ಭತ್ತ ಸಂಸ್ಕರಿಸಿ ಅಕ್ಕಿ, ತೊಗರಿ ಸಂಸ್ಕರಿಸಿ ಬೇಳೆ ಮಾಡಿ ಮಾರಾಟ ಮಾಡುವುದು ನನ್ನ ಆದ್ಯತೆ. ಇದು ನನಗೆ ಹೆಚ್ಚು ಲಾಭದಾಯಕ. ಕೃಷಿ ಕ್ಷೇತ್ರದ ಸಮಸ್ಯೆಗಳು, ಸಂಕಷ್ಟಗಳು ನನಗೆ ಹೆಚ್ಚು ಅರಿವಾಗಿದ್ದೇ ಈ ವರ್ಷ. ಅದು ಪ್ರಾಕೃತಿಕ ವಿಕೋಪ ಆಗಿರಬಹುದು ಅಥವಾ ಮಾರುಕಟ್ಟೆಯ ಸಂಕಟ ಆಗಿರಬಹುದು. ಇದಕ್ಕಾಗಿ ನಾನು ಹೊಸ ವರ್ಷ ಕೃಷಿ ವೈವಿಧ್ಯವನ್ನು ಅಳವಡಿಸಿಕೊಳ್ಳಲು ಮುಂದಾಗುತ್ತೇನೆ. ಅದರಲ್ಲೂ ಉಪಕಸುಬುಗಳನ್ನು ಅಳವಡಿಸಿಕೊಂಡರೆ ಅದು ಕೃಷಿ ಸಂಕಟಕ್ಕೆ ಒಳ್ಳೆಯ ಪರಿಹಾರ ಎಂಬುದು ಅರಿವಿಗೆ ಬಂದಿದೆ. ಈ ವರ್ಷದ ದೆಹಲಿಯು ದಟ್ಟ ಹೊಗೆ –ಮಂಜಿನಲ್ಲಿ ಮುಳುಗಿದ್ದು ಗೊತ್ತೇ ಇದೆ. ಕುತೂಹಲದ ಸಂಗತಿ ಎಂದರೆ ಅಲ್ಲಿ ನಡೆದಿದ್ದು ನಮ್ಮಲ್ಲೂ ಇದೆ. ಅದು ಭತ್ತದ ಹುಲ್ಲಿನ ಸುಡುವಿಕೆ. ಯಾದಗಿರಿಯ ರೈತರು ಸಹ ಭತ್ತದ ಹುಲ್ಲನ್ನು ಸುಡುತ್ತಾರೆ. ಅದನ್ನು ತಪ್ಪಿಸುವುದು ಹೇಗೆ? ನಾವೊಂದಿಷ್ಟು ಯುವ ರೈತರು ಭತ್ತದ ಹುಲ್ಲು ಬಳಸಿ ಅಣಬೆ ಕೃಷಿ ಮಾಡಲಿದ್ದೇವೆ. ಒಂದಷ್ಟು ಜನ ಗೊಬ್ಬರ ತಯಾರಿಕೆ ಮಾಡಲಿದ್ದೇವೆ. ವಾತಾವರಣ ಕಲುಷಿತಗೊಳಿಸುವ ಕ್ರಮಕ್ಕೆ ಈ ಹೆಜ್ಜೆ ವಿರೋಧವೇ ಸೈ!