ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಎನ್. ನೆನಪಿನಲ್ಲಿ ವೈಚಾರಿಕ ಚಿಂತನ ಮಾಲೆ

Last Updated 5 ಜುಲೈ 2018, 20:29 IST
ಅಕ್ಷರ ಗಾತ್ರ

ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಸಾಂಸ್ಕೃತಿಕ ಚಟವಟಿಕೆಗಳ ಮೂಲಕ ಜನರಲ್ಲಿ ವೈಚಾರಿಕ ಮನೋಭಾವ ಬಿತ್ತುತ್ತಿದೆ ಸಮುದಾಯ ಸಂಘಟನೆ. ರಂಗನಾಟಕ, ಬೀದಿನಾಟಕ, ವಿಚಾರ ಸಂಕಿರಣ, ಪುಸ್ತಕ ಪ್ರಕಟಣೆ ಮೂಲಕ ವೈಚಾರಿಕ ಚಿಂತನೆಗಳನ್ನು ಪ್ರತಿಪಾದಿಸುತ್ತಾ ಬಂದಿದೆ ಸಮುದಾಯ.

ಸಮುದಾಯದ ಕಾರ್ಯಕ್ರಮಗಳಿಗೆ ಸದಾ ಒತ್ತಾಸೆಯಾಗಿ, ಪ್ರೋತ್ಸಾಹಿಸುತ್ತಿದ್ದವರು ಹಿರಿಯ ವೈಚಾರಿಕ ಚಿಂತಕ ಡಾ.ಎಚ್‌.ನರಸಿಂಹಯ್ಯ. ‘ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡಿ’ ಎನ್ನುವ ಸರಳ ಸಿದ್ಧಾಂತದ ಮೂಲಕ ವೈಜ್ಞಾನಿಕ ಚಿಂತನೆಯ ಬೀಜ ಬಿತ್ತಿದವರು ಅವರು. ನುಡಿದಂತೆ ನಡೆದ ಸರಳ, ಪ್ರಾಮಾಣಿಕ ಬದುಕಿನ ಎಚ್‌.ಎನ್‌. ಅವರ ಚಿಂತನೆಗಳು ನಾಡಿನಾದ್ಯಂತ ಇಂದಿಗೂ ಬೆಳಗುತ್ತಿವೆ.

ಮೇರು ವ್ಯಕ್ತಿತ್ವ ಡಾ.ಎಚ್.ಎನ್. ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಸಮುದಾಯ, ನ್ಯಾಷನಲ್ ಕಾಲೇಜು ಸಹಭಾಗಿತ್ವದಲ್ಲಿ ಜುಲೈ 6, 2018ರಿಂದ ಜುಲೈ 6, 2020ರವರೆಗೆ ಪ್ರತಿ ತಿಂಗಳು 6ನೇ ತಾರೀಖು ಒಟ್ಟು 24 ಉಪನ್ಯಾಸಗಳನ್ನು ಸತತ ಎರಡು ವರ್ಷಗಳವರೆಗೆ ಆಯೋಜಿಸಲು ಉದ್ದೇಶಿಸಿದೆ. ಇದರ ಭಾಗವಾಗಿ ಜುಲೈ 6ರಂದು ಡಾ.ಎಚ್.ಎಸ್. ದೊರೆಸ್ವಾಮಿ ಅವರು ಈ ಉಪನ್ಯಾಸ ಸರಣಿಯನ್ನು ಉದ್ಘಾಟಿಸಲಿದ್ದಾರೆ.

ಈ ಸರಣಿಯಲ್ಲಿ ಡಾ.ಎಚ್.ಎನ್. ಬದುಕು, ‘ಹೋರಾಟದ ಹಾದಿ’, ‘ತೆರೆದ ಮನ’ ಮೊದಲಾದ ಅವರ ಬರಹಗಳ ವಿಶ್ಲೇಷಣೆ ಸೇರಿದಂತೆ ಸಮಕಾಲೀನ, ಸಾಮಾಜಿಕ, ರಾಜಕೀಯ, ಆರ್ಥಿಕ, ವೈಜ್ಞಾನಿಕ ಚಿಂತನೆ ಸೇರಿದಂತೆ ಪ್ರಗತಿಪರ ಚಳವಳಿಗಳ ಕುರಿತ ಚಿಂತನ–ಮಂಥನ ನಡೆಯಲಿದೆ.

24 ತಿಂಗಳು ನಡೆಯುವ ಈ ಕಾರ್ಯಕ್ರಮ ಸರಣಿಯ ಎಲ್ಲಾ ಉಪನ್ಯಾಸ ಹಾಗೂ ಸಂವಾದವನ್ನು ಅಕ್ಷರರೂಪಕ್ಕೆ ತಂದು ಸಾಮಾಜಿಕ ಚಿಂತನ ಸಂಕಲನವನ್ನು ಎಚ್.ಎನ್. ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಗ್ರಂಥ ಮತ್ತು ಧ್ವನಿಸುರುಳಿ ರೂಪದಲ್ಲಿ ಪ್ರಕಟಿಸುವ ಉದ್ದೇಶವೂ ಸಮುದಾಯಕ್ಕಿದೆ. ಈ ಸರಣಿಯ ಜತೆಗೆ ರಂಗಭೂಮಿ ಚಟುವಟಿಕೆಗಳೂ ನಡೆಯಲಿವೆ. ವೈಚಾರಿಕ ಚಿಂತನೆ ಪ್ರತಿಪಾದಿಸುವ ನಾಟಕ ರಚನಾ ಸ್ಪರ್ಧೆಯನ್ನೂ ಆಯೋಜಿಸಲಾಗುವುದು ಎಂದು ಸಮುದಾಯದ ಪ್ರಕಟಣೆ
ತಿಳಿಸಿದೆ.

**

ಡಾ.ಎಚ್‌.ನರಸಿಂಹಯ್ಯ ನೆನಪಿನ ವೈಚಾರಿಕ ಚಿಂತನ ಮಾಲೆ ಉಪನ್ಯಾಸ ಸರಣಿ ಉದ್ಘಾಟನೆ: ಡಾ.ಎಚ್.ಎಸ್. ದೊರೆಸ್ವಾಮಿ ಅವರಿಂದ. ಅತಿಥಿ–ಪ್ರೊ.ಎಸ್.ಎನ್. ನಾಗರಾಜ ರೆಡ್ಡಿ, ಅಗ್ರಹಾರ ಕೃಷ್ಣಮೂರ್ತಿ, ಅಧ್ಯಕ್ಷತೆ–ಡಾ.ಎ.ಎಚ್.ರಾಮರಾವ್. ಆಯೋಜನೆ–ನ್ಯಾಷನಲ್ ಕಾಲೇಜು, ಸಮುದಾಯ ಬೆಂಗಳೂರು. ಸ್ಥಳ–ಡಾ.ಎಚ್.ಎನ್. ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ. ಬೆಳಿಗ್ಗೆ 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT