ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆವಿನ ಲೋಕವು ಮರೆಯಬಾರದ ಇತಿಹಾಸ

Last Updated 17 ಸೆಪ್ಟೆಂಬರ್ 2018, 9:44 IST
ಅಕ್ಷರ ಗಾತ್ರ

ಡೂರು ಶ್ರೀಧರ ರಾವ್ ದೂರವಾಗಿ (2015 ಜೂನ್ 22) ಮೂರು ವರುಷ. ಮರೆವಿನ ಲೋಕವು ಅವರನ್ನು, ಅವರ ಸಾಧನೆಗಳನ್ನು ಮರೆತಿದೆ! ಇತಿಹಾಸವಾಗಬಹುದಾದ ಅದೆಷ್ಟೋ ವಿಚಾರಗಳು ಕಾಲಗರ್ಭ ಸಂದಿವೆ.

ಅಲ್ಲಿಲ್ಲಿ ದಾಖಲಿತವಾದ ವಿಚಾರಗಳು ಆಪ್ತ ವಲಯದಲ್ಲಷ್ಟೇ ಸುತ್ತುತ್ತಿವೆ. ಅಂಗೀಕಾರ ಅರ್ಹತೆಯ ಬಾಗಿಲಿಗೆ ಇಂತಹ ವಿಚಾರಗಳು ತಲಪುತ್ತಿಲ್ಲ. ತಲಪಿಸುವ ಕೆಲಸಗಳೂ ಆಗುತ್ತಿಲ್ಲ. ತಲಪಿಸಬೇಕಾದವರಿಗೆ ಪುರುಸೊತ್ತಿಲ್ಲ!

ಶ್ರೀಧರ ರಾಯರು ಆಶಕ್ತತೆಯೆಡೆಗೆ ಇಳಿಯುತ್ತಿದ್ದಾಗಲೂ ಯಕ್ಷಗಾನದ್ದೇ ಯೋಚನೆ. ‘ಯಕ್ಷಗಾನಕ್ಕಾಗಿ ಏನಾದರೂ ಮಾಡಬೇಕು, ದಾಖಲಿಸಬೇಕು,’ ಎನ್ನುವ ಮಹತ್ವಾಕಾಂಕ್ಷೆ. ಇದಕ್ಕಾಗಿ ಗಳಿಸಿದ್ದಕ್ಕಿಂತ ಕಳಕೊಂಡದ್ದೇ ಅಧಿಕ. ಇದು ಮನೆಮಂದಿಗೆ, ಕೆಲವೇ ಆಪ್ತರಿಗೆ ಮಾತ್ರ ತಿಳಿದಿತ್ತಷ್ಟೇ. ವರ್ಣಸಂಯೋಜನೆ, ಮಾದರಿಗಳು, ಪಾರಂಪರಿಕ ದಾಖಲಾತಿಗಳಿಗೆ ಸದಾ ಓಡಾಡಿದ್ದಾರೆ.

ಅಹಿತವನ್ನಾಡಿದವರಲ್ಲೂ ನಗುಮುಖದಿಂದ ವ್ಯವಹರಿಸಿದ್ದಾರೆ. ಜೀವಿತದಲ್ಲಿ ಏಕವ್ಯಕ್ತಿ ಸೈನ್ಯದಂತೆ ಆತ್ಮಾರ್ಥವಾಗಿ ದುಡಿದಿದ್ದಾರೆ. ಅವರ ಯೋಚನೆಗಳು ಪ್ರಸ್ತುತವೋ, ಅಪ್ರಸ್ತುತವೋ ಬೇರೆ ವಿಚಾರ. ಅದರ ವಿಮರ್ಶೆಯೂ ಅಗತ್ಯವಿಲ್ಲ. ಯಾಕೆಂದರೆ ಅವರು ನಮ್ಮ ಮಧ್ಯೆ ಇಲ್ಲ. ತನ್ನ ಅಧ್ಯಯನದ ಫಲಶ್ರುತಿಯಾಗಿ ಹೊರಹೊಮ್ಮಿದ ವಿಚಾರಗಳ ವಿಮರ್ಶೆಯಾಗಬೇಕೆನ್ನುವುದು ಜೀವಿತದ ಇಚ್ಛೆಯಾಗಿತ್ತು. ಪತ್ರಿಕಾ ಲೇಖನಗಳು, ಅಭಿನಂದನೆಗಳ ಮೆಚ್ಚುಗೆಗಳಷ್ಟೇ ರಾಯರನ್ನು ತೃಪ್ತಿಪಡಿಸಿದ್ದುವು. ಶ್ರೀಧರ ರಾಯರ ಮನದೊಳಗೆ ಈ ವಿಷಾದಗಳು ರಿಂಗಣಿಸುತ್ತಿದ್ದರೂ ಮನಸ್ಥಿತಿಯನ್ನು ಕಳೆದುಕೊಂಡವರಲ್ಲ. ಸಂಕಲ್ಪಿತ ವಿಚಾರಗಳಲ್ಲಿ ದೃಢತೆಯನ್ನು ಕಾಪಾಡಿಕೊಂಡವರು.

‘ಯಕ್ಷಗಾನದ ಪಾತ್ರಗಳು, ಪಾತ್ರಗಳ ಸ್ವಭಾವಗಳನ್ನು ಅನುಸರಿಸಿ ನಿರ್ದಿಷ್ಟ ಸ್ವರೂಪದ ವೇಷಧಾರಣ ಪದ್ಧತಿಯಿದೆ. ಈ ಪದ್ಧತಿಯ ಹುಟ್ಟು, ಕಾರಣಗಳತ್ತ ದೃಷ್ಟಿ ಹಾಯಿಸಿ, ಅವುಗಳ ಅಗತ್ಯವನ್ನು ಮನಗಾಣಿಸುವ ನೆಲೆಯಿಂದ ಅಧ್ಯಯನ ಶಿಬಿರದ ಅವಶ್ಯಕತೆಯಿದೆ.’ ಎನ್ನುವ ನಿರ್ಧಾರಕ್ಕೆ 2004ರಲ್ಲಿ ಬಂದಿದ್ದರು. ಒಂದು ಸಂಸ್ಥೆ ಯೋಚಿಸಿ ಅನುಷ್ಠಾನಿಸಬೇಕಾದ ವಿಚಾರವಿದು. ಬಹುಕಾಲ ಈ ಯೋಚನೆಗಳಿಗೆ ಸಾಂಸ್ಥಿಕವಾಗಿ ಹೇಳುವಂತಹ ಸ್ಪಂದನ ಸಿಗದೇ ಇದ್ದಾಗ ತಮ್ಮ ಮನೆಯಲ್ಲೇ ಕಾರ್ಯಾಗಾರವನ್ನು ಏರ್ಪಡಿಸಲು ನಿರ್ಧರಿಸಿದರು. 2004 ನವೆಂಬರ್ 14, 15, 16ರಂದು ಮೂರು ದಿವಸಗಳ ಕಾಲ ‘ತೆಂಕುತಿಟ್ಟು ಯಕ್ಷಗಾನ - ಪರಂಪರೆ ಮತ್ತು ರಂಗಪ್ರಯೋಗ, ಅಧ್ಯಯನ ಶಿಬಿರ’ ದ ಕಾರ್ಯಗಾರ ಜರುಗಿಸಿದ್ದರು.

ಶ್ರೀಧರ ರಾಯರು ಒಂದರ್ಥದಲ್ಲಿ ಅಜಾತಶತ್ರು. ಎಲ್ಲರನ್ನೂ ಜತೆ ಸೇರಿಸಿ ಮುಂದೆ ಹೋಗುವ ಗುಣ. ಅವರು ನಂಬಿದ, ಒಪ್ಪಿದ ಆಪ್ತರು ಜತೆಗಿರಲೇಬೇಕಿತ್ತು. ಸಮ್ಮೇಳನಕ್ಕಾಗಿ ಕಾರ್ಯಕಾರಿ ಸಮಿತಿಯೊಂದನ್ನು ರೂಪುಗೊಳಿಸಿದರು. ಅವರೆಲ್ಲಾ ಯಥಾಸಾಧ್ಯ ಕೈಜೋಡಿಸಿದರು. ಮೂರು ದಿವಸಗಳ ಕಾಲ ವಸತಿ, ಆಹಾರ ನೀಡಿ ಮನೆಯವರಂತೆ ನೋಡಿಕೊಂಡರು. ಶ್ರೀಧರ ರಾಯರ ಆಸಕ್ತಿ, ಮನೋನಿರ್ಧಾರಕ್ಕೆ ಮನೆ ಮಂದಿ, ಕುಟುಂಬ ಸಾಥ್ ನೀಡಿದರು. ತುಂಬಾ ಯಶಸ್ವಿಯಾಯಿತು. ಒಂದು ದಿನ ಯಾವುದೋ ಕಾರಣಕ್ಕಾಗಿ ಕೇರಳ ಬಂದ್ ಆಗಿತ್ತು. ಬೇಕಾದಲ್ಲಿಗೆ ವಾಹನ ಕಳುಹಿಸಿ ಕಾರ್ಯಾಗಾರವನ್ನು ಸಂಪನ್ನಗೊಳಿಸಿದ ನೆನಪು ಹಸಿಯಾಗಿದೆ.

‘ಯಕ್ಷಗಾನದ ವೇಷಭೂಷಣವಾಗಲೀ, ಬಣ್ಣಗಾರಿಕೆಯಾಗಲಿ, ಪರಂಪರೆಯ ನೆಲೆಯಲ್ಲಿಯೇ ಮುಂದುವರಿಯುತ್ತದೆ ಎನ್ನಲಾಗದು. ಪರಂಪರೆಗಾಗಿ ಪರಂಪರೆ ಮುಂದುವರಿಯುವ ಅಗತ್ಯವೂ ಇಲ್ಲ. ಆದರೆ ಆರ್ಥಪೂರ್ಣವಾದ ಪಾರಂಪರಿಕ ವೇಷಭೂಷಣಗಳು ಉಳಿಯಬೇಕು. ವೇಷಭೂಷಣಗಳಲ್ಲಿ ವೇಷದ ಪರಿಕರಗಳು, ಸಿದ್ಧತೆಗಳು, ಅವುಗಳ ಬಣ್ಣಗಳು ಒಂದಲ್ಲ ಒಂದು ನೆಲೆಯಿಂದ ಪೂರಕ. ಹಾಗೆಯೇ ಅವುಗಳನ್ನು ಧರಿಸುವ ಪಾತ್ರಗಳ ಸ್ವಭಾವಗಳಿಗೂ ನೇರವಾದ ಸಂಬಂಧವಿದೆ. ಸಮಕಾಲಿನ ಲಭ್ಯ ಮಾಹಿತಿಗಳ ನೆಲೆಯಿಂದ ಊಹಿಸಿ ಅರ್ಥಸಾಧ್ಯತೆಗಳನ್ನು ಕಂಡುಕೊಳ್ಳುವೆಡೆಗೆ ಒಂದು ಸಂಘಟಿತ ಯತ್ನದ ಆಶಯವೇ ಸಮ್ಮೇಳನದ ಆಶಯ.’ ಎಂದಿದ್ದರು.

ಡಾ.ಅಮೃತ ಸೋಮೇಶ್ವರರ ಅಧ್ಯಕ್ಷತೆಯಲ್ಲಿ ತುದಿಯಡ್ಕ ವಿಷ್ಣು ಕಾರ್ಯಾಗಾರವನ್ನು ಉದ್ಘಾಟಿಸಿದ್ದರು. ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ.ಎಂ.ಎಲ್.ಸಾಮಗ, ಅಡೂರು ಸುಬ್ಬ ರಾವ್ ಇವರೆಲ್ಲರ ಶುಭಾಶಂಸನೆ. ಹಿರಿಯರಾದ ಐ.ವಿ.ಕೃಷ್ಣ ರಾವ್, ಹೊಸಹಿತ್ಲು ಮಹಾಲಿಂಗ ಭಟ್, ಪ್ಯಾರ್ ನಾವೂರು ಅವರಿಗೆ ಅಭಿನಂದನೆ. ಬಲಿಪ ನಾರಾಯಣ ಭಾಗವತರು, ಕೋಳ್ಯೂರು ರಾಮಚಂದ್ರ ರಾವ್, ಪೆರುವಡಿ ನಾರಾಯಣ ಭಟ್, ಹೊಸಹಿತ್ಲು ಮಹಾಲಿಂಗ ಭಟ್, ಕೆ. ಗೋವಿಂದ ಭಟ್ - ಕಾರ್ಯಾಗಾರಕ್ಕೆ ಮಾರ್ಗದರ್ಶಕರು. ಮೂರು ದಿವಸಗಳಲ್ಲಿ ‘ಅಭಿಮನ್ಯು ಕಾಳಗ – ಕರ್ಣಪರ್ವ’, ‘ಪಂಚವಟಿ-ಇಂದ್ರಜಿತು-ಮೈರಾವಣ’, ಪೂರ್ವರಂಗ ಪಾತ್ರ ಚಿಂತನೆ ಮತ್ತು ‘ದಮಯಂತಿ ಪುನರ್ ಸ್ವಯಂವರ’ ಪ್ರಸಂಗಗಳ ಪ್ರದರ್ಶನ ಮತ್ತು ದಾಖಲಾತಿ ನಡೆದಿತ್ತು. ತೆಂಕುತಿಟ್ಟಿನ ವೇಷಭೂಷಣ, ಬಣ್ಣಗಾರಿಕೆಯ ಬಗೆಗೆ ವಿಚಾರ ಮಂಡನೆ, ಚರ್ಚೆ, ಚರ್ಚೆಯ ಫಲಿತಗಳ ನೆಲೆಯಿಂದ ಪ್ರಯೋಗ, ಪ್ರಾತ್ಯಕ್ಷಿಕೆ; ದೃಶ್ಯ ಹಾಗೂ ದಾಖಲಾತಿ – ಇವು ಮೂರು ದಿವಸಗಳ ಒಟ್ಟೂ ಕಲಾಪಗಳ ಹೂರಣ.

2011ರಲ್ಲಿ ಒಟ್ಟೂ ಫಲಶ್ರುತಿಯನ್ನು ‘ಯಕ್ಷಗಾನ ವರ್ಣ ವೈಭವ (ತೆಂಕು) ಕೃತಿಯ ಮೂಲಕ ಪ್ರಕಾಶಿಸಿದ್ದರು. ನಾವೆಲ್ಲಾ ಇಂದು ಪ್ರತಿಪಾದಿಸುವಂತೆ ‘ಅಕಾಡೆಮಿಕ್’ ಮಟ್ಟದ ಸಿದ್ಧ ವ್ಯಾಪ್ತಿಯ ಸ್ವರೂಪದಲ್ಲಿ ಕೃತಿಯ ವಿನ್ಯಾಸ ಇರದಿದ್ದರೂ; ಅದರ ಪುಟಗಳಲ್ಲಿ ಶ್ರೀಧರ ರಾಯರ ತನುಶ್ರಮ, ಯೋಚನೆ ಮತ್ತು ಅಧ್ಯಯನ ಕಾಣುತ್ತದೆ. ಒಂದೊಂದು ಯೋಚನೆಗಳಿಗೆ ಪೂರಕವಾದ ವಿಚಾರಗಳನ್ನು ಹೊಸೆಯುವ ಅವರ ಅಧ್ಯಯನ ನಿಜಕ್ಕೂ ಬೆರಗಾಗುತ್ತದೆ. ಈ ಬೆರಗನ್ನು ಯಕ್ಷಗಾನ ಲೋಕ, ವಿದ್ವಾಂಸ ವರ್ಗ ಒಪ್ಪದಿರಬಹುದು. ಅದು ಬೇರೆ ವಿಚಾರ.

ಸಮ್ಮೇಳನದ ಪ್ರದರ್ಶನಗಳಲ್ಲೂ ಶ್ರೀಧರ ರಾವ್ ರಾಜಿ ಮಾಡಿಕೊಂಡಿಲ್ಲ. ಹಗಲು ಜರುಗಿದ ಮಾತುಕತೆಗಳಲ್ಲಿ ಕಲಾವಿದರು ಉಪಸ್ಥಿತರಿರುವಂತೆ ವಿನಂತಿಸಲಾಗಿತ್ತು. ಬಹುತೇಕ ಕಲಾವಿದರು ಸ್ಪಂದಿಸಿದ್ದರು. ಮಾತುಕತೆಯ ಸ್ವರೂಪ, ಚರ್ಚಿತ ವಿಚಾರಗಳಂತೆ ವೇಷಭೂಷಣ, ಬಣ್ಣಗಾರಿಕೆ, ರಂಗ ನಡೆಗಳನ್ನು ಅನುಷ್ಠಾನಿಸಿದ್ದರು.

ಹಿಂದಿನ ದಿವಸ ಜರುಗಿದ ಪ್ರದರ್ಶನದ ಮರುವಿಮರ್ಶೆ ಮರುದಿನ ಇರುತ್ತಿತ್ತು. ಇದು ತುಂಬಾ ಆಪ್ತವಾಗಿರುತ್ತಿತ್ತು. ವೇಷ ಧರಿಸಿದ ಕಲಾವಿದರೂ ವಿಮರ್ಶೆಯಲ್ಲಿ ಭಾಗವಹಿಸಿದ್ದು ಸಮ್ಮೇಳನದ ಹೈಲೈಟ್. ಅಡೂರು ಮನೆಯ ಅಂಗಳ ಇದಕ್ಕೆ ಸಾಕ್ಷಿ. ನಮ್ಮ ಮಧ್ಯೆ ಅನೇಕ ವರುಷಗಳಿಂದ ಕಮ್ಮಟ, ಕಾರ್ಯಾಗಾರ ನಡೆದಿವೆ. ಕೆಲವೆಡೆ ವೀಡಿಯೋ ದಾಖಲಾತಿಯಾಗಿವೆ. ಇಂತಹ ವಿಮರ್ಶೆ, ಮಾತುಕತೆಗಳು ಪುಸ್ತಕರೂಪದಲ್ಲಿ, ಆಡಿಯೋ-ವೀಡಿಯೋ ಮೂಲಕ ಪ್ರಕಟವಾಗಬೇಕು. ಸಾರಸ್ವತ ಲೋಕಕ್ಕೆ ಲಭ್ಯವಾಗಬೇಕು. ಶ್ರೀಧರ ರಾಯರು ‘ಯಕ್ಷಗಾನ ವರ್ಣ ವೈಭವ’ ಕೃತಿಯ ಪ್ರಕಟಣೆ ಮೂಲಕ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಅವರು ದೂರವಾದರೂ ಕೃತಿಯು ಅವರ ಸಾಧನೆಗೆ ದೀವಿಗೆಯಾಗಿದೆ. ಅದನ್ನು ಒಪ್ಪುವುದು, ಬಿಡುವುದು ನಂನಮ್ಮ ಮನಸ್ಸಿನ ವ್ಯಾಪ್ತಿ, ಬೌದ್ಧಿಕ ಹರವು ಮತ್ತು ಕಲೆಯೊಂದನ್ನು ನೋಡುವ ದೃಷ್ಟಿಗೆ ಸಂಬಂಧಿಸಿದ ವಿಚಾರ. ಆದರೆ ಏಕವ್ಯಕ್ತಿಯಾಗಿ ಆಪ್ತರ ಸಹಕಾರದಿಂದ ಮಾಡಿದ ದಾಖಲಾತಿಯನ್ನು ಜನರು ಮರೆತರೂ ಇತಿಹಾಸ ಮರೆಯದು!

1984ರಲ್ಲಿ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ಬರೆದ ಪತ್ರದ ಸಾರವು ಶ್ರೀಧರ ರಾಯರ ಕಲಾ ತಪಸ್ಸಿಗೆ ಸಾಕ್ಷಿಯಾಗಿ ಮುಂದಿದೆ. - ‘ಪರಂಪರೆಯ ಹೆಸರಿನಲ್ಲಿ ಕಿರೀಟ, ಕರ್ಣಪತ್ರ, ಎದೆಹಾರ, ಭುಜಟಗಳೆಂಬ ಪರಿಕರಗಳೇನೋ ಉಳಿದು ಬಂದಿವೆಯಾದರೂ, ಅವುಗಳ ತಯಾರಿಕೆಯಲ್ಲಿ ಕೈಯಾಡಿಸಿದ ಶಿಲ್ಪಿಗಳ ವೈವಿಧ್ಯ ಮನೋಧರ್ಮಗಳಿಂದಾಗಿ ಮೂಲ ಮಾತೃಕೆಗಳಿಗೆ ಬಹಳಷ್ಟು ಭಂಗ ಬಂದಿದೆ ಎನ್ನುವುದು ಸೂಕ್ಷ್ಮದೃಷ್ಟಿಗೆ ಗೋಚರಿಸದೆ ಇರದು. ಹೆಸರಿನಿಂದ ಮಾತ್ರ ಆಭರಣಗಳು ಉಳಿದರೆ ಸಾಲದು, ರೂಪದಿಂದಲೂ ಉಳಿಯಬೇಕು. ಬಣ್ಣಗಾರಿಕೆಯೆಂದರೆ ಮುಖವರ್ಣಿಕೆ ಮಾತ್ರವಲ್ಲ. ಉಡುವ ತೊಡುವ ವಸ್ತುಗಳಿಗೂ ಅನ್ವಯವಾಗಬೇಕು. ಈ ಸತ್ಯವನ್ನು ಮನಗಂಡ ಪೀಳಿಗೆಯಲ್ಲಿ ಬೆಳೆದು ಬಂದ ಶ್ರೀಧರ ರಾಯರು ಅಹರ್ನಿಶಿ ತಮ್ಮನ್ನು ಅರ್ಪಿಸಿಕೊಂಡು, ಆರ್ಥಿಕ ಸಾಮಾಜಿಕ ಸಂಪತ್ತನ್ನು ಗೌಣವಾಗಿ ತಿಳಿದು ದುಡಿಯುತ್ತಿರುವುದು ನನ್ನನ್ನು ಚಕಿತಗೊಳಿಸಿದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT