ಸಮಾಜದಲ್ಲಿ ಅನಿವಾರ್ಯ ಎಂಬಂತೆ ಹೂತುಕೊಂಡಿರುವ ಜಾತಿ ಪದ್ಧತಿ, ಪಾಳೇಗಾರಿಕೆ, ಬಡತನ, ದೈವಭಕ್ತಿ ಹಾಗೂ ಹಲವು ಸಾಮಾಜಿಕ ಸಮಸ್ಯೆಗಳ ಕಡೆಗೆ ಹೆಚ್ಚಿನ ಬರಹಗಳು ಗಮನ ಸೆಳೆಯುತ್ತವೆ. ಈ ಲೇಖನಗಳು ಇಪ್ಪತ್ತು ವರ್ಷಗಳ ಹಿಂದಿನದ್ದು ಎಂದರೂ, ಇವತ್ತಿಗೂ ಸಮಕಾಲೀನ ಸ್ಪರ್ಶ ಇರುವುದು ಗಮನಿಸಬೇಕಾದ ಅಂಶ. ಅಥವಾ ನಮ್ಮ ಸಮಾಜ ಇನ್ನೂ ಬದಲಾಗಿಲ್ಲ ಎನ್ನುವುದನ್ನೂ ಇದು ಸೂಚಿಸುತ್ತಿರಬಹುದು. ಸರಳ ಭಾಷೆಯ ನಿರೂಪಣೆಯ ಜೊತೆಗಿರುವ ಕಲಾವಿದ ಎಂ.ಎಲ್.ಸೋಮವರದ ಅವರ ರೇಖಾಚಿತ್ರಗಳು ಓದನ್ನು ಇನ್ನಷ್ಟು ಆಪ್ತವಾಗಿಸುತ್ತವೆ.