ಆ ಪಾಳು ಬಿದ್ದ ಮನೆಯ ಬೀಳದೆ ಉಳಿದ ನಡುಗಂಬ ನೀನು ನನ್ನದೇ ಆತ್ಮದ ಬೆನ್ನ ಹುರಿ
ಕತ್ತೆ ಎನ್ನಲಿಲ್ಲ ಕುದುರೆ ಎನ್ನಲಿಲ್ಲ ಗಂಡ ಮಕ್ಕಳು ಮೊಮ್ಮಕ್ಕಳನ್ನೂ ಸೇರಿಸಿ ಹೊತ್ತು ತಿರುಗಿದೆ ಸೆರಗಿನ ಸಿಂಬಿ ಸುತ್ತಿದ ನೆತ್ತಿಯಲಿ ಅದೆಷ್ಟೋ ಗಂಟುಗಳ ಊರಿನಿಂದ ನೀರಿದ್ದಲ್ಲಿಗೆ ನೀರಿನಿಂದ ಮತ್ತೆ ಶಾನುಭೋಗರ ಮನೆಗಳಿಗೆ
ಗುಲಗಂಜಿ ಸುಖ ಸಮೃದ್ಧ ದುಃಖ ಅದಲು ಬದಲು ಮಾಡಿ ಬದುಕಿ ಹೋದ ನಿನ್ನ ಮುಂದೆ ದೇಶಾನೆಲ್ಲ ಸುತ್ತಾಡಿ ತಲೆ ಅನ್ನೋ ಹಗೇದಾಗ ಸಿಕಿದ್ದೆಲ್ಲಾ ತುಂಬಿಕೊಂಡು ಸಿಕ್ಕಾಪಟ್ಟೆ ಒದ್ದಾಡೋ ನಾನು ಏನೇನೂ ಅಲ್ಲಾ ನೀ ಮನುಷ್ಯಾಳು ಮಾತ್ರ ಆಗಿರಲಿಲ್ಲ
ಒಡಕಿನ ಹಳ್ಳದ ಹನಿಯಲ್ಲಿ ನೀನು ಸುರಿಸಿದ ಬೆವರ ರುಚಿ ಇನ್ನೂ ಕಡಿಮೆ ಆಗಿಲ್ಲ ಮೊನ್ನೆತಾನೆ ಒರೆಸಿದ ನಿನ್ನ ಫೋಟೋದಲ್ಲಿ ಸದಾ ತೇವವಾಗಿಯೇ ಇರುವ ನಿನ್ನ ಕಣ್ಣು ಬಿದ್ದಿರುವ ಶಾನುಭೋಗರ ಮನೆಯ ಕಂಡು ಏನೋ ಹೇಳಿತು
ಇಡೀ ಊರನ್ನೇ ಬಳಸಿದ್ದ ಎಲೆಬಳ್ಳಿ ತೋಟದ ತೋಳಬಂಧಿ ನೀನು ಹುಡುಕುತ್ತಿದ್ದೇನೆ ಎಲೆ ಬಳ್ಳಿ ತೋಟ ಮೂಗು ಮುಚ್ಚಿಕೊಂಡೇ ಓಡಾಡಬೇಕೀಗ ಊರು ನೆನಪಾಗಿ ವಿಮಾನ ಇಳಿದು ಬಂದ ಗೆಳೆಯ ಸ್ವಚ್ಛ ಹಸಿರು ಬೋರ್ಡು ತಂದಿರುವ ಪ್ರಚಾರಕ್ಕೆ ಬೇಕಾದ್ದೆಲ್ಲಾ ಇದೆ ಬೇಡಾದ್ದು ಈಗ ಯಾವುದೂ ಉಳಿದಿಲ್ಲ
ಕೌದಿಯಾಗಿರುವ ನೀನುಟ್ಟಿದ್ದ ಸೀರೆಯ ಘಮದಲ್ಲಿ ಯಾರಿಗೂ ಕಾಣಿಸದಂತೆ ನಾನು ಬಿಕ್ಕಳಿಸುತ್ತಿದ್ದೇನೆ ಮಾರಣಾಂತಿಕ ಖಾಯಿಲೆಗೆ ಬಿದ್ದಂತೆ
ಅಲೈ ಕುಣಿತಕ್ಕೆ ಹಗಲು ರಾತ್ರಿ ದಣಿದು ದಣಿದೇ ದಣಿವಾರಿಸಿಕೊಳ್ಳುತ್ತಿದ್ದ ನನ್ನೂರು ಮೊಹರಂ ಪದಗಳ ಲಾಲಿಯಲಿ ನಿದ್ದೆ ಮರೆಯುತ್ತಿದ್ದ ನನ್ನೂರು ಈಗ ದೂರ ದರುಶನದ ಅಪರಾಧ ಸರಣಿಗಳಲಿ ಮಿರ ಮಿರ ಮುಂಚುತ್ತಿದೆ
ಬೆವರು ರಕ್ತ ಕೈ ಕೈ ಮಿಲಾಯಿಸಿರುವ ಈ ವೇಳೆ ಜಗದ ಕಣ್ಣೇಕೋ ಮಂಜು ಮಂಜು