ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಪೋಷಕಾಂಶವುಳ್ಳ ಆಯ್‌ಸ್ಟರ್‌, ಮ್ಯಾಕ್ರೋಸೈಬೆ ಅಭಿವೃದ್ಧಿಪಡಿಸಿದ ಐಐಎಚ್ಆರ್

Published 29 ಜೂನ್ 2023, 23:27 IST
Last Updated 29 ಜೂನ್ 2023, 23:27 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಕ ತಾಪಮಾನದಲ್ಲಿ ಬೆಳೆಯುವ ಮತ್ತು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಅಣಬೆ ತಳಿಗಳನ್ನು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಐಎಚ್ಆರ್) ಅಭಿವೃದ್ಧಿಪಡಿಸಿದೆ.

ಮ್ಯಾಕ್ರೋಸೈಬೆ ತಳಿ ಹೆಸರಿನ ಅಣಬೆಯನ್ನು ಬೆಂಗಳೂರಿನ ಸಿದ್ದಾಪುರದಿಂದ ಸಂಗ್ರಹಿಸಲಾಗಿದ್ದು, ಟ್ಯೂಬರ್‌ ಆಯ್‌ಸ್ಟರ್‌ ಅಣಬೆಯನ್ನು ತ್ರಿಪುರಾದ ಮಾರುಕಟ್ಟೆಯಿಂದ ಸಂಗ್ರಹಿಸಲಾಗಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಈ ಎರಡು ಅಣಬೆಗಳ ವಾಣಿಜ್ಯ ಉತ್ಪಾದನಾ ತಂತ್ರಜ್ಞಾನವನ್ನು ಐಐಎಚ್‌ಆರ್‌ ಅಭಿವೃದ್ಧಿಪಡಿಸಿದೆ.

‘ಭಾರತದಲ್ಲಿ ಇದುವರೆಗೂ ಹಾಲು ಅಣಬೆಯನ್ನು (ಮಿಲ್ಕಿ) ಮಾತ್ರ ಹೆಚ್ಚಿನ ತಾಪಮಾನದಲ್ಲಿ ಬೆಳೆಯಲಾಗುತ್ತಿತ್ತು. ಈಗ ಮ್ಯಾಕ್ರೋಸೈಬೆ ಅಣಬೆಯು ಹೆಚ್ಚಿನ ತಾಪಮಾನದಲ್ಲಿ ಬೆಳೆಯುವ ಮತ್ತೊಂದು ಅಣಬೆಯಾಗಿದೆ. ಹಾಲು ಅಣಬೆಗಿಂತ ಅಧಿಕ ಪ್ರೋಟೀನ್, ಪೋಷಕಾಂಶ, ಹೆಚ್ಚು ರುಚಿಕರವಾಗಿರವಾಗಿದೆ’ ಎಂದು ಐಐಎಚ್‌ಆರ್‌ನ ಅಣಬೆ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಚಂದ್ರಶೇಖರ ತಿಳಿಸಿದರು.

‘ಮೈಕ್ರೋಸೈಬೆ ಅಣಬೆಯನ್ನು 30–40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹಾಗೂ ಶೇ 85ರಷ್ಟು ಆರ್ದ್ರತೆಯಲ್ಲಿ ಬೆಳೆಯಬಹುದು. ಕೇವಲ ಕಡಿಮೆ ತಾಪಮಾನದಲ್ಲಿ ಬೆಳೆಯಲಾಗುತ್ತಿದ್ದ ಅಣಬೆಯನ್ನು ಈಗ, ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳು ಸೇರಿ ಅಧಿಕ ತಾಪಮಾನವಿರುವ ಪ್ರದೇಶಗಳಲ್ಲಿ ಸುಲಭವಾಗಿ ಬೆಳೆಯಬಹುದು’ ಎಂದು ವಿವರಿಸಿದರು.

‘ಟ್ಯೂಬರ್‌ ಆಯ್‌ಸ್ಟರ್‌ ಅಣಬೆಯನ್ನು ಈಶಾನ್ಯ ರಾಜ್ಯಗಳಲ್ಲಿ ಮಳೆಗಾಲದಲ್ಲಿ ಮಾತ್ರ ಸಂಗ್ರಹಿಸಿ ಸ್ಥಳಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಐಐಎಚ್‌ಆರ್‌ ಈ ಅಣಬೆಯನ್ನು ಸಂಗ್ರಹಿಸಿ ಸತತ ನಾಲ್ಕು ವರ್ಷಗಳ ಸಂಶೋಧನೆ ಮಾಡುವುದರ ಮೂಲಕ ಅಭಿವೃದ್ಧಿಪಡಿಸಿದೆ. ಈಗ ಟ್ಯೂಬರ್‌ ಆಯ್‌ಸ್ಟರ್‌ ಅಣಬೆಯನ್ನು ಈಶಾನ್ಯ ರಾಜ್ಯಗಳಲ್ಲಿ ವರ್ಷದ ಯಾವುದೇ ಋತುಮಾನದಲ್ಲಿ ಸುಲಭವಾಗಿ ಬೆಳೆಯಬಹುದು. ಈ ಅಣಬೆಯಲ್ಲಿ ಶೇ 40.34 ರಷ್ಟು ಪೌಷ್ಟಿಕಾಂಶ ಇದೆ. ಇದರಲ್ಲಿ ಮಕ್ಕಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಬಹುದು. ಈ ಅಣಬೆಯು ಶೇ 28-32 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹಾಗೂ ಶೇ 85 ರಷ್ಟು ಆರ್ದ್ರತೆಯಲ್ಲಿ ಬೆಳೆಯಬಹುದು’ ಎಂದು ಅವರು ತಿಳಿಸಿದರು.

‘ಬಹುತೇಕ ಜನ ಅಣಬೆಯನ್ನು ಮಾಂಸಾಹಾರವೆಂದು ಭಾವಿಸುತ್ತಾರೆ. ವಾಸನೆ ಇರುತ್ತದೆ ಎಂದು ತಾಜಾ ಅಣಬೆ ತಿನ್ನಲು ಹಲವು ಜನ ಇಷ್ಟಪಡುವುದಿಲ್ಲ. ಆದರೆ, ಐಐಎಚ್‍ಆರ್ ಅಣಬೆಯಿಂದ ಚಟ್ನಿಪುಡಿ, ರಸಂ ಪುಡಿ ತಯಾರಿಸಿದ್ದು, ಈ ಪುಡಿಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಯಾವುದೇ ತರಹದ ವಾಸನೆ ಬರುವುದಿಲ್ಲ. ಮಾಮೂಲಿ ರಸಂ, ಚಟ್ನಿಯಂತೆಯೇ ಇರುತ್ತದೆ’ ಎಂದರು.

ಮ್ಯಾಕ್ರೋಸೈಬೆ ಅಣಬೆ
ಮ್ಯಾಕ್ರೋಸೈಬೆ ಅಣಬೆ
ಡಾ. ಚಂದ್ರಶೇಖರ ಐಐಎಚ್‌ಆರ್‌ ಅಣಬೆ ವಿಭಾಗದ ಪ್ರಧಾನ ವಿಜ್ಞಾನಿ
ಡಾ. ಚಂದ್ರಶೇಖರ ಐಐಎಚ್‌ಆರ್‌ ಅಣಬೆ ವಿಭಾಗದ ಪ್ರಧಾನ ವಿಜ್ಞಾನಿ

‘ಭತ್ತದ ಹುಲ್ಲಿನಲ್ಲಿ ಅಧಿಕ ಇಳುವರಿ’

ಈ ಎರಡು ತಳಿಯ ಅಣಬೆಗಳನ್ನು ಸಂರಕ್ಷಿಸುವುದರ ಜತೆಗೆ ಪ್ರಯೋಗಾಲಯದ ಸ್ಥಿತಿಗೆ ಒಗ್ಗಿಕೊಳ್ಳುವುದಕ್ಕಾಗಿಯೇ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಬೇರೆ–ಬೇರೆ ಕೃಷಿ ತ್ಯಾಜ್ಯಗಳ ಮೇಲೆ ಈ ಅಣಬೆಗಳನ್ನು ಬೆಳೆಯಲಾಗಿದೆ. ಅಂತಿಮವಾಗಿ ಭತ್ತದ ಹುಲ್ಲಿನ ಮೇಲೆಯೇ ಅಧಿಕ ಇಳುವರಿ ಪಡೆಯಬಹುದು’ ಎಂದು ಡಾ. ಚಂದ್ರಶೇಖರ ಮಾಹಿತಿ ನೀಡಿದರು. ಅಣಬೆಯಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಸಾಕಷ್ಟು ನ್ಯೂಟ್ರಿಷನ್ಸ್ ಐರನ್ ಕ್ಯಾಲ್ಷಿಯಂ ಮಿನರಲ್ಸ್‍ಗಳಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಫೈಬರ್ (ನಾರಿನಾಂಶ) ಹೆಚ್ಚಾಗಿದ್ದು ಕೊಬ್ಬಿನಾಂಶ ಕಡಿಮೆಯಿರುತ್ತದೆ. ಹೀಗಾಗಿ ಅಣಬೆ ದೇಹದ ಆರೋಗ್ಯಕ್ಕೆ ಉತ್ತಮವಾದುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT