ಹಾಗಾಗಿ ಬಾಳೆಗೊನೆಗೆ ನೇರವಾಗಿ ಪೋಷಕಾಂಶಗಳನ್ನು ಪೂರೈಸುವಂತಹ ವಿಧಾನವೊಂದನ್ನು ತುಮಕೂರು ಭಾಗದ ಕೆಲ ರೈತರು ಅನುಸರಿಸುತ್ತಿದ್ದಾರೆ. ಆ ವಿಧಾನ ಹೀಗಿದೆ.
ಪೋಷಕಾಂಶ ಪೂರೈಕೆ ವಿಧಾನ
1 ಕೆ.ಜಿ. ಸಗಣಿ, 1 ಲೀಟರ್ ಗಂಜಲ ಮತ್ತು 1 ಲೀಟರ್ ನೀರನ್ನು ಮಿಶ್ರಣ ಮಾಡಿ. ಆ ಮಿಶ್ರಣವನ್ನು ಒಂದು ಕವರ್ನಲ್ಲಿ ತುಂಬಿ. ಕವರಿನ ಬಾಯಿಯನ್ನು ಗೊನೆಗೆ ಕಟ್ಟಬೇಕು. ಕಟ್ಟುವಾಗ ಗೊನೆಗಳಲ್ಲಿನ ಹೂವನ್ನು ಓರೆಯಾಗಿ ಕತ್ತರಿಸಿ, ಗೊನೆಯ ತುದಿ ಮಿಶ್ರಣ ತುಂಬಿದ ಕವರ್ ಒಳಗೆ ಪೂರ್ತಿ ಮುಳುಗಿಸಿ, ಕವರ್ ಬಾಯಿಯನ್ನು ಬಿಗಿಯಾಗಿ ಕಟ್ಟಬೇಕು (ಚಿತ್ರ ನೋಡಿ). ಈ ಮಿಶ್ರಣ ರೂಪದಲ್ಲಿ ಗೊನೆಗಳಿಗೆ ಪೋಷಕಾಂಶ ಪೂರೈಸುವುದರಿಂದ ಕಾಯಿಗಳು ಬೆಳವಣಿಗೆ ಹೊಂದುತ್ತವೆ. ಜತೆಗೆ, ನೋಡಲೂ ಆಕರ್ಷಕವಾಗಿರುತ್ತವೆ ಎನ್ನುವುದು ಈ ಪ್ರಯೋಗ ಬಳಸಿ ನೋಡಿರುವ ರೈತರ ಅಭಿಪ್ರಾಯ. ‘ಕೆಲವು ರೈತರು ಈ ವಿಧಾನ ಅನುಸರಿಸುತ್ತಿದ್ದಾರೆ. ಆದರೆ, ವೈಜ್ಞಾನಿಕವಾಗಿ ಇದು ದೃಢಪಟ್ಟಿಲ್ಲ’ ಎನ್ನುತ್ತಾರೆ ನಿವೃತ್ತ ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿ ಡಾ.ಎಸ್.ವಿ.ಹಿತ್ತಲಮನಿ.