹುದು. ಇಂತಹ ವಿಷಯ ಗಳು ಇಬ್ಬರಲ್ಲಿಯೂ ಹಲವಾರು ಭಾವನೆಗಳನ್ನು ಕೆರಳಿಸಿ ಸ್ನೇಹ ಆರಂಭದಲ್ಲಿಯೇ ಮುರಿದುಬೀಳುವ ಸಾಧ್ಯತೆಗಳಿರುತ್ತವೆ. ಅಥವಾ ಆ ವ್ಯಕ್ತಿ ಇದನ್ನು ಅನಗತ್ಯವಾಗಿ ಸಾರ್ವಜನಿಕಗೊಳಿಸಿ ನಿಮಗೆ ಮುಜುಗರ ಉಂಟುಮಾಡಬಹುದು.

ಇವನೇ/ಳೇ ನನ್ನ ಜೀವನ ಸಂಗಾತಿ ಎಂದು ತೀರ್ಮಾನಿಸಿಕೊಂಡು ಮುಂದುವರಿದರೆ ಅಹಿತಕರ ಅನುಭವಗಳನ್ನು ಕಡೆಗಣಿಸುತ್ತೀರಿ. ಇದರಿಂದ ಮುಂದೆ ಪಶ್ಚಾತ್ತಾಪಪಡಬೇಕಾಗಬಹುದು. ಇವನು/ಳು ನನ್ನ ಸಂಗಾತಿಯಾಗಬಹುದೇ? ಎನ್ನುವ ಕುತೂಹಲದ ಪ್ರಶ್ನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುಂದುವರಿಯಿರಿ.

ನಿಮಗೆ ಹಂಚಿಕೊಳ್ಳಲು ಇಷ್ಟವಿರದ ಮಾಹಿತಿಗಳಿಗೆ ಬೇಡಿಕೆ ಬಂದರೆ ನಯವಾಗಿ ತಿರಸ್ಕರಿಸಿ. ‘ಕ್ಷಮಿಸಿ, ಸದ್ಯಕ್ಕೆ ಈ ವಿಷಯ ಮಾತನಾಡಲು ಇಷ್ಟವಿಲ್ಲ. ಮುಂದೆ ನಮ್ಮ ಸ್ನೇಹಕ್ಕೆ ಗಟ್ಟಿತನ ಬಂದಾಗ ಮಾತ್ರ ಹೇಳುತ್ತೇನೆ’ ಎಂದು ಮುಗಿಸಿಬಿಡಿ. ಹಾಗೆಯೇ ಅವರಿಗೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸದಿರುವ ಸ್ವಾತಂತ್ರ್ಯವಿದೆ ಎಂದು ನೆನಪಿಸಿಕೊಳ್ಳಿ. ತಕ್ಷಣ ಎಲ್ಲವನ್ನೂ ಹಂಚಿಕೊಂಡುಬಿಡುವುದೇ ಪ್ರೀತಿಯ ಮೊದಲ ಅಗತ್ಯವಲ್ಲ.

ಎದುರಿಗೆ ಇರುವವರ ಮೇಲೆ ಪ್ರಭಾವ ಬೀರಬೇಕೆನ್ನುವ ಒತ್ತಡಗಳು ಮನುಷ್ಯ ಸಹಜ. ಆದರೆ ಅದಕ್ಕಾಗಿ ಸುಳ್ಳುಗಳನ್ನು ಬಳಸಬೇಡಿ. ನಂಬಿಕೆ ಸಂಬಂಧಗಳ ಅಡಿಗಲ್ಲು. ಸುಳ್ಳುಗಳ ಮೇಲೆ ಕಟ್ಟುವ ಸಂಬಂಧ ಅಡಿಪಾಯವಿರದ ಕಟ್ಟಡ. ಎಲ್ಲವನ್ನೂ ಹೇಳದಿದ್ದರೂ ತೊಂದರೆಯಿಲ್ಲ. ಆದರೆ ಹೇಳುವುದರಲ್ಲಿ ಸುಳ್ಳುಗಳನ್ನು ಸೇರಿಸುವುದು ಅಪಾಯಕರ.

lಹುಡುಗಿಯರು ಭಾವಜೀವಿಗಳು ಎನ್ನುವುದು ಒಂದು ಸಾಮಾನ್ಯ ತಿಳಿವಳಿಕೆ. ಹುಡುಗರೂ ಕೂಡ ಹುಟ್ಟುವಾಗ ಅಷ್ಟೇ ಭಾವಜೀವಿಗಳು. ಆದರೆ ಪುರುಷ ಪ್ರಧಾನ ಚಿಂತನೆಗಳಿಂದಾಗಿ ಭಾವನೆಗಳನ್ನು ಅನುಭವಿಸುವುದು ವ್ಯಕ್ತಪಡಿಸುವುದು ದೌರ್ಬಲ್ಯ ಎನ್ನುವಂತೆ ಬೆಳೆಸಲಾಗಿರುತ್ತದೆ. ಹುಡುಗರ ಭಾವನೆಗಳು ಮಾತಿನಲ್ಲಿ ಅಲ್ಲದಿದ್ದರೂ ಕಣ್ಣಿನಲ್ಲಾದರೂ ವ್ಯಕ್ತವಾಗಿರುವುದನ್ನು ಹುಡುಗಿಯರು ಗಮನಿಸಬಹುದು.

ಭೇಟಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳನ್ನು ಮೊದಲೇ ತೀರ್ಮಾನಿಸಿಕೊಂಡರೆ ಅನಗತ್ಯ ಭಿನ್ನಾಭಿಪ್ರಾಯಗಳು ಮತ್ತು ಕಹಿ ಘಟನೆಗಳನ್ನು ತಪ್ಪಿಸಬಹುದು. ಉದಾಹರಣೆಗೆ ಯಾರು ಹೋಟೆಲ್‌ನಲ್ಲಿ ಹಣ ಪಾವತಿಸುವವರು? ಸಮಯದ ಮಿತಿಗಳೇನು?ಮುಂತಾದವು.

ಭಿನ್ನಾಭಿಪ್ರಾಯಗಳು ಅನಿವಾರ್ಯ. ಅವು ಬಂದ ಕೂಡಲೆ ಸಂಬಂಧಗಳನ್ನು ಕಡಿದುಕೊಳ್ಳಬೇಕಿಲ್ಲ. ಬದಲಿಗೆ ಅವುಗಳನ್ನು ಗೌರವಯುತವಾಗಿ ನಿಭಾಯಿಸಲು ಸಾಧ್ಯವೇ ಎಂದು ಚರ್ಚಿಸಿ. ಸ್ನೇಹದಿಂದ ದೂರಾಗುವುದು ಅನಿವಾರ್ಯವಾದರೆ ಮನಸ್ಸನ್ನು ಕಹಿಮಾಡಿಕೊಳ್ಳದೆ ಗೌರವಯುತವಾಗಿ ಬೀಳ್ಕೊಡುವುದು ಹೇಗೆ ಎಂದು ಯೋಚಿಸಿ. ಕೆಲವೊಮ್ಮೆ ತಾತ್ಕಾಲಿಕವಾಗಿ ನೋವನ್ನು ಸಹಿಸಬೇಕಾಗಬಹುದು. ಆದರೆ ಒತ್ತಾಯ ಒತ್ತಡಗಳಿಗೆ ಮಣಿದು ನಿಮ್ಮ ಸ್ವಂತಿಕೆಯನ್ನು ಬಿಟ್ಟುಕೊಡುವುದು ಕ್ಷೇಮವಲ್ಲ.

ಕರುಳಿನ ಕರೆ

ಸಂಬಂಧವನ್ನು ಉಳಿಸಿಕೊಳ್ಳುವ ಮತ್ತು ಗಟ್ಟಿಯಾಗಿಸುವ ಪ್ರಯತ್ನದಲ್ಲಿ ಕೆಲವೊಮ್ಮೆ ನಿಮಗಿಷ್ಟವಿಲ್ಲದ ಕೆಲಸಗಳನ್ನು ಮಾಡಿಬಿಡಬಹುದು. ಆಗ ನಿಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿರುವ ಅನುಭವವಾಗುತ್ತದೆ. ಇದನ್ನು ಗುರುತಿಸುವಷ್ಟರಲ್ಲಿ ಹಿಂದಿರುಗಲಾರದಷ್ಟು ದೂರ ಹೋಗಿರುವ ಸಾಧ್ಯತೆಗಳಿರುತ್ತವೆ. ನಾನು ಒತ್ತಡಕ್ಕೆ ಒಳಗಾಗುತ್ತಿದ್ದೇನೆ ಎಂದು ಆದಷ್ಟು ಬೇಗ ತಿಳಿದುಕೊಳ್ಳುವುದು ಹೇಗೆ? ದೇಹವನ್ನು ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಿ. ದೇಹದ ಹಲವಾರು ಭಾಗಗಳಲ್ಲಿ ಅಹಿತಕರ ಅನುಭವವಾಗಬಹುದು. ಎದೆಬಡಿತ ಹೆಚ್ಚುವುದು, ಮಾಂಸಖಂಡಗಳು ಬಿಗಿಯಾಗುವುದು ಮುಂತಾದವು ನೀವು ಸುರಕ್ಷಿತ ವಾತಾವರಣದಲ್ಲಿ ಇಲ್ಲ ಎಂದು ದೇಹ ನೀಡುವ ಸೂಚನೆಯಾಗಿರುತ್ತದೆ. ಹೆಚ್ಚಿನ ಜನರಿಗೆ ಹೊಟ್ಟೆ ಮತ್ತು ಕರುಳಿನ ಭಾಗದಲ್ಲಿ ಕಿರಿಕಿರಿಯ ಅನುಭವವಾಗುತ್ತದೆ. ತಕ್ಷಣ ನಿಧಾನಿಸಿ ವಿವೇಚನೆಯಿಂದ ಮುಂದುವರೆಯಿರಿ. ‘ಕಣ್ಣರಿಯದಿದ್ದೊಡೇಂ ಕರುಳರಿಯದೇ?‘ ಎಂದು ಆದಿಕವಿ ಪಂಪ ಹೇಳಿಲ್ಲವೇ?

(ಲೇಖಕರು ಆಪ್ತ ಸಮಾಲೋಚಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT