ಭಾರತೀಯ ಸಾಹಿತ್ಯ ನಕಾಶೆಯಲ್ಲಿ ನೇಪಾಳೀ ಕತೆಗಾರರೂ ಛಾಪು ಮೂಡಿಸುತ್ತಿದ್ದಾರೆ. ಕೋಲ್ಕತ್ತ ಸುತ್ತಮುತ್ತಲಿನ ಡಾರ್ಜಿಲಿಂಗ್, ಡೆಹರಾಡೂನ್ ತರಹದ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಅನೇಕರಲ್ಲಿ ನೇಪಾಳೀ ಭಾಷಿಕರಿದ್ದಾರೆ. 1821ರಿಂದ ಇದುವರೆಗೆ ನೇಪಾಳೀ ಕತೆಗಳ ಜಾಡು, ಜಾಯಮಾನ ಎರಡೂ ಬದಲಾಗುತ್ತಾ ಬಂದಿದೆ. ಅನುವಾದ ಕಮ್ಮಟವೊಂದರಲ್ಲಿ ಪ್ರತಿಭಾವಂತರ ಆಯ್ದ ನೇಪಾಳೀ ಕತೆಗಳನ್ನು ಹಿಂದಿಗೆ ಅನುವಾದಿಸಲಾಗಿತ್ತು. ದುರ್ಗಾ ಪ್ರಸಾದ್ ಶ್ರೇಷ್ಠ ಅವರು ಅವುಗಳನ್ನು ಆಧರಿಸಿದ ಕೃತಿ ಸಂಪಾದಿಸಿದ್ದರು. ಆ ಕತೆಗಳ ಗುಚ್ಛವನ್ನು ಆರ್. ಲಕ್ಷ್ಮೀನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಂದ ಹಾಂಗಖಿಮ್, ಎಂ.ಎಂ. ಗುರುಂಗ್, ಪರಶುರಾಮ ರೋಕಾ, ಹರಿಪ್ರಸಾದ್ ಗೋರ್ಖಾರಾಈ – ಹೀಗೆ ನೇಪಾಳೀ ಭಾಷೆಯಲ್ಲಿ ಬರೆದ ಭಿನ್ನ ಸಂವೇದನೆಯವರು ಹಲವರು. ಅಂತಹ 20 ಕತೆಗಳು ಈ ಸಂಕಲನದಲ್ಲಿ ಇವೆ. ಒಂದೊಂದೂ ಕತೆ ಸಂವೇದನೆಯ ದೃಷ್ಟಿಯಿಂದ ಮನುಷ್ಯ ಸಂಬಂಧಗಳ ಬೇರೆ ಬೇರೆ ಮನೋಲೋಕಗಳನ್ನು ತೆರೆದಿಡುತ್ತದೆ.