ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ಸಂಜೆ ಯಶವಂತಪುರದಲ್ಲಿ ಭರ್ಜರಿ ರೋಡ್ ಷೋ ನಡೆಸಿದರು.
ಒಂದು ತಾಸು ತಡವಾಗಿ ಬಂದ ಶಾ ಮತ್ತಿಕೆರೆ ಸರ್ಕಲ್ ನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಹೂ ಮಾಲೆ ಹಾಕಿದರು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಶಾಗೆ ಭಾರಿ ಗಾತ್ರದ ಕನಕಾಂಬರ ಹೂವಿನ ಹಾರ ಹಾಕಿ ಮೈಸೂರು ಪೇಟಾ ತೊಡಿಸಿ ಗೌರವ ಸಮರ್ಪಿಸಿದರು. ಪಟಾಕಿ ಸಿಡಿಸಿ ಷೋಗೆ ಚಾಲನೆ ನೀಡಲಾಯಿತು.
ಜೆ.ಪಿ.ಪಾರ್ಕ್, ಬಿ.ಕೆ. ನಗರ, ತ್ರಿವೇಣಿ ರಸ್ತೆ,, ಯಶವಂತಪುರ ಸರ್ಕಲ್, ಬಿ.ಕೆ.ನಗರ 10ನೇ ಕ್ರಾಸ್, ಆಂಜನೇಯ ಟೆಂಪಲ್ ರಸ್ತೆ, ಎಲ್.ಎನ್.ಕಾಲೋನಿ ಮುಖಾಂತರ ತೆರೆದ ವಾಹನದಲ್ಲಿ ಪ್ರಚಾರ ಕಾರ್ಯ ನಡೆಸಿದರು.
ಅತ್ಯುತ್ಸಾಹದಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಕೇಸರಿ ಪೇಟಾ ತೊಟ್ಟು ‘ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎಂದು ಘೋಷಣೆ ಕೂಗುತ್ತಾ ಸಾಗಿದರು. ರಸ್ತೆಯ ಇಕ್ಕೆಲಗಳಲ್ಲೂ ಕಿಕ್ಕಿರಿದು ಸೇರಿದ್ದ ಸಾವಿರಾರು ಜನರು ಶಾ ಅವರ ಉತ್ಸಾಹ ಇಮ್ಮಡಿಗೊಳಿ
ಸಿದರು. ಮುಖಂಡರಾದ ಆರ್. ನಂಜುಂಡಪ್ಪ,
ಶಾಸಕ ಡಾ. ಸಿ.ಎನ್.ಅಶ್ವತ್ಥ ನಾರಾಯಣ್, ಪಾಲಿಕೆಯ ಸದಸ್ಯೆ ಮಮತಾ ವಾಸುದೇವ್, ಲಕ್ಷೀಕಾಂತ ಭಾಗಿಯಾಗಿದ್ದರು.