ಮೂಲ ವಿಜ್ಞಾನದತ್ತ ಗಮನ ಅವಶ್ಯ

ಗುಲ್ಬರ್ಗ: ವಿಜ್ಞಾನದ ವಿದ್ಯಾರ್ಥಿಗಳು ಮೂಲ ವಿಜ್ಞಾನದ ಕಡೆ ಗಮನ ಹರಿಸುವುದು ಪ್ರಸ್ತುತ ಅವಶ್ಯವಾಗಿದೆ ಎಂದು ಗುಲ್ಬರ್ಗ ಕಾಲೇಜು ಶಿಕ್ಷಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಪ್ರೊ. ಶಿವರಾಜ ಎಂ.ದೇವಪ್ಪ ತಿಳಿಸಿದರು.
ನಗರದ ವಿ.ಜಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿ.ಜಿ ಮಹಿಳಾ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಮನೋಭಾವ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಅರಿತು, ಉತ್ತಮ ಶಿಕ್ಷಣ ನೀಡುವುದರ ಮುಖಾಂತರ ಉದ್ಯೋಗಿಗಳನ್ನು ನಿರ್ಮಾಣ ಮಾಡುವುದಲ್ಲದೆ ಸೃಜನಶೀಲ ವಿಜ್ಞಾನಿಗಳನ್ನು ತಯಾರು ಮಾಡಿ ಹೊರತರಬೇಕಾಗಿದೆ ಎಂದರು.
ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ವಿಜ್ಞಾನ, ತಂತ್ರಜ್ಞಾನ ಬಗ್ಗೆ ತಿಳಿವಳಿಕೆ ಮೂಡಿಸಿ ಮೂಲ ವಿಜ್ಞಾನದ ಕಡೆ ಗಮನ ಹರಿಸುವಂತೆ ಮಾಡುವ ಜವಬ್ದಾರಿ ಪೋಷಕರು ಮತ್ತು ವಿಜ್ಞಾನ ಪ್ರಾಧ್ಯಾಪಕರು ಮೇಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ವಿಜ್ಞಾನಿಗಳಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳೆದು, ಇನ್ನೂ ವೇಗವಾಗಿ ಅವರ ಬೌದ್ಧಿಕಶಕ್ತಿ ಬೆಳೆಯಲು ವಿಜ್ಞಾನ ಮತ್ತು ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವಿದ್ಯಾರ್ಥಿ ವಿಜ್ಞಾನಿಗಳಿಗೆ ಸಮಾನ ಸ್ಥಾನ ನೀಡಿ ಉನ್ನತ ಮಟ್ಟದಲ್ಲಿ ಬೆಳೆಸುವಂತಾಗಲಿ, ಇಂದಿನ ಮಕ್ಕಳು ಮುಂದಿನ ಉತ್ತಮ ವಿಜ್ಞಾನಿಗಳಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿದ್ದ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ಕಾರ್ಯಕಾರಿ ಸದಸ್ಯ ಶ್ರೀಶೈಲ ಘೂಳಿ, ಪದವಿ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ರಾಜ್ಯ ಸಂಯೋಜಕ ಹಾಗೂ ಕಾರ್ಯಕಾರಿ ಸದಸ್ಯ ಡಾ.ಅಶೋಕ ಸಜ್ಜನ ಶೆಟ್ಟಿ ಉಪಸ್ಥಿತರಿದ್ದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಿವರಾಜ ಎಸ್.ನಿಗ್ಗುಡಗಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ಖಜಾಂಚಿ ಗಿರೀಶ ಕಡ್ಲೇವಾಡ ಪ್ರಾಸ್ತವಿಕವಾಗಿ ಮಾತನಾಡಿದರು. ವಿ.ಜಿ.ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಸಿ.ಪಾಟೀಲ ಸ್ವಾಗತಿಸಿದರು. ಡಾ.ಆರ್.ವಿ. ಕೊಂಡ ವಂದಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.