<p>ಕನ್ನಡದಲ್ಲಿ ನವ್ಯ ಪರಂಪರೆಯನ್ನು ಗೋಪಾಲಕೃಷ್ಣ ಅಡಿಗ ಮತ್ತು ವಿ.ಕೃ. ಗೋಕಾಕ್ ಅವರಿಗೂ ಮೊದಲೇ ಪೇಜಾವರ ಸದಾಶಿವರಾವ್ ಅವರು ತಮ್ಮ `ನಾಟ್ಯೋತ್ಸವ~ ಕವಿತೆಯ ಮೂಲಕ ಆರಂಭಿಸಿದ್ದರು. ಅವರ ತಂದೆ ಶಾಮರಾವ್ ಮತ್ತು ತಾಯಿ ಸೀತಮ್ಮ. ತಮ್ಮಂದಿರು ಪೇಜಾವರ ವಾಸುದೇವರಾವ್ ಮತ್ತು ಪೇಜಾವರ ವೆಂಕಟರಾವ್.<br /> <br /> ಮಾರ್ಚ್ 8, 1913ರಂದು ಜನಿಸಿದ ಸದಾಶಿವರಾವ್ ಅವರು ಮಂಗಳೂರಿನ ಸಾಹಿತ್ಯ ಚಟುವಟಿಕೆಗಳ ಆಡುಂಬೊಲವಾಗಿದ್ದ `ಮಿತ್ರಮಂಡಲಿ~ಯ ಬೆನ್ನೆಲುಬಾಗಿದ್ದವರು. ಮುಂದೆ ಅವರು ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಸ್ಥಾಪತ್ಯಶಾಸ್ತ್ರದ ವಿಶೇಷ ವ್ಯಾಸಂಗಕ್ಕಾಗಿ ಇಟಲಿಯಲ್ಲಿರುವ ಮಿಲಾನ್ ನಗರಕ್ಕೆ ಹೋದರು.<br /> <br /> ವ್ಯಾಸಂಗ ಮುಗಿಸಿ ಭಾರತಕ್ಕೆ ಹಿಂದಿರುಗಬೇಕೆನ್ನುವಷ್ಟರಲ್ಲಿ ಮಾರಣಾಂತಿಕ ಕಾಯಿಲಿಗೆ ತುತ್ತಾಗಿ ಇಟಲಿಯಲ್ಲಿಯೇ ತೀರಿಕೊಂಡರು (ಅ.18, 1939). ಆಗವರಿಗೆ 26 ವರ್ಷ. ರಂ.ಶ್ರೀ.ಮುಗಳಿ ಅವರು ಹೇಳುವಂತೆ- `ಪರಿಪಕ್ವಗೊಳ್ಳುತ್ತಿರುವ ಮೇಧಾಶಕ್ತಿ-ಕವಿತಾಶಕ್ತಿಗಳುಳ್ಳ ತರುಣ ಕನ್ನಡಿಗನನ್ನು ಸಾವಿನ ಹದ್ದು ಕಚ್ಚಿಕೊಂಡು ಹೋಯಿತು~ (`ವರುಣ~ -1952, ಮುನ್ನುಡಿ, ರಂ.ಶ್ರೀ.ಮುಗಳಿ). ಸದಾಶಿವರಾವ್ ಅವರಂತೆಯೇ ಕಿರಿಯ ವಯಸ್ಸಿನಲ್ಲಿಯೇ (22 ವರ್ಷ) ತೀರಿಕೊಂಡ ಕನ್ನಡದ ಮತ್ತೊಬ್ಬ ಕವಿ ಯರ್ಮುಂಜ ರಾಮಚಂದ್ರ.<br /> <br /> ಸದಾಶಿವರಾವ್ ಅವರ `ಸರಪಣಿ~, `ಜೀವನ ಸಂಗೀತ~ ಮತ್ತು `ಬೀದಿಗಿಳಿದ ನಾರಿ~ ಎಂಬ ನಾಟಕಗಳು ತ್ರಿವೇಣಿ ಎಂಬ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿವೆ. `ಅಂಧಶಿಲ್ಪ ಮತ್ತು ಶ್ರೀಗಂಧ~ ಇವು ಅವರು ಬರೆದ ಸಣ್ಣಕತೆಗಳು. 1952ರಲ್ಲಿ ಅವರ ಪೂರ್ಣಪ್ರಮಾಣದ `ವರುಣ~ ಕವಿತಾ ಸಂಕಲನವನ್ನು ರಂ.ಶ್ರೀ. ಮುಗಳಿ ಅವರು ಪ್ರಕಟಿಸಿದರು. ಈ ಸಂಬಂಧ ಮುಗಳಿಯವರಿಗೆ ನೆರವು ನೀಡಿದವರು ಸದಾಶಿವರಾವ್ ಅವರ ತಮ್ಮಂದಿರಾದ ವಾಸುದೇವರಾವ್ ಮತ್ತು ವೆಂಕಟರಾವ್.<br /> <br /> `ಅಲರು~ 1931ರಲ್ಲಿ ಪೇಜಾವರ ಸದಾಶಿವರಾವ್ ಅವರು ಸಂಪಾದಿಸಿ ಪ್ರಕಟಿಸಿದ ಕವಿತಾಸಂಕಲನ. ಅಲರು- ಅಚ್ಚಗನ್ನಡ ಶಬ್ದ. ಅಲರು ಎಂಬುದಕ್ಕೆ ಅರಳು ಮತ್ತು ಹೂವು ಎಂಬ ನಾಮ ಕ್ರಿಯಾರ್ಥಗಳೆರಡೂ ಇವೆ. ಆಗಿನ ಇದರ ಬೆಲೆ ಕೇವಲ ನಾಲ್ಕಾಣೆ. <br /> <br /> ಮಂಗಳೂರಿನ ಮಿತ್ರಮಂಡಲಿಯ `ಅಳಿಲು ಸೇವಾಗ್ರಂಥಮಾಲೆ~ಯಡಿ ನಾಲ್ಕನೆಯ ಪುಷ್ಪವಾಗಿ ಈ ಕೃತಿ ಪ್ರಕಟಗೊಂಡಿದೆ. `ಇಣಚಿ~ ಎಂಬ ಅರ್ಥದ ಅಳಿಲು ಶಬ್ದ ಕೂಡ ದೇಸಿಯ ಸೊಗಸಿನ ಪದ. ಅಲರು, ಅಳಿಲು ಈ ಪದಪ್ರಯೋಗಗಳು ಪೇಜಾವರರಿಗಿದ್ದ ದೇಸಿಯ ಒಲವಿನ ದ್ಯೋತಕ. ಮಂಗಳೂರಿನ ರಥಬೀದಿಯ ಮಂಗಳೂರು ಛಾಪಾಖಾನೆಯಲ್ಲಿ ಈ ಕೃತಿ ಮುದ್ರಣಗೊಂಡಿದೆ. <br /> <br /> `ಅಲರು~ ಸಂಕಲನದ ಪ್ರಸ್ತುತ ಪ್ರತಿ `ಶ್ರೀಮಾನ್ ವಿ.ಸೀತಾರಾಮಯ್ಯನವರಿಗೆ - ಪ್ರೇಮಪೂರ್ವಕವಾದ ಒಡಲ ಕಾಣಿಕೆ- ಪೇಜಾವರ ಸದಾಶಿವರಾಯ~ ಎಂಬ ಸದಾಶಿವರಾವ್ ಅವರ ಒಕ್ಕಣೆಯನ್ನೊಳಗೊಂಡಿದೆ. ಅಷ್ಟ ಕಿರೀಟಾಕಾರದ 42 ಪುಟಗಳ ಈ ಪುಟ್ಟ ಕೃತಿಯಲ್ಲಿ 16 ಕವಿಗಳ 26 ಕವಿತೆಗಳಿವೆ. ಪೇಜಾವರರ 3 ಕವಿತೆಗಳಿವೆ. ಆರಂಭದಲ್ಲಿ `ಅಲರು~ ಶಬ್ದಾರ್ಥಕ್ಕೆ ಹೊಂದುವ ಬೇಂದ್ರೆಯವರ ಒಂದು ಕವಿತೆಯ ಎಸಳನ್ನು ನೀಡಲಾಗಿದೆ. ಅದು ಹೀಗಿದೆ:</p>.<p><strong>ಕಂಪಿನಲರ ತಂದೆನಿಂದು<br /> ನಿನ್ನ ಅಡಿಯೊಳಿಡಲು ಎಂದು<br /> ಮೂಸಿನೋಡಬೇಕು ಎಂಬ ಭಾವ ಹುಟ್ಟಿತು.<br /> ಭಾವ ಹುಟ್ಟಿ ಮೂಸಿಬಿಟ್ಟೆ<br /> ಹಿಗ್ಗಿ ನಿನ್ನ ಅಡಿಯೊಳಿಟ್ಟೆ<br /> ಗಮಗಮಗಮ ಒಳಗು ಹೊರಗು ಕಂಪು ಇಡುಗಿತು!<br /> -ಅಂಬಿಕಾತನಯದತ್ತ</strong></p>.<p>ನವೋದಯ ಆರಂಭದ ಈ ಕವಿತೆಗಳನ್ನು ಕುರಿತು ಮುನ್ನುಡಿಯಲ್ಲಿ ಸದಾಶಿವರಾವ್ ಹೀಗೆ ಬರೆದಿದ್ದಾರೆ: ಜೀವನಕ್ಕೂ ಕಾವ್ಯಕ್ಕೂ ಅನ್ಯಾದೃಶ್ಯವಾದ ಸಂಬಂಧವಿದೆ. ಜೀವನದ ಭವ್ಯತೆ ದಿವ್ಯತೆಗಳನ್ನು ಜನತೆಗೆ ತೋರಿಸಿಕೊಡಲು ಕಾವ್ಯವೇ ಕೈಗನ್ನಡಿ. <br /> <br /> ಹಿಂದಿನ ಜೀವನಕ್ಕೂ ಇಂದಿನ ಜೀವನಕ್ಕೂ ಇರುವ ಭೇದವನ್ನು ನೋಡಿ ಇಂದಿನ ಕವಿಗಳು ಇಂದಿನ ಜೀವನ ಧರ್ಮಕ್ಕೊಪ್ಪುವ ನೂತನ ಪಥದಲ್ಲಿ ಮುಂದುವರೆಯಲು ಯತ್ನಿಸುತ್ತಿದ್ದಾರೆ. ಛಂದಸ್ಸನ್ನು ಹೊಸರೂಪಕ್ಕೆ ಮಾರ್ಪಡಿಸಿಕೊಂಡು ನವಜೀವನದ ಸುಖದುಃಖಗಳನ್ನು ಯಥಾರ್ಥವಾಗಿ ಬಣ್ಣಿಸಲು ಹವಣಿಸುತಲಿದ್ದಾರೆ. <br /> <br /> ಹೊಸವಿಚಾರಗಳನ್ನು ಹೊಸ ಸಾಹಿತ್ಯದ ಮೂಲಕ ಜನತೆಗೆ ತಿಳಿಸಿ ವಿಚಾರ ಪಲ್ಲಟವನ್ನುಂಟುಮಾಡಲು ಸನ್ನದ್ಧರಾಗಿದ್ದಾರೆ. ಎಷ್ಟರಮಟ್ಟಿಗೆ ಈ ಧ್ಯೇಯದ ಸಾಫಲ್ಯವಾಯಿತೆಂಬುದು ಸಾಹಿತ್ಯಾಭಿಮಾನಿಗಳಿಗೆ ತಿಳಿದ ವಿಷಯ. <br /> <br /> `ಇಂಗ್ಲಿಷ್ ಗೀತಗಳು~ ಪ್ರಕಟವಾದ ಆಸುಪಾಸಿನಲ್ಲಿಯೇ ಬಂದ `ಅಲರು~ವಿನ ಮುನ್ನುಡಿಯ ಮಾತುಗಳು ತುಂಬಾ ಅರ್ಥಪೂರ್ಣವಾಗಿವೆ. ಸಂಕಲನದಲ್ಲಿ ಪೇಜಾವರ ಅವರೊಂದಿಗಿರುವ ಕವಿಗಳೆಂದರೆ: <br /> <br /> ಎಸ್.ವೆಂಕಟರಾಜ, ಕ.ರಾಘವಾಚಾರ್, ಪದ್ಮನಾಭ, ಬಾಲಮಿತ್ರ, ಶ್ರೀನಿವಾಸರಾವ್ ಕದಿರೆ, ಬಿ.ಆರ್.ಕಾಮತ್, ಸ್ವರ್ಗೀಯ ಕೆ.ಟಿ.ಆಚಾರ್ಯ, ವಾಮನ, ಬಿ.ಶ್ರೀಧರ ಕಕ್ಕಿಲಾಯ, ಶ್ರೀರಾಜ, ಕೆಮ್ಮಿಂಜೆ ಸುಬ್ರಾಯುಪಾಧ್ಯಾಯ, ಉದ್ಯಾವರ ಬಾಲಕೃಷ್ಣರಾವ್ ಹಾಗೂ ಹಿರಣ್ಮಯ. ಹಿಂದಿನ ಶತಮಾನದ ಮೂವತ್ತರ ದಶಕದ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯದ ಚಟುವಟಿಕೆ ಈ ಕೃತಿಯಿಂದ ತಿಳಿಯುತ್ತದೆ. <br /> <br /> ಇಲ್ಲಿರುವ ಪದ್ಮನಾಭ ಎಂಬ ಕಾವ್ಯನಾಮದ ತೊಟ್ಟೆತ್ತೋಡಿ ನಾರಾಯಣ ಭಟ್ಟರು ಮಂಗಳೂರಿನ ಕೆನರ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದು ಶಿವರಾಮ ಕಾರಂತರಿಗೆ `ಸಿರಿಗನ್ನಡ ಅರ್ಥಕೋಶ~ದಲ್ಲಿ ನೆರವು ನೀಡಿದವರು. ಕೆ.ಟಿ.ಆಚಾರ್ಯರ `ಟಿಟ್ಟಿಭ ಸಾನೆಟ್~,ಎಸ್. ವೆಂಕಟರಾಜರ `ನೇಹ ದ್ವಿಪದಿ~ ಮತ್ತು ಉದ್ಯಾವರ ಬಾಲಕೃಷ್ಣರಾವ್ ಅವರ `ನೆನಹು ಶರ ಷಟ್ಪದಿ~- ಇವುಗಳೆಲ್ಲ, ಆಗ ನಡೆಯುತ್ತಿದ್ದ ಪ್ರಯೋಗಗಳಿಗೆ ಸೂಚನೆಗಳು.<br /> ಪದ್ಮನಾಭ ಅವರ-</p>.<p><strong>ಮೆಲ್ಲಿತೆಲರದೆಲ್ಲ ಹೊಲವ ನಿಲ್ಲದಲುಗಿಸಲ್ <br /> ಲಲಿತ ಲಾಸ್ಯ ಕಲಲು ನಟಿಪ ತೆರದೆ ದ್ಯೋತಿಸಲ್</strong></p>.<p>ಎಂಬ ಲಯಗಳು 1930ರಲ್ಲೇ ಕಾಣಿಸಿಕೊಂಡಿದೆ. ಅದಮ್ಯ ಉತ್ಸಾಹದ ಅಪಾರ ಕವಿತಾ ಸಾಮರ್ಥ್ಯದ ಮಹಾಕವಿಯಾಗುವ ಸಾಧ್ಯತೆ ಪಡೆದಿದ್ದ ಪೇಜಾವರ ಸದಾಶಿವರಾವ್ ಅವರ ಪ್ರತಿಭೆಗೆ ಈ ಸಂಪಾದಿತ ಕೃತಿ `ಅಲರು~ ಸಾಕ್ಷಿಯಂತಿದೆ. ಹೊಸಗನ್ನಡ ಕಾವ್ಯಚರಿತ್ರೆಯಲ್ಲಿ `ಅಲರು~ ಸಂಕಲನಕ್ಕೆ ವಿಶಿಷ್ಟ ಸ್ಥಾನವಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡದಲ್ಲಿ ನವ್ಯ ಪರಂಪರೆಯನ್ನು ಗೋಪಾಲಕೃಷ್ಣ ಅಡಿಗ ಮತ್ತು ವಿ.ಕೃ. ಗೋಕಾಕ್ ಅವರಿಗೂ ಮೊದಲೇ ಪೇಜಾವರ ಸದಾಶಿವರಾವ್ ಅವರು ತಮ್ಮ `ನಾಟ್ಯೋತ್ಸವ~ ಕವಿತೆಯ ಮೂಲಕ ಆರಂಭಿಸಿದ್ದರು. ಅವರ ತಂದೆ ಶಾಮರಾವ್ ಮತ್ತು ತಾಯಿ ಸೀತಮ್ಮ. ತಮ್ಮಂದಿರು ಪೇಜಾವರ ವಾಸುದೇವರಾವ್ ಮತ್ತು ಪೇಜಾವರ ವೆಂಕಟರಾವ್.<br /> <br /> ಮಾರ್ಚ್ 8, 1913ರಂದು ಜನಿಸಿದ ಸದಾಶಿವರಾವ್ ಅವರು ಮಂಗಳೂರಿನ ಸಾಹಿತ್ಯ ಚಟುವಟಿಕೆಗಳ ಆಡುಂಬೊಲವಾಗಿದ್ದ `ಮಿತ್ರಮಂಡಲಿ~ಯ ಬೆನ್ನೆಲುಬಾಗಿದ್ದವರು. ಮುಂದೆ ಅವರು ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಸ್ಥಾಪತ್ಯಶಾಸ್ತ್ರದ ವಿಶೇಷ ವ್ಯಾಸಂಗಕ್ಕಾಗಿ ಇಟಲಿಯಲ್ಲಿರುವ ಮಿಲಾನ್ ನಗರಕ್ಕೆ ಹೋದರು.<br /> <br /> ವ್ಯಾಸಂಗ ಮುಗಿಸಿ ಭಾರತಕ್ಕೆ ಹಿಂದಿರುಗಬೇಕೆನ್ನುವಷ್ಟರಲ್ಲಿ ಮಾರಣಾಂತಿಕ ಕಾಯಿಲಿಗೆ ತುತ್ತಾಗಿ ಇಟಲಿಯಲ್ಲಿಯೇ ತೀರಿಕೊಂಡರು (ಅ.18, 1939). ಆಗವರಿಗೆ 26 ವರ್ಷ. ರಂ.ಶ್ರೀ.ಮುಗಳಿ ಅವರು ಹೇಳುವಂತೆ- `ಪರಿಪಕ್ವಗೊಳ್ಳುತ್ತಿರುವ ಮೇಧಾಶಕ್ತಿ-ಕವಿತಾಶಕ್ತಿಗಳುಳ್ಳ ತರುಣ ಕನ್ನಡಿಗನನ್ನು ಸಾವಿನ ಹದ್ದು ಕಚ್ಚಿಕೊಂಡು ಹೋಯಿತು~ (`ವರುಣ~ -1952, ಮುನ್ನುಡಿ, ರಂ.ಶ್ರೀ.ಮುಗಳಿ). ಸದಾಶಿವರಾವ್ ಅವರಂತೆಯೇ ಕಿರಿಯ ವಯಸ್ಸಿನಲ್ಲಿಯೇ (22 ವರ್ಷ) ತೀರಿಕೊಂಡ ಕನ್ನಡದ ಮತ್ತೊಬ್ಬ ಕವಿ ಯರ್ಮುಂಜ ರಾಮಚಂದ್ರ.<br /> <br /> ಸದಾಶಿವರಾವ್ ಅವರ `ಸರಪಣಿ~, `ಜೀವನ ಸಂಗೀತ~ ಮತ್ತು `ಬೀದಿಗಿಳಿದ ನಾರಿ~ ಎಂಬ ನಾಟಕಗಳು ತ್ರಿವೇಣಿ ಎಂಬ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿವೆ. `ಅಂಧಶಿಲ್ಪ ಮತ್ತು ಶ್ರೀಗಂಧ~ ಇವು ಅವರು ಬರೆದ ಸಣ್ಣಕತೆಗಳು. 1952ರಲ್ಲಿ ಅವರ ಪೂರ್ಣಪ್ರಮಾಣದ `ವರುಣ~ ಕವಿತಾ ಸಂಕಲನವನ್ನು ರಂ.ಶ್ರೀ. ಮುಗಳಿ ಅವರು ಪ್ರಕಟಿಸಿದರು. ಈ ಸಂಬಂಧ ಮುಗಳಿಯವರಿಗೆ ನೆರವು ನೀಡಿದವರು ಸದಾಶಿವರಾವ್ ಅವರ ತಮ್ಮಂದಿರಾದ ವಾಸುದೇವರಾವ್ ಮತ್ತು ವೆಂಕಟರಾವ್.<br /> <br /> `ಅಲರು~ 1931ರಲ್ಲಿ ಪೇಜಾವರ ಸದಾಶಿವರಾವ್ ಅವರು ಸಂಪಾದಿಸಿ ಪ್ರಕಟಿಸಿದ ಕವಿತಾಸಂಕಲನ. ಅಲರು- ಅಚ್ಚಗನ್ನಡ ಶಬ್ದ. ಅಲರು ಎಂಬುದಕ್ಕೆ ಅರಳು ಮತ್ತು ಹೂವು ಎಂಬ ನಾಮ ಕ್ರಿಯಾರ್ಥಗಳೆರಡೂ ಇವೆ. ಆಗಿನ ಇದರ ಬೆಲೆ ಕೇವಲ ನಾಲ್ಕಾಣೆ. <br /> <br /> ಮಂಗಳೂರಿನ ಮಿತ್ರಮಂಡಲಿಯ `ಅಳಿಲು ಸೇವಾಗ್ರಂಥಮಾಲೆ~ಯಡಿ ನಾಲ್ಕನೆಯ ಪುಷ್ಪವಾಗಿ ಈ ಕೃತಿ ಪ್ರಕಟಗೊಂಡಿದೆ. `ಇಣಚಿ~ ಎಂಬ ಅರ್ಥದ ಅಳಿಲು ಶಬ್ದ ಕೂಡ ದೇಸಿಯ ಸೊಗಸಿನ ಪದ. ಅಲರು, ಅಳಿಲು ಈ ಪದಪ್ರಯೋಗಗಳು ಪೇಜಾವರರಿಗಿದ್ದ ದೇಸಿಯ ಒಲವಿನ ದ್ಯೋತಕ. ಮಂಗಳೂರಿನ ರಥಬೀದಿಯ ಮಂಗಳೂರು ಛಾಪಾಖಾನೆಯಲ್ಲಿ ಈ ಕೃತಿ ಮುದ್ರಣಗೊಂಡಿದೆ. <br /> <br /> `ಅಲರು~ ಸಂಕಲನದ ಪ್ರಸ್ತುತ ಪ್ರತಿ `ಶ್ರೀಮಾನ್ ವಿ.ಸೀತಾರಾಮಯ್ಯನವರಿಗೆ - ಪ್ರೇಮಪೂರ್ವಕವಾದ ಒಡಲ ಕಾಣಿಕೆ- ಪೇಜಾವರ ಸದಾಶಿವರಾಯ~ ಎಂಬ ಸದಾಶಿವರಾವ್ ಅವರ ಒಕ್ಕಣೆಯನ್ನೊಳಗೊಂಡಿದೆ. ಅಷ್ಟ ಕಿರೀಟಾಕಾರದ 42 ಪುಟಗಳ ಈ ಪುಟ್ಟ ಕೃತಿಯಲ್ಲಿ 16 ಕವಿಗಳ 26 ಕವಿತೆಗಳಿವೆ. ಪೇಜಾವರರ 3 ಕವಿತೆಗಳಿವೆ. ಆರಂಭದಲ್ಲಿ `ಅಲರು~ ಶಬ್ದಾರ್ಥಕ್ಕೆ ಹೊಂದುವ ಬೇಂದ್ರೆಯವರ ಒಂದು ಕವಿತೆಯ ಎಸಳನ್ನು ನೀಡಲಾಗಿದೆ. ಅದು ಹೀಗಿದೆ:</p>.<p><strong>ಕಂಪಿನಲರ ತಂದೆನಿಂದು<br /> ನಿನ್ನ ಅಡಿಯೊಳಿಡಲು ಎಂದು<br /> ಮೂಸಿನೋಡಬೇಕು ಎಂಬ ಭಾವ ಹುಟ್ಟಿತು.<br /> ಭಾವ ಹುಟ್ಟಿ ಮೂಸಿಬಿಟ್ಟೆ<br /> ಹಿಗ್ಗಿ ನಿನ್ನ ಅಡಿಯೊಳಿಟ್ಟೆ<br /> ಗಮಗಮಗಮ ಒಳಗು ಹೊರಗು ಕಂಪು ಇಡುಗಿತು!<br /> -ಅಂಬಿಕಾತನಯದತ್ತ</strong></p>.<p>ನವೋದಯ ಆರಂಭದ ಈ ಕವಿತೆಗಳನ್ನು ಕುರಿತು ಮುನ್ನುಡಿಯಲ್ಲಿ ಸದಾಶಿವರಾವ್ ಹೀಗೆ ಬರೆದಿದ್ದಾರೆ: ಜೀವನಕ್ಕೂ ಕಾವ್ಯಕ್ಕೂ ಅನ್ಯಾದೃಶ್ಯವಾದ ಸಂಬಂಧವಿದೆ. ಜೀವನದ ಭವ್ಯತೆ ದಿವ್ಯತೆಗಳನ್ನು ಜನತೆಗೆ ತೋರಿಸಿಕೊಡಲು ಕಾವ್ಯವೇ ಕೈಗನ್ನಡಿ. <br /> <br /> ಹಿಂದಿನ ಜೀವನಕ್ಕೂ ಇಂದಿನ ಜೀವನಕ್ಕೂ ಇರುವ ಭೇದವನ್ನು ನೋಡಿ ಇಂದಿನ ಕವಿಗಳು ಇಂದಿನ ಜೀವನ ಧರ್ಮಕ್ಕೊಪ್ಪುವ ನೂತನ ಪಥದಲ್ಲಿ ಮುಂದುವರೆಯಲು ಯತ್ನಿಸುತ್ತಿದ್ದಾರೆ. ಛಂದಸ್ಸನ್ನು ಹೊಸರೂಪಕ್ಕೆ ಮಾರ್ಪಡಿಸಿಕೊಂಡು ನವಜೀವನದ ಸುಖದುಃಖಗಳನ್ನು ಯಥಾರ್ಥವಾಗಿ ಬಣ್ಣಿಸಲು ಹವಣಿಸುತಲಿದ್ದಾರೆ. <br /> <br /> ಹೊಸವಿಚಾರಗಳನ್ನು ಹೊಸ ಸಾಹಿತ್ಯದ ಮೂಲಕ ಜನತೆಗೆ ತಿಳಿಸಿ ವಿಚಾರ ಪಲ್ಲಟವನ್ನುಂಟುಮಾಡಲು ಸನ್ನದ್ಧರಾಗಿದ್ದಾರೆ. ಎಷ್ಟರಮಟ್ಟಿಗೆ ಈ ಧ್ಯೇಯದ ಸಾಫಲ್ಯವಾಯಿತೆಂಬುದು ಸಾಹಿತ್ಯಾಭಿಮಾನಿಗಳಿಗೆ ತಿಳಿದ ವಿಷಯ. <br /> <br /> `ಇಂಗ್ಲಿಷ್ ಗೀತಗಳು~ ಪ್ರಕಟವಾದ ಆಸುಪಾಸಿನಲ್ಲಿಯೇ ಬಂದ `ಅಲರು~ವಿನ ಮುನ್ನುಡಿಯ ಮಾತುಗಳು ತುಂಬಾ ಅರ್ಥಪೂರ್ಣವಾಗಿವೆ. ಸಂಕಲನದಲ್ಲಿ ಪೇಜಾವರ ಅವರೊಂದಿಗಿರುವ ಕವಿಗಳೆಂದರೆ: <br /> <br /> ಎಸ್.ವೆಂಕಟರಾಜ, ಕ.ರಾಘವಾಚಾರ್, ಪದ್ಮನಾಭ, ಬಾಲಮಿತ್ರ, ಶ್ರೀನಿವಾಸರಾವ್ ಕದಿರೆ, ಬಿ.ಆರ್.ಕಾಮತ್, ಸ್ವರ್ಗೀಯ ಕೆ.ಟಿ.ಆಚಾರ್ಯ, ವಾಮನ, ಬಿ.ಶ್ರೀಧರ ಕಕ್ಕಿಲಾಯ, ಶ್ರೀರಾಜ, ಕೆಮ್ಮಿಂಜೆ ಸುಬ್ರಾಯುಪಾಧ್ಯಾಯ, ಉದ್ಯಾವರ ಬಾಲಕೃಷ್ಣರಾವ್ ಹಾಗೂ ಹಿರಣ್ಮಯ. ಹಿಂದಿನ ಶತಮಾನದ ಮೂವತ್ತರ ದಶಕದ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯದ ಚಟುವಟಿಕೆ ಈ ಕೃತಿಯಿಂದ ತಿಳಿಯುತ್ತದೆ. <br /> <br /> ಇಲ್ಲಿರುವ ಪದ್ಮನಾಭ ಎಂಬ ಕಾವ್ಯನಾಮದ ತೊಟ್ಟೆತ್ತೋಡಿ ನಾರಾಯಣ ಭಟ್ಟರು ಮಂಗಳೂರಿನ ಕೆನರ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದು ಶಿವರಾಮ ಕಾರಂತರಿಗೆ `ಸಿರಿಗನ್ನಡ ಅರ್ಥಕೋಶ~ದಲ್ಲಿ ನೆರವು ನೀಡಿದವರು. ಕೆ.ಟಿ.ಆಚಾರ್ಯರ `ಟಿಟ್ಟಿಭ ಸಾನೆಟ್~,ಎಸ್. ವೆಂಕಟರಾಜರ `ನೇಹ ದ್ವಿಪದಿ~ ಮತ್ತು ಉದ್ಯಾವರ ಬಾಲಕೃಷ್ಣರಾವ್ ಅವರ `ನೆನಹು ಶರ ಷಟ್ಪದಿ~- ಇವುಗಳೆಲ್ಲ, ಆಗ ನಡೆಯುತ್ತಿದ್ದ ಪ್ರಯೋಗಗಳಿಗೆ ಸೂಚನೆಗಳು.<br /> ಪದ್ಮನಾಭ ಅವರ-</p>.<p><strong>ಮೆಲ್ಲಿತೆಲರದೆಲ್ಲ ಹೊಲವ ನಿಲ್ಲದಲುಗಿಸಲ್ <br /> ಲಲಿತ ಲಾಸ್ಯ ಕಲಲು ನಟಿಪ ತೆರದೆ ದ್ಯೋತಿಸಲ್</strong></p>.<p>ಎಂಬ ಲಯಗಳು 1930ರಲ್ಲೇ ಕಾಣಿಸಿಕೊಂಡಿದೆ. ಅದಮ್ಯ ಉತ್ಸಾಹದ ಅಪಾರ ಕವಿತಾ ಸಾಮರ್ಥ್ಯದ ಮಹಾಕವಿಯಾಗುವ ಸಾಧ್ಯತೆ ಪಡೆದಿದ್ದ ಪೇಜಾವರ ಸದಾಶಿವರಾವ್ ಅವರ ಪ್ರತಿಭೆಗೆ ಈ ಸಂಪಾದಿತ ಕೃತಿ `ಅಲರು~ ಸಾಕ್ಷಿಯಂತಿದೆ. ಹೊಸಗನ್ನಡ ಕಾವ್ಯಚರಿತ್ರೆಯಲ್ಲಿ `ಅಲರು~ ಸಂಕಲನಕ್ಕೆ ವಿಶಿಷ್ಟ ಸ್ಥಾನವಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>