ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಸ್ರ ಬುದ್ಧಿ ಹೇಳಿದ ಸಹಸ್ರಬುದ್ದೆ

Last Updated 5 ಸೆಪ್ಟೆಂಬರ್ 2018, 5:02 IST
ಅಕ್ಷರ ಗಾತ್ರ

ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಸಹಸ್ರಬುದ್ಧೆ ಎಂಬ ಅಧ್ಯಾಪಕರು ಇದ್ದರು. ನನ್ನ ಜೀವನದಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ್ದರು. ಅವರು ಪಾಠ ಮಾಡುವ ವಿಧಾನ ಒಂದೇ ಅಲ್ಲ, ವಿದ್ಯಾರ್ಥಿಗಳ ಬಗ್ಗೆ ಪ್ರೀತಿ, ನಗುತ್ತಾ ಮಾತನಾಡುವ ಆತ್ಮೀಯತೆ, ಎಲ್ಲವೂ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿತ್ತು. ನನ್ನ ಬಗ್ಗೆಯಂತೂ ವಿಶೇಷ ಕಾಳಜಿ ಇತ್ತು.

ಒಮ್ಮೆ ಮಾತನಾಡುವಾಗ, ಖ್ಯಾತ ರಸಾಯನ ವಿಜ್ಞಾನಿ ಲೈನಸ್ ಪಾಲಿಂಗ್ ಅವರ ‘ನೇಚರ್‌ ಆಫ್‌ ಕೆಮಿಕಲ್‌ ಬಾಂಡಿಂಗ್‌’ ಪುಸ್ತಕ ಓದಲು ಹೇಳಿದರು. ಅವರ ಸಲಹೆ ನನ್ನ ಜನ್ಮವನ್ನೇ ಬದಲಿಸಿ ಬಿಟ್ಟಿತು. ಮುಂದೆ ಅಮೆರಿಕಾದಲ್ಲಿಲೈನಸ್ ಪಾಲಿಂಗ್ ಅವರ ಜತೆ ಕೆಲಸ ಮಾಡುವ ಅವಕಾಶವೂ ಸಿಕ್ಕಿತು. ಮುಂದೆ ಅವರಿಗೆ ನೊಬೆಲ್‌ ಪ್ರಶಸ್ತಿ ಲಭಿಸಿತು. ಅಣು ಜೀವಶಾಸ್ತ್ರದ(ಮಾಲೆಕ್ಯುಲರ್‌ ಬಯಾಲಜಿ) ಹುಟ್ಟಿಗೆ ಅವರು ಕಾರಣರಾದರು. ಸಹಸ್ರ ಬುದ್ದೆಯವರು ವಿಜ್ಞಾನಿ ಆಗಿರಲಿಲ್ಲ. ಆದರೆ, ಅತ್ಯುತ್ತಮ ಅಧ್ಯಾಪಕ. ಅವರಿಂದ ಕಲಿತ ಹಲವು ಗುಣಗಳನ್ನು ನಾನು ಪಾಠ ಮಾಡುವಾಗ ಅನುಸರಿಸುತ್ತಲೇ ಬಂದೆ. ಐಐಟಿಯಲ್ಲಿ ಕಥೆಗಳನ್ನು ಹೇಳುವ ಮೂಲಕ ಪಾಠ ಮಾಡುತ್ತಿದ್ದೆ.

ಸಹಸ್ರ ಬುದ್ದೆ ವಿದ್ಯಾರ್ಥಿಗಳ ವಿಜ್ಞಾನ ಪ್ರಬಂಧ ಮಂಡಿಸಲು ಮಾರ್ಗದರ್ಶನ ನೀಡುತ್ತಿದ್ದರು. ಆದರೆ, ಅದರಲ್ಲಿ ಅವರು ತಮ್ಮ ಹೆಸರನ್ನು ಹಾಕಿಕೊಳ್ಳುತ್ತಿರಲಿಲ್ಲ. ವಿದ್ಯಾರ್ಥಿಗಳ ಹೆಸರುಗಳನ್ನೇ ಹಾಕುತ್ತಿದ್ದರು.

ಕಾಲೇಜು ದಿನಗಳಲ್ಲೂ ಅಷ್ಟೇ ನಾರಾಯಣರಾವ್‌ ಎಂಬ ಉಪನ್ಯಾಸಕರು ವಿಜ್ಞಾನದ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸುತ್ತಿದ್ದರು. ಬಿಎಸ್‌ಸಿ ಮುಗಿದ ಬಳಿಕ ಬನಾರಸ್‌ ವಿಶ್ವವಿದ್ಯಾಲಯಕ್ಕೆ ಹೋಗು ಎಂದು ಸಲಹೆ ನೀಡಿದರು. ಅವರು ಅದೇ ವಿಶ್ವವಿದ್ಯಾಲಯದಲ್ಲಿ ಓದಿದ್ದರು. ಅಲ್ಲದೇ, ಅವರ ರೀಸರ್ಚ್‌ ಪೇಪರ್‌ ಕೂಡಾ ಪ್ರಕಟ ಆಗಿತ್ತಂತೆ. ತಮ್ಮ ಜೇಬಿನಿಂದ ಒಂದು ತುಂಡು ಕಾಗದವನ್ನು ತೆಗೆದು ಅದರಲ್ಲಿ ತಮ್ಮ ಹೆಸರು ಪ್ರಕಟ ಆಗಿದ್ದನ್ನು ತೋರಿಸಿದ್ದರು. ನೀನು ಅಲ್ಲಿಗೆ ಹೋದರೆ, ಇದೇ ರೀತಿ ಪೇಪರ್‌ ಪಬ್ಲಿಷ್‌ ಮಾಡಬಹುದು ಎಂದು ಹೇಳಿದರು. ಆ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ವಿಜ್ಞಾನ, ಸಂಶೋಧನೆ ಅಷ್ಟೊಂದು ಪ್ರಸಿದ್ಧಿ ಪಡೆದಿರಲಿಲ್ಲ. ಐಐಎಸ್‌ಸಿ ಇತ್ತು. ಆದರೂ, ಬನಾರಸ್‌ ವಿಶ್ವವಿದ್ಯಾಲಯ ತುಂಬಾ ಪ್ರಖ್ಯಾತಿ ಪಡೆದಿತ್ತು. ಹೀಗಾಗಿ ಅಲ್ಲಿಗೆ ಹೋದೆ.

ಚಿಕ್ಕಂದಿನಲ್ಲಿ ಆಚಾರ್ಯ ಪಾಠಶಾಲೆಯಲ್ಲಿ ಓದುವಾಗ ಶಿಕ್ಷಕರು ಪ್ರಭಾವ ಬೀರಿದ್ದರಿಂದಲೇ ವಿಜ್ಞಾನದ ವಿಷಯವನ್ನು ಆಯ್ಕೆ ಮಾಡಿಕೊಂಡೆ. ಅಲ್ಲಿ ಶಿವರುದ್ರಪ್ಪ, ಕೃಷ್ಣಮೂರ್ತಿ, ನಾರಾಯಣರಾವ್‌ ಎಂಬ ಶಿಕ್ಷಕರು ಇದ್ದರು. ಅವರೆಲ್ಲ ಬಹಳ ಒಳ್ಳೆಯ ಉಪಾಧ್ಯಾಯರು. ಅವರಿಗೆ ಸಂಬಳ ಕಡಿಮೆ ಬರುತ್ತಿತ್ತು. ಆದರೆ, ಪಾಠ ಮಾಡುವುದರಲ್ಲಿ ಶ್ರದ್ಧೆ ಮತ್ತು ಆಸಕ್ತಿ ಇತ್ತು. ಹಣಕ್ಕಿಂತ ಪಾಠ ಹೇಳೋದರಲ್ಲೇ ಖುಷಿ ಕಾಣುತ್ತಿದ್ದರು. ಸಂತೋಷದಿಂದಲೇ ಪಾಠ ಮಾಡುತ್ತಿದ್ದರು.

ಒಟ್ಟಿನಲ್ಲಿ ಹೇಳುವುದಾದರೆ ಶಿಕ್ಷಕರು ಮತ್ತು ಉಪನ್ಯಾಸಕರು ಪುಸ್ತಕದಲ್ಲಿ ಇರುವುದನ್ನೇ ಮಕ್ಕಳ ಮುಂದೆ ಒಪ್ಪಿಸಿದರೆ, ಆತ ಒಬ್ಬ ಒಳ್ಳೆಯ ಶಿಕ್ಷಕನಾಗಲು ಸಾಧ್ಯವಿಲ್ಲ. ಮಕ್ಕಳ ಜೀವನವನ್ನು ರೂಪಿಸುವ ಶಕ್ತಿ ಶಿಕ್ಷಕನಿಗೆ ಇರಬೇಕು. ನಗುತ್ತಾ, ನಗಿಸುತ್ತಾ ಕಲಿಸಬೇಕು. ಪುಸ್ತಕಗಳನ್ನು ಓದಲು ಪ್ರೇರಣೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT