ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸಂಗೀತ ಲೋಕದ ಕನಸುಗಾರ

ಜಗದೀಶ್ ಕೊಪ್ಪ
Published 23 ಮಾರ್ಚ್ 2024, 23:55 IST
Last Updated 23 ಮಾರ್ಚ್ 2024, 23:55 IST
ಅಕ್ಷರ ಗಾತ್ರ

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ‘ಕಲಾನಿಧಿ’ ಎಂಬ ಪ್ರತಿಷ್ಠಿತ ಪ್ರಶಸ್ತಿಯ ಗೌರವವನ್ನು ಪಡೆಯುವುದು ಪ್ರತಿಯೊಬ್ಬ ಕಲಾವಿದನ ಜೀವಮಾನದ ಆಸೆಯಾಗಿರುತ್ತದೆ. ಇದರ ಜೊತೆಗೆ ಈ ಪ್ರಶಸ್ತಿಯನ್ನು ನೀಡುವ ಮದ್ರಾಸ್ ಸಂಗೀತ ಅಕಾಡೆಮಿ ವತಿಯಿಂದ ನಡೆಯುವ ಮಾರ್ಗಳಿ ಸಂಗೀತೋತ್ಸವದಲ್ಲಿ ಹಾಡುವುದೂ ಎಲ್ಲರ ಕನಸಾಗಿರುತ್ತದೆ. ಪ್ರತಿವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳ ನಡುವೆ ಬರುವ ಮಾರ್ಗಶಿರ ಮಾಸದಲ್ಲಿ ಒಂದು ತಿಂಗಳು ಕಾಲ ಚೆನ್ನೈನಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ‘ಕಲಾನಿಧಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುತ್ತದೆ.

ಈ ವರ್ಷದ ಅಂದರೆ 2024ರ ಸಾಲಿನ ‘ಕಲಾನಿಧಿ ಪ್ರಶಸ್ತಿ’ಯನ್ನು ಸಂಗೀತ ಕ್ಷೇತ್ರದ ಬಂಡಾಯಗಾರ ಮತ್ತು ಸಂತ ಎಂದು ಗುರುತಿಸಲಾಗಿರುವ ಹಾಗೂ ಅದ್ವಿತೀಯ ಸಂಗೀತಗಾರ  ಟಿ.ಎಂ.ಕೃಷ್ಣ ಅವರಿಗೆ ಘೋಷಿಸಲಾಗಿದೆ. ತಾವು ನಂಬಿದ ತತ್ವ ಮತ್ತು ಸಿದ್ಧಾಂತಗಳಿಗೆ ಬದ್ಧರಾಗಿರುವ ಅವರು, ಎರಡು ದಶಕಗಳಿಂದ ಸಂಪ್ರದಾಯಸ್ಥ ಸಂಗೀತಗಾರರು ಮತ್ತು ಮದ್ರಾಸ್ ಸಂಗೀತ ಅಕಾಡೆಮಿ ವಿರುದ್ಧ ಸೈದ್ಧಾಂತಿಕವಾಗಿ ಗಟ್ಟಿಯಾಗಿ ನಿಂತಿದ್ದರು. ‘ಕಲೆಯು ತನ್ನ ಸ್ವಭಾವದಿಂದ ಸಾಮಾಜಿಕ ಜೀವಿಯಾಗಿದೆ’ ಎಂದು ನಂಬಿರುವ ಟಿ.ಎಂ.ಕೃಷ್ಣ ಅವರು ಸಂಗೀತಗಾರರಾಗಿ, ಬರಹಗಾರರಾಗಿ ಮತ್ತು ಸಂಶೋಧಕರಾಗಿ ನಿಖರವಾದ ಮಾನದಂಡಗಳನ್ನು ಕಾಯ್ದುಕೊಂಡು ಕರ್ನಾಟಕ ಸಂಗೀತದ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ.

ಸಂಪ್ರದಾಯಸ್ಥ ಸಂಗೀತಗಾರರ ದೃಷ್ಟಿಯಲ್ಲಿ ತಳವರ್ಗದ ಶೂದ್ರ ಮತ್ತು ದಲಿತ ಮಕ್ಕಳಿಗೆ ಸಂಗೀತ ಕಲಿಸಿಕೊಡುವುದು ದೋಷಪೂರಿತ ಕ್ರಿಯೆ ಎಂಬ ಭಾವನೆ ಇತ್ತು. ಅಂತಹ ಸಂದರ್ಭದಲ್ಲಿ ಚೆನ್ನೈನ ಮದ್ರಾಸ್ ಸಂಗೀತ ಅಕಾಡೆಮಿ ಸಭಾಂಗಣದಲ್ಲಿ ಕಿಕ್ಕಿರಿದ ಮೇಲ್ವರ್ಗದ ಸಂಗೀತಾಸಕ್ತರ ಮುಂದೆ ಪ್ರತಿಷ್ಠಿತ ಕಲಾವಿದರು ಕಾರ್ಯಕ್ರಮ ನೀಡುತ್ತಿದ್ದರು. ಅದಕ್ಕೆ ತದ್ವಿರುದ್ಧವಾಗಿ ಕೃಷ್ಣ ಅವರು ಮಹಾಬಲಿಪುರಂ ಕಡಲತೀರದಲ್ಲಿ ಮೀನುಗಾರರ ಹಳ್ಳಿಯಲ್ಲಿ ಮರಳಿನ ಮೇಲೆ ಕುಳಿತು ಅಲ್ಲಿನ ಮಕ್ಕಳ ಎದುರು ಹಾಡುತ್ತಾ, ಅವರಿಗೆ ಸಂಗೀತ ಕಲಿಸುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಭಾರತದ ಇತಿಹಾಸದಲ್ಲಿ ಸಂಗೀತ ಮತ್ತು ನೃತ್ಯವನ್ನು ಶತ ಶತಮಾನಗಳಿಂದಲೂ ಕಾಪಿಟ್ಟುಕೊಂಡು ಬಂದವರು ದೇವದಾಸಿಯರು. ಅವರ ಪಾರಂಪರಿಕ ವೃತ್ತಿಯಾಗಿದ್ದ ನೃತ್ಯ ಮತ್ತು ಸಂಗೀತ ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರ ಹವ್ಯಾಸವಾಗಿ ಪರಿವರ್ತನೆಗೊಂಡವು. 1926ರಲ್ಲಿ ರುಕ್ಮಿಣಿ ಅರುಂಡೇಲ್ ಅವರು ಭರತನಾಟ್ಯಕ್ಕೆ, 1932ರಲ್ಲಿ ಡಿ.ಕೆ.ಪಟ್ಟಮ್ಮಾಳ್ ಕರ್ನಾಟಕ ಸಂಗೀತಲೋಕಕ್ಕೆ ಪ್ರವೇಶಿಸಿ ಹೊಸ ಅಧ್ಯಾಯ ಬರೆದರು. ಈ ಕಾರಣದಿಂದಾಗಿ ಕೃಷ್ಣ ಅವರು ಕಲಾವಿದರಿಗೆ ಗುರುತಿಸಲಾದ ದ್ವೇಷದ ಈ ಪರಿಕಲ್ಪನೆಯನ್ನು ತಿರಸ್ಕರಿಸಿ, ಮಾನವ ಸ್ಥಿತಿಯ ಎಲ್ಲಾ ಅಂಶಗಳೊಂದಿಗೆ ಸಂಪರ್ಕದಲ್ಲಿ ಉಳಿಯುವುದನ್ನು ನಂಬಿದ್ದಾರೆ.

ಚೆನ್ನೈನ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕೃಷ್ಣ ಅವರು ಖ್ಯಾತ ಗುರುಗಳಾದ
ಬಿ. ಸೀತಾರಾಮ ಶರ್ಮ, ಚೆಂಗಲ್‌ಪೇಟ್ ರಂಗನಾಥನ್ ಮತ್ತು ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಲ್ಲಿ ತರಬೇತಿ ಪಡೆದರು. ಸಂಗೀತ ಕಲಿಯುವಿಕೆಯ ಜೊತೆಗೆ ಅದರ ಇತಿಹಾಸವನ್ನು ಅಭ್ಯಾಸ ಮಾಡುತ್ತಾ ಬಂದವರು. ಹಾಗಾಗಿ ಸಂಗೀತವೆಂಬುದು ಕೇವಲ ವಿದ್ವಾಂಸರ ಸ್ವತ್ತಲ್ಲ, ಅದು ಈ ನೆಲದ ಎಲ್ಲರೆದೆಯ ಪಾಡುಗಳು ಹಾಡಾಗಿ ಹರಿದು ಬಂದುದರ ಪ್ರತಿಫಲ ಎಂಬುದನ್ನು ಗ್ರಹಿಸಿದರು. ಈ ಕಾರಣಕ್ಕಾಗಿ ತಮ್ಮ ಜೀವನದುದ್ದಕ್ಕೂ ಎಲ್ಲಾ ತಳವರ್ಗದ ಹಾಡುಗಾರರು, ವಾದ್ಯಗಾರರ ಜೊತೆ ಬೆರೆಯುತ್ತಾ ಹಾಡುಗಾರಿಕೆಯಲ್ಲಿ ಅನೇಕ ಹೊಸ ಪಟ್ಟುಗಳನ್ನು ಕಲಿತರು. ನಮ್ಮ ಕರ್ನಾಟಕದ ಸವದತ್ತಿ ಯಲ್ಲಮ್ಮನ ಜೋಗತಿಯರಿಂದ ಗೀಗಿ ಪದಗಳನ್ನು ಕಲಿಯುವುದರ ಜೊತೆಗೆ ಅವರ ಜೊತೆ ಬೆಂಗಳೂರಿನ ಪುರಭವನದ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದರು. ಇಷ್ಟು ಮಾತ್ರವಲ್ಲದೆ ಕೋಲೆ ಬಸವನ ಜೊತೆ ವಾಲಗ ನುಡಿಸುವ ಕಲಾವಿದರ ಜೊತೆ ಕುಳಿತು ವಾದ್ಯ ನುಡಿಸುವ ಅವರ ಕಲೆಗಾರಿಕೆ ಮತ್ತು ಅವರು ನುಡಿಸುವ ನಾಟಿ ರಾಗವನ್ನು ಅಭ್ಯಾಸ ಮಾಡಿದರು. 

ವಾಸ್ತವ ಸತ್ಯಗಳನ್ನು ಅರ್ಥ ಮಾಡಿಕೊಂಡು, ತಮ್ಮ ಸಂಗೀತದ ಮೂಲಕ ಅನುಭವಗಳನ್ನು ಹಂಚಿಕೊಳ್ಳುವ ಹಾಗೂ ತಮ್ಮ ಸಂವೇದನೆಯನ್ನು ಹೆಚ್ಚಿಸಿಕೊಂಡಿರುವ ಕಲಾವಿದರಾಗಿ ಅವರು ಅಪರೂಪದ ಶಾಸ್ತ್ರೀಯ ಸಂಗೀತಗಾರ. ಭಾರತದ ಆಳವಾದ ಸಾಮಾಜಿಕ ವಿಭಾಗಗಳನ್ನು ಸರಿಪಡಿಸಲು ಕಲೆಯ ಅಭಿವೃದ್ಧಿಗಾಗಿ ಓರ್ವ ಕಲಾವಿದನಾಗಿ ಮತ್ತು ಸಂಗೀತದ ರಾಯಭಾರಿಯಾಗಿ ದುಡಿಯುತ್ತಿರುವ ಕೃಷ್ಣ ಅವರು 2016 ರಲ್ಲಿ ಏಷ್ಯಾದ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾದರು. 

ಇಂತಹ ಆಳವಾದ ಸಂಶೋಧನೆ ಮತ್ತು ಅಭಿರುಚಿ ಇದ್ದ ಕಾರಣಕ್ಕಾಗಿ ಸಂಗೀತ ಕ್ಷೇತ್ರದಲ್ಲಿ ಎದೆಯ ಧ್ವನಿಗಿಂತ ಮಿಗಿಲಾದ ರಾಗವಿಲ್ಲ ಎಂದು ನಂಬಿಕೊಂಡು ಬಂದವರು. ಅವರ ‘ಸದರನ್ ಮ್ಯೂಸಿಕ್’ ಎಂಬ ಕೃತಿಯು ಅವರ ಸಂಗೀತದ ಚಿಂತನೆಗಳಿಗೆ ಸಾಕ್ಷಿಯಾಗಿದೆ. ಅವರೊಳಗಿನ ಸಂಗೀತ ಪ್ರಜ್ಞೆಯು ಪ್ರಜಾಪ್ರಭುತ್ವ, ಸಂಸ್ಕೃತಿ ಮತ್ತು ಕಲಿಕೆಯ ಬಾಹ್ಯರೇಖೆಗಳನ್ನು ಅನ್ವೇಷಿಸುವಾಗ ಸಮಾಜದೊಳಗಿನ ಜಾತಿ, ವರ್ಗ ಮತ್ತು ಲಿಂಗದ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತದೆ. ಸಂಗೀತ ಕಾರ್ಯಕ್ರಮದಲ್ಲಿ ಹಾಡುಗಾರನ ಜೊತೆ ಪಕ್ಕ ವಾದ್ಯ ನುಡಿಸುವ ಕಲಾವಿದ ಕೂಡಾ ಮುಖ್ಯ ಎಂದು ನಂಬಿರುವ ಕೃಷ್ಣ ಅವರು, ಕರ್ನಾಟಕ ಸಂಗೀತದಲ್ಲಿ ಪ್ರಮುಖ ಪಕ್ಕ ವಾದ್ಯವಾದ ಮೃದಂಗದ ಬಗ್ಗೆ ಅಧ್ಯಯನ ಮಾಡಿದರು.

ಚರ್ಮದಿಂದ ತಯಾರು ಮಾಡುವ ಈ ವಾದ್ಯ ಪರಿಕರದ ಬೆನ್ನುಹತ್ತಿ ಚರ್ಮ ಹದ ಮಾಡುವವರು ಹಾಗೂ ಮೃದಂಗ ತಯಾರಕರನ್ನು ಭೇಟಿ ಮಾಡಿ ಇತ್ತೀಚೆಗೆ ‘ಸೆಬಾಸ್ಟಿಯನ್ ಅಂಡ್ ಸನ್ಸ್, ಎ, ಬ್ರೀಪ್ ಹಿಸ್ಟರಿ ಆಫ್ ಮೃದಂಗಂ ಮೇಕರ್ಸ್‌’ ಎಂಬ ಕೃತಿಯನ್ನೂ ರಚಿಸಿದ್ದಾರೆ. ಕೃಷ್ಣ ಅವರು ತೊಂಬತ್ತರ ದಶಕದ ಆರಂಭದಿಂದಲೂ ತಮ್ಮ ಕಲಾತ್ಮಕ ಕಾಳಜಿಯನ್ನು ಏಕಕಾಲದಲ್ಲಿ ವಿಸ್ತರಿಸುತ್ತಾ ತಮ್ಮ ಸಂಗೀತಕ್ಕೆ ಹೊಸ ಆಯಾಮಗಳನ್ನು ಮತ್ತು ಜಾಣ್ಮೆಯನ್ನು ಸೇರಿಸುತ್ತಿದ್ದಾರೆ. ಅವರ ಈ ಸಾಮಾಜಿಕ ಸೇವೆಗೆ ‘ಕಲಾನಿಧಿ ಪ್ರಶಸ್ತಿ’ ದೊರಕಿದ್ದು ಅವರ ನಂಬಿಕೆಗಳಿಗೆ ದೊರೆತ ಗೌರವ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT