<p>ಬೆಳಗಿನ ಐದು ಗಂಟೆ. ಸಾಮಾನ್ಯವಾಗಿ ಮಾರುಕಟ್ಟೆಯ ಗದ್ದಲಕ್ಕೆ, ಬಸ್ ನಿಲ್ದಾಣದ ಕೂಗು-ಗಲಾಟೆಗೆ ಎಚ್ಚರವಾಗುವ ಯಲ್ಲಾಪುರ ಪಟ್ಟಣ ಆ ದಿನ ಬೇರೆ ರಾಗ ಹಿಡಿದಿರುತ್ತದೆ. ಮನೆಮನೆಗಳಲ್ಲಿ ಸಡಗರ, ಸಂಭ್ರಮ. ಹೆಂಗಸರು ಗಡಿಬಿಡಿಯಲ್ಲೇ ಒಲೆಗಳನ್ನು ಹಚ್ಚುತ್ತಾರೆ. ಕುರುಕು ತಿಂಡಿಗಳ ಸುವಾಸನೆ, ಬುತ್ತಿ ಕಟ್ಟುವ ಗದ್ದಲ-ಇವೆಲ್ಲವೂ ಹಬ್ಬದ ಮುನ್ಸೂಚನೆ ನೀಡುತ್ತವೆ.</p>.<p>ಆದರೆ ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಅದೇ ಪಟ್ಟಣ ಲಾಕ್ಡೌನ್ ಆದಂತೆ ನಿಶ್ಶಬ್ದವಾಗಿಬಿಡುತ್ತದೆ. ಅಂಗಡಿ ಮುಂಗಟ್ಟುಗಳು ಮುಚ್ಚಿ, ಮನೆಗಳಿಗೆ ಬೀಗ ಹಾಕಿ, ರಸ್ತೆಗಳಲ್ಲಿ ನರಪಿಳ್ಳೆಯೂ ಕಾಣದ ದೃಶ್ಯ ಹೊಸಬರಿಗೆ ಆಶ್ಚರ್ಯವನ್ನು ಉಂಟು ಮಾಡಬಹುದು.</p>.<p>ಇದು ಯಲ್ಲಾಪುರದ ಅಪರೂಪದ ಸಂಪ್ರದಾಯ–‘ಹೊರ ಮಂಗಳವಾರ’.</p>.<p><strong>ಜಾತ್ರೆಗೆ ನಾಂದಿ</strong></p>.<p>ಉತ್ತರ ಕನ್ನಡ ಜಿಲ್ಲೆಯ ಈ ಪಟ್ಟಣದಲ್ಲಿ ಗ್ರಾಮದೇವಿಯ ಜಾತ್ರೆ ಪ್ರತಿ ಮೂರು ವರ್ಷಕ್ಕೊಮ್ಮೆ ಒಂಬತ್ತು ದಿನ ಅದ್ದೂರಿಯಾಗಿ ನಡೆಯುತ್ತದೆ. ಈ ವರ್ಷ ಫೆಬ್ರುವರಿ 11ರಿಂದ ಜಾತ್ರೆ ಆರಂಭವಾಗಿದೆ. ಜಾತ್ರೆಗೆ ಮುನ್ನ ಬರುವ ಮೂರು ಅಥವಾ ಐದು ಮಂಗಳವಾರಗಳನ್ನು ‘ಹೊರ ಮಂಗಳವಾರ’ ಎಂದು ಆಚರಿಸುವುದು ಶತಮಾನಗಳ ಹಿಂದಿನಿಂದ ಬಂದಿರುವ ನಂಬಿಕೆ.</p>.<p>ಗ್ರಾಮದೇವಿಯ ಅನುಗ್ರಹದಿಂದಲೇ ಊರು ಉಳಿದಿದೆ ಎಂಬ ಭಕ್ತಿಭಾವ ಇಲ್ಲಿ ಗಾಢವಾಗಿದೆ. ಜಾತ್ರೆಗೆ ನಾಂದಿ ಹಾಡುವಂತೆ ಈ ಮಂಗಳವಾರಗಳು ಆಚರಣೆಗೊಳ್ಳುತ್ತವೆ. ಇದು ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಒಂದು ಸಮೂಹ ಅನುಭವ.</p>.<p><strong>ಮನೆ ಬಿಡುವ ಕ್ಷಣ...</strong></p>.<p>ಆ ದಿನ ಬೆಳಗ್ಗೆ ಹತ್ತು ಗಂಟೆಯೊಳಗೆ ಪಟ್ಟಣದ ಎಲ್ಲರೂ ಮನೆಗೆ ಬೀಗ ಹಾಕಿ ಹೊರಡಬೇಕು ಎಂಬ ಅಲಿಖಿತ ನಿಯಮ. ಹೊರಡುವ ಮುನ್ನ ಮನೆಯ ಹಿರಿಯ ಮುತ್ತೈದೆ ದೇವರಿಗೆ ಪೂಜೆ ಸಲ್ಲಿಸಿ, ದೇವರ ಬಟ್ಟಲಲ್ಲಿ ಅರಿಸಿನ-ಕುಂಕುಮ ಇಟ್ಟು, ‘ಅಮ್ಮ ಮನೆಗೆ ಬನ್ನಿ’ ಎಂಬ ಮನದ ಮಾತು ಹೇಳಿ ಹೊರಡುತ್ತಾರೆ.</p>.<p>ಭಕ್ತರ ನಂಬಿಕೆಯಂತೆ, ಆ ದಿನ ದೇವಿ ಮನೆಗೆ ಬಂದು ಆ ಅರಿಸಿನ-ಕುಂಕುಮವನ್ನು ಸ್ವೀಕರಿಸುತ್ತಾಳೆ. ದೇವಿಯ ಗಣಗಳು ಊರನ್ನು ಸುತ್ತಾಡುತ್ತವೆ ಎಂಬ ಮತ್ತೊಂದು ಶ್ರದ್ಧೆಯೂ ಇದೆ. ದೇವಿಯ ಸಂಚಾರಕ್ಕೆ ಮನೆಗಳು ತೆರವಾಗಿರಬೇಕು ಎಂಬ ಭಾವನೆ ಈ ಆಚರಣೆಯ ಹಿಂದಿನ ನಂಬಿಕೆ.</p>.<p><strong>ಎಲ್ಲಿಗೆ ಹೋಗುತ್ತಾರೆ?</strong></p>.<p>‘ಹೊರ ಮಂಗಳವಾರ’ ಎಂದರೆ ಶೋಕದ ದಿನವಲ್ಲ, ಅದು ಸಂತಸದ ದಿನ. ಕುಟುಂಬಗಳು ಸಮೀಪದ ಉದ್ಯಾನಗಳು, ಜಲಪಾತಗಳು, ಕಾನುಗಳು, ತಾಣಗಳು, ಹೊರ ಊರುಗಳ ಕಡೆಗೆ ತೆರಳುತ್ತಾರೆ. ಅಲ್ಲಿ ಚಾಪೆ, ಜಮಖಾನ ಹಾಸುತ್ತಾರೆ. ಮನೆಯಿಂದ ತೆಗೆದುಕೊಂಡು ಹೋಗಿರುವ ತಿಂಡಿ-ತಿನಿಸು, ಊಟದ ಡಬ್ಬಿಗಳು, ಬುತ್ತಿ, ಗಂಟುಗಳನ್ನು ಇಡುತ್ತಾರೆ. ಜೊತೆಗೆ ಕುಡಿಯುವ ನೀರಿನ ಕ್ಯಾನ್ಗಳೂ ಇರುತ್ತವೆ.</p>.<p>ಮಕ್ಕಳಿಗೆ ಆಟವಾಡುವ ಸಂಭ್ರಮ. ಕಣ್ಣಾಮುಚ್ಚಾಲೆ, ಓಡಾಟ. ಹಿರಿಯರಿಗೆ ಮನೆಮನೆ ಕತೆಗಳನ್ನು ಹಂಚಿಕೊಳ್ಳುವ ಅವಕಾಶ. ಯುವ ಸಮೂಹಕ್ಕೆ ರೀಲ್ಸ್ ಮಾಡುವ ಉತ್ಸಾಹ. ಗಂಡಸರಿಗೆ ಲೋಕ-<br>ರಾಜಕೀಯದಿಂದ ಹಿಡಿದು ಕೃಷಿ-ವ್ಯಾಪಾರದವರೆಗಿನ ಚರ್ಚೆಗಳು ಜಾರಿಯಲ್ಲಿರುತ್ತವೆ.</p>.<p>ಅಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಿಂದ ತಂದ ಬುತ್ತಿಗಳನ್ನು ಹಂಚಿಕೊಂಡು ತಿನ್ನುತ್ತಾರೆ. ಆ ಕ್ಷಣದಲ್ಲಿ ತಾರತಮ್ಯವೆಲ್ಲ ಕರಗಿಹೋಗುತ್ತವೆ. ಉಳಿಯುವುದು ಕೇವಲ ಒಟ್ಟುಗೂಡುವ ಸಂತೋಷ. ಇವೆಲ್ಲವೂ ಒಂದು ಧಾರ್ಮಿಕ ಪಿಕ್ನಿಕ್ನ ನೆನಪನ್ನು ಮೂಡಿಸುತ್ತವೆ. ಬದುಕಿನ ಜಂಜಾಟದಿಂದ ಒಂದು ದಿನದ ವಿರಾಮ–ಮೊಬೈಲ್ ಸಿಗ್ನಲ್ಗಿಂತ ಸಂಬಂಧಗಳ ಸಿಗ್ನಲ್ ಬಲವಾಗುವ ದಿನ.</p>.<p><strong>ವಿನಾಯಿತಿಯೂ ಉಂಟು</strong></p>.<p>ಮನೆಯಲ್ಲಿ ರೋಗಿಗಳು ಇದ್ದರೆ ವಿನಾಯಿತಿ ಇದೆ. ಅವರನ್ನು ಹೊರಗೆ ಕರೆತರಲು ಸಾಧ್ಯವಾಗದ ಕಾರಣ ಮನೆಯಲ್ಲೇ ಬಿಡುತ್ತಾರೆ. ಅವರನ್ನು ನೋಡಿಕೊಳ್ಳಲು ಒಬ್ಬರನ್ನು ಇರಿಸಲಾಗುತ್ತದೆ. ಇಂತಹ ಮನೆಗಳಲ್ಲೂ ಮುಂದಿನ ಬಾಗಿಲಿಗೆ ಬೀಗ ಹಾಕಲಾಗುತ್ತದೆ; ಮತ್ತೊಂದು ಬಾಗಿಲು ತೆರೆದಿರುತ್ತದೆ. ಆಚಾರಕ್ಕೂ, ಅವಶ್ಯಕತೆಗೂ ಮಧ್ಯದ ಸಮತೋಲನ.</p>.<p>ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಆದರೆ ಸಿಬ್ಬಂದಿ ಹಾಜರಾತಿ ಕಡಿಮೆ. ಜನಸಂಚಾರವೇ ಇಲ್ಲದ ಕಾರಣ, ಆ ಕಚೇರಿಗಳೂ ಮೌನಕ್ಕೆ ಸಾಕ್ಷಿಯಾಗುತ್ತವೆ.</p>.<p><strong>ಹಬ್ಬದ ಸೊಗಡು</strong></p>.<p>ಇಡೀ ಪಟ್ಟಣ ಬೀಗ ಹಾಕಿದಂತೆ ಕಂಡರೂ, ಅದರೊಳಗೆ ಭಕ್ತಿಯ ನಾಡಿ ಸ್ಪಂದಿಸುತ್ತಲೇ ಇರುತ್ತದೆ. ಸಂಜೆ ಐದು ಗಂಟೆಯ ನಂತರ ಎಲ್ಲರೂ ಮನೆಗೆ ಮರಳುತ್ತಾರೆ. ಮನೆ ಬಾಗಿಲು ತೆರೆದು ಒಳಬರುವಾಗ ಮೂಡುವ ಆಧ್ಯಾತ್ಮಿಕ ನೆಮ್ಮದಿ–‘ದೇವಿ ನಮ್ಮ ಮನೆಗೆ ಬಂದಿದ್ದಾಳೆ’ ಎಂಬ ನಂಬಿಕೆಯ ಖುಷಿ.</p>.<p>ಈ ಸಂಪ್ರದಾಯ ಒಂದು ಕಡೆ ಭಕ್ತಿಯ ಅಭಿವ್ಯಕ್ತಿ; ಮತ್ತೊಂದು ಕಡೆ ಸಾಮಾಜಿಕ ಏಕತೆಯ ಸಂಕೇತ. ಒಂದೇ ನಿಯಮ ಪಾಲಿಸುವುದು, ಸಮೂಹವಾಗಿ ಹೊರಡುವುದು, ಸಂಜೆ ಮರಳಿ ಮನೆ ಸೇರಿ ಅನುಭವ ಹಂಚಿಕೊಳ್ಳುವುದು ಇಡೀ ಪಟ್ಟಣವನ್ನು ಒಂದು ಕುಟುಂಬವನ್ನಾಗಿಸುವ ಶಕ್ತಿ.</p>.<p>‘ಹೊರ ಮಂಗಳವಾರ’ ಯಲ್ಲಾಪುರದ ಆತ್ಮ. ಇದು ಕೇವಲ ಮನೆಗೆ ಬೀಗ ಹಾಕುವ ದಿನವಲ್ಲ; ಹೃದಯದ ಬಾಗಿಲು ತೆರೆಯುವ ದಿನ. ಜಾತ್ರೆಯ ಘೋಷಕ್ಕೆ ಮುಂಚೆ, ಭಕ್ತಿಯ ಮಂಗಳವಾದ್ಯ ಮೊಳಗಿಸುವ ಸಂಪ್ರದಾಯ. ಸಂಪ್ರದಾಯಗಳು ಕೇವಲ ದೇವರಿಗಾಗಿ ಅಲ್ಲ; ಜನರನ್ನು ಒಟ್ಟುಗೂಡಿಸಲು. ಯಲ್ಲಾಪುರದ ‘ಹೊರ ಮಂಗಳವಾರ’ ಅದಕ್ಕೆ ಜೀವಂತ ಉದಾಹರಣೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಿನ ಐದು ಗಂಟೆ. ಸಾಮಾನ್ಯವಾಗಿ ಮಾರುಕಟ್ಟೆಯ ಗದ್ದಲಕ್ಕೆ, ಬಸ್ ನಿಲ್ದಾಣದ ಕೂಗು-ಗಲಾಟೆಗೆ ಎಚ್ಚರವಾಗುವ ಯಲ್ಲಾಪುರ ಪಟ್ಟಣ ಆ ದಿನ ಬೇರೆ ರಾಗ ಹಿಡಿದಿರುತ್ತದೆ. ಮನೆಮನೆಗಳಲ್ಲಿ ಸಡಗರ, ಸಂಭ್ರಮ. ಹೆಂಗಸರು ಗಡಿಬಿಡಿಯಲ್ಲೇ ಒಲೆಗಳನ್ನು ಹಚ್ಚುತ್ತಾರೆ. ಕುರುಕು ತಿಂಡಿಗಳ ಸುವಾಸನೆ, ಬುತ್ತಿ ಕಟ್ಟುವ ಗದ್ದಲ-ಇವೆಲ್ಲವೂ ಹಬ್ಬದ ಮುನ್ಸೂಚನೆ ನೀಡುತ್ತವೆ.</p>.<p>ಆದರೆ ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಅದೇ ಪಟ್ಟಣ ಲಾಕ್ಡೌನ್ ಆದಂತೆ ನಿಶ್ಶಬ್ದವಾಗಿಬಿಡುತ್ತದೆ. ಅಂಗಡಿ ಮುಂಗಟ್ಟುಗಳು ಮುಚ್ಚಿ, ಮನೆಗಳಿಗೆ ಬೀಗ ಹಾಕಿ, ರಸ್ತೆಗಳಲ್ಲಿ ನರಪಿಳ್ಳೆಯೂ ಕಾಣದ ದೃಶ್ಯ ಹೊಸಬರಿಗೆ ಆಶ್ಚರ್ಯವನ್ನು ಉಂಟು ಮಾಡಬಹುದು.</p>.<p>ಇದು ಯಲ್ಲಾಪುರದ ಅಪರೂಪದ ಸಂಪ್ರದಾಯ–‘ಹೊರ ಮಂಗಳವಾರ’.</p>.<p><strong>ಜಾತ್ರೆಗೆ ನಾಂದಿ</strong></p>.<p>ಉತ್ತರ ಕನ್ನಡ ಜಿಲ್ಲೆಯ ಈ ಪಟ್ಟಣದಲ್ಲಿ ಗ್ರಾಮದೇವಿಯ ಜಾತ್ರೆ ಪ್ರತಿ ಮೂರು ವರ್ಷಕ್ಕೊಮ್ಮೆ ಒಂಬತ್ತು ದಿನ ಅದ್ದೂರಿಯಾಗಿ ನಡೆಯುತ್ತದೆ. ಈ ವರ್ಷ ಫೆಬ್ರುವರಿ 11ರಿಂದ ಜಾತ್ರೆ ಆರಂಭವಾಗಿದೆ. ಜಾತ್ರೆಗೆ ಮುನ್ನ ಬರುವ ಮೂರು ಅಥವಾ ಐದು ಮಂಗಳವಾರಗಳನ್ನು ‘ಹೊರ ಮಂಗಳವಾರ’ ಎಂದು ಆಚರಿಸುವುದು ಶತಮಾನಗಳ ಹಿಂದಿನಿಂದ ಬಂದಿರುವ ನಂಬಿಕೆ.</p>.<p>ಗ್ರಾಮದೇವಿಯ ಅನುಗ್ರಹದಿಂದಲೇ ಊರು ಉಳಿದಿದೆ ಎಂಬ ಭಕ್ತಿಭಾವ ಇಲ್ಲಿ ಗಾಢವಾಗಿದೆ. ಜಾತ್ರೆಗೆ ನಾಂದಿ ಹಾಡುವಂತೆ ಈ ಮಂಗಳವಾರಗಳು ಆಚರಣೆಗೊಳ್ಳುತ್ತವೆ. ಇದು ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಒಂದು ಸಮೂಹ ಅನುಭವ.</p>.<p><strong>ಮನೆ ಬಿಡುವ ಕ್ಷಣ...</strong></p>.<p>ಆ ದಿನ ಬೆಳಗ್ಗೆ ಹತ್ತು ಗಂಟೆಯೊಳಗೆ ಪಟ್ಟಣದ ಎಲ್ಲರೂ ಮನೆಗೆ ಬೀಗ ಹಾಕಿ ಹೊರಡಬೇಕು ಎಂಬ ಅಲಿಖಿತ ನಿಯಮ. ಹೊರಡುವ ಮುನ್ನ ಮನೆಯ ಹಿರಿಯ ಮುತ್ತೈದೆ ದೇವರಿಗೆ ಪೂಜೆ ಸಲ್ಲಿಸಿ, ದೇವರ ಬಟ್ಟಲಲ್ಲಿ ಅರಿಸಿನ-ಕುಂಕುಮ ಇಟ್ಟು, ‘ಅಮ್ಮ ಮನೆಗೆ ಬನ್ನಿ’ ಎಂಬ ಮನದ ಮಾತು ಹೇಳಿ ಹೊರಡುತ್ತಾರೆ.</p>.<p>ಭಕ್ತರ ನಂಬಿಕೆಯಂತೆ, ಆ ದಿನ ದೇವಿ ಮನೆಗೆ ಬಂದು ಆ ಅರಿಸಿನ-ಕುಂಕುಮವನ್ನು ಸ್ವೀಕರಿಸುತ್ತಾಳೆ. ದೇವಿಯ ಗಣಗಳು ಊರನ್ನು ಸುತ್ತಾಡುತ್ತವೆ ಎಂಬ ಮತ್ತೊಂದು ಶ್ರದ್ಧೆಯೂ ಇದೆ. ದೇವಿಯ ಸಂಚಾರಕ್ಕೆ ಮನೆಗಳು ತೆರವಾಗಿರಬೇಕು ಎಂಬ ಭಾವನೆ ಈ ಆಚರಣೆಯ ಹಿಂದಿನ ನಂಬಿಕೆ.</p>.<p><strong>ಎಲ್ಲಿಗೆ ಹೋಗುತ್ತಾರೆ?</strong></p>.<p>‘ಹೊರ ಮಂಗಳವಾರ’ ಎಂದರೆ ಶೋಕದ ದಿನವಲ್ಲ, ಅದು ಸಂತಸದ ದಿನ. ಕುಟುಂಬಗಳು ಸಮೀಪದ ಉದ್ಯಾನಗಳು, ಜಲಪಾತಗಳು, ಕಾನುಗಳು, ತಾಣಗಳು, ಹೊರ ಊರುಗಳ ಕಡೆಗೆ ತೆರಳುತ್ತಾರೆ. ಅಲ್ಲಿ ಚಾಪೆ, ಜಮಖಾನ ಹಾಸುತ್ತಾರೆ. ಮನೆಯಿಂದ ತೆಗೆದುಕೊಂಡು ಹೋಗಿರುವ ತಿಂಡಿ-ತಿನಿಸು, ಊಟದ ಡಬ್ಬಿಗಳು, ಬುತ್ತಿ, ಗಂಟುಗಳನ್ನು ಇಡುತ್ತಾರೆ. ಜೊತೆಗೆ ಕುಡಿಯುವ ನೀರಿನ ಕ್ಯಾನ್ಗಳೂ ಇರುತ್ತವೆ.</p>.<p>ಮಕ್ಕಳಿಗೆ ಆಟವಾಡುವ ಸಂಭ್ರಮ. ಕಣ್ಣಾಮುಚ್ಚಾಲೆ, ಓಡಾಟ. ಹಿರಿಯರಿಗೆ ಮನೆಮನೆ ಕತೆಗಳನ್ನು ಹಂಚಿಕೊಳ್ಳುವ ಅವಕಾಶ. ಯುವ ಸಮೂಹಕ್ಕೆ ರೀಲ್ಸ್ ಮಾಡುವ ಉತ್ಸಾಹ. ಗಂಡಸರಿಗೆ ಲೋಕ-<br>ರಾಜಕೀಯದಿಂದ ಹಿಡಿದು ಕೃಷಿ-ವ್ಯಾಪಾರದವರೆಗಿನ ಚರ್ಚೆಗಳು ಜಾರಿಯಲ್ಲಿರುತ್ತವೆ.</p>.<p>ಅಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಿಂದ ತಂದ ಬುತ್ತಿಗಳನ್ನು ಹಂಚಿಕೊಂಡು ತಿನ್ನುತ್ತಾರೆ. ಆ ಕ್ಷಣದಲ್ಲಿ ತಾರತಮ್ಯವೆಲ್ಲ ಕರಗಿಹೋಗುತ್ತವೆ. ಉಳಿಯುವುದು ಕೇವಲ ಒಟ್ಟುಗೂಡುವ ಸಂತೋಷ. ಇವೆಲ್ಲವೂ ಒಂದು ಧಾರ್ಮಿಕ ಪಿಕ್ನಿಕ್ನ ನೆನಪನ್ನು ಮೂಡಿಸುತ್ತವೆ. ಬದುಕಿನ ಜಂಜಾಟದಿಂದ ಒಂದು ದಿನದ ವಿರಾಮ–ಮೊಬೈಲ್ ಸಿಗ್ನಲ್ಗಿಂತ ಸಂಬಂಧಗಳ ಸಿಗ್ನಲ್ ಬಲವಾಗುವ ದಿನ.</p>.<p><strong>ವಿನಾಯಿತಿಯೂ ಉಂಟು</strong></p>.<p>ಮನೆಯಲ್ಲಿ ರೋಗಿಗಳು ಇದ್ದರೆ ವಿನಾಯಿತಿ ಇದೆ. ಅವರನ್ನು ಹೊರಗೆ ಕರೆತರಲು ಸಾಧ್ಯವಾಗದ ಕಾರಣ ಮನೆಯಲ್ಲೇ ಬಿಡುತ್ತಾರೆ. ಅವರನ್ನು ನೋಡಿಕೊಳ್ಳಲು ಒಬ್ಬರನ್ನು ಇರಿಸಲಾಗುತ್ತದೆ. ಇಂತಹ ಮನೆಗಳಲ್ಲೂ ಮುಂದಿನ ಬಾಗಿಲಿಗೆ ಬೀಗ ಹಾಕಲಾಗುತ್ತದೆ; ಮತ್ತೊಂದು ಬಾಗಿಲು ತೆರೆದಿರುತ್ತದೆ. ಆಚಾರಕ್ಕೂ, ಅವಶ್ಯಕತೆಗೂ ಮಧ್ಯದ ಸಮತೋಲನ.</p>.<p>ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಆದರೆ ಸಿಬ್ಬಂದಿ ಹಾಜರಾತಿ ಕಡಿಮೆ. ಜನಸಂಚಾರವೇ ಇಲ್ಲದ ಕಾರಣ, ಆ ಕಚೇರಿಗಳೂ ಮೌನಕ್ಕೆ ಸಾಕ್ಷಿಯಾಗುತ್ತವೆ.</p>.<p><strong>ಹಬ್ಬದ ಸೊಗಡು</strong></p>.<p>ಇಡೀ ಪಟ್ಟಣ ಬೀಗ ಹಾಕಿದಂತೆ ಕಂಡರೂ, ಅದರೊಳಗೆ ಭಕ್ತಿಯ ನಾಡಿ ಸ್ಪಂದಿಸುತ್ತಲೇ ಇರುತ್ತದೆ. ಸಂಜೆ ಐದು ಗಂಟೆಯ ನಂತರ ಎಲ್ಲರೂ ಮನೆಗೆ ಮರಳುತ್ತಾರೆ. ಮನೆ ಬಾಗಿಲು ತೆರೆದು ಒಳಬರುವಾಗ ಮೂಡುವ ಆಧ್ಯಾತ್ಮಿಕ ನೆಮ್ಮದಿ–‘ದೇವಿ ನಮ್ಮ ಮನೆಗೆ ಬಂದಿದ್ದಾಳೆ’ ಎಂಬ ನಂಬಿಕೆಯ ಖುಷಿ.</p>.<p>ಈ ಸಂಪ್ರದಾಯ ಒಂದು ಕಡೆ ಭಕ್ತಿಯ ಅಭಿವ್ಯಕ್ತಿ; ಮತ್ತೊಂದು ಕಡೆ ಸಾಮಾಜಿಕ ಏಕತೆಯ ಸಂಕೇತ. ಒಂದೇ ನಿಯಮ ಪಾಲಿಸುವುದು, ಸಮೂಹವಾಗಿ ಹೊರಡುವುದು, ಸಂಜೆ ಮರಳಿ ಮನೆ ಸೇರಿ ಅನುಭವ ಹಂಚಿಕೊಳ್ಳುವುದು ಇಡೀ ಪಟ್ಟಣವನ್ನು ಒಂದು ಕುಟುಂಬವನ್ನಾಗಿಸುವ ಶಕ್ತಿ.</p>.<p>‘ಹೊರ ಮಂಗಳವಾರ’ ಯಲ್ಲಾಪುರದ ಆತ್ಮ. ಇದು ಕೇವಲ ಮನೆಗೆ ಬೀಗ ಹಾಕುವ ದಿನವಲ್ಲ; ಹೃದಯದ ಬಾಗಿಲು ತೆರೆಯುವ ದಿನ. ಜಾತ್ರೆಯ ಘೋಷಕ್ಕೆ ಮುಂಚೆ, ಭಕ್ತಿಯ ಮಂಗಳವಾದ್ಯ ಮೊಳಗಿಸುವ ಸಂಪ್ರದಾಯ. ಸಂಪ್ರದಾಯಗಳು ಕೇವಲ ದೇವರಿಗಾಗಿ ಅಲ್ಲ; ಜನರನ್ನು ಒಟ್ಟುಗೂಡಿಸಲು. ಯಲ್ಲಾಪುರದ ‘ಹೊರ ಮಂಗಳವಾರ’ ಅದಕ್ಕೆ ಜೀವಂತ ಉದಾಹರಣೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>