ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಮಣ್ಣಿಗೆ ಮನಸೋತಿದ್ದ ಚೆನ್ನವೀರ ಕಣವಿ

Last Updated 16 ಫೆಬ್ರುವರಿ 2022, 6:29 IST
ಅಕ್ಷರ ಗಾತ್ರ

ಧಾರವಾಡ:ಧಾರವಾಡದ ನೆಲದ ಗುಣವೇನೊ ಋಣವೇನೊ,ಕವಿಗಾಳಿ ಸವಿಗಾಳಿ ತೀಡುತಿಹುದು,ಧಾರವಾಡದ ತಾಯಿ ಮಡಿಲಲ್ಲಿ ಮೊರೆಯಿಟ್ಟು,ದತ್ತವಾಣಿಗೆ ಎದೆಯು ಕೊಡುತಿಹುದು…

ಹಸಿರು ಕಣ್ಮನಗಳಲಿ ರಸಭಾವ ಸಂಚಾರ,ಕಿರುವಕ್ಕಳೂ ಕವಿಗಳಾಗಬಹುದು...

ಡಾ.ಚೆನ್ನವೀರ ಕಣವಿ ಅವರ ಭಾವಜೀವಿ ಕವನ ಸಂಕಲನದ ಈ ಕವಿತೆಯ ಸಾಲುಗಳು ಅವರ ಧಾರವಾಡ ಪ್ರೀತಿ,ಇಲ್ಲಿನ ಸಾಹಿತ್ಯ ಪ್ರೇರಕ ಪರಿಸರದ ಜತೆಗೆ ಪ್ರತಿಯೊಬ್ಬರೂ ಕವಿಗಳಾಗಿ ಸಾಹಿತ್ಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಅವರ ಆಶಯವನ್ನು ಸಾರಿ ಹೇಳುವಂತಿದೆ.

ಅತ್ತಿಕೊಳ್ಳದ ಮುಂಜಾನೆ ಬೆಳಗನ್ನು ಒಂದು ದಿನವೂ ತಪ್ಪಿಸದೇ ನೋಡುತ್ತಿದ್ದ ಡಾ.ಕಣವಿ ಅವರಿಗೆ ಧಾರವಾಡ ಮಣ್ಣಿನ ಪ್ರಕೃತಿ ಸೊಬಗು ಬಹಳವಾಗಿ ಹಿಡಿಸಿದ್ದನ್ನು ಅವರ ಕವಿತೆಗಳ ಸಾಲುಗಳಲ್ಲಿ ಅಭಿವ್ಯಕ್ತವಾಗುತ್ತಲೇ ಇತ್ತು.

ಹೂವು ಹೊರಳವುವು ಸೂರ್ಯನ ಕಡೆಗೆ ಎಂಬ ಕವಿತೆಯ ಸಾಲುಗಳಂತೆಯೇ,ನಸುಕಿನಲ್ಲೇ ಎದ್ದು ತಮ್ಮ ಮುದ್ದಿನ ನಾಯಿಯೊಂದಿಗೆ ಅತ್ತಿಕೊಳ್ಳಕ್ಕೆ ವಾಯುವಿಹಾರಕ್ಕೆ ಹೋಗುವುದು ಅವರ ದಿನದ ಮೊದಲ ಕೆಲಸ.ಸಾಧಾರಣ ಜುಬ್ಬ, ಪೈಜಾಮ, ಕುತ್ತಿಗೆಯನ್ನು ಸುತ್ತಿದ ದಪ್ಪನೆಯೆ ಮಫ್ಲರ್,ತಲೆ ಮೇಲೆ ಅದೇ ಟೋಪಿ,ಕಣ್ಣಿನ ಸುತ್ತ ಕನ್ನಡಕದ ಪ್ರಭಾವಳಿ,ಮೊಗದ ತುಂಬಾ ನಗು ಕಣವಿ ಅವರ ಈ ಚಹರೆಯನ್ನು ಧಾರವಾಡವು ಎಂದಿಗೂ ಮರೆಯದು.

ಕವಿ ಬೇಂದ್ರೆ ಅವರಿಗೆ ಪ್ರೇರಣೆಯಾದ ಅತ್ತಿಕೊಳ್ಳದ ಹಸಿರು ಗುಡ್ಡಗಳ ಸೊಬಗು ಕಣವಿ ಅವರನ್ನೂ ಆಕರ್ಷಿಸಿತ್ತು.ಇದು ಅವರ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಿತ್ತು. ಹೀಗಾಗಿ ಆಧುನಿಕ ಕನ್ನಡ ಕಾವ್ಯ ಪ್ರಪಂಚಕ್ಕೆ ಧಾರವಾಡವು ನೀಡಿದ ಮೊದಲ ತಲೆಮಾರಿನ ಕವಿಗಳಾದ ಬೇಂದ್ರೆ,ಗೋಕಾಕರ ನಂತರದಲ್ಲಿ ಚೆನ್ನವೀರ ಕಣವಿ ಅವರು ಮಹತ್ವದ ಸ್ಥಾನವನ್ನು ಅಲಂಕರಿಸಿದ್ದರು.

ಪಾರಿಜಾತದಂತೆ ಕೋಮಲವಾದ ಮನಸ್ಸು,ಹೂವಿನ ಪರಿಮರಳದಂತ ಹೃದಯ ವೈಶಾಲ್ಯತೆ ಹಾಗೂ ಅನನ್ಯವಾದ ಅವರ ಪ್ರತಿಭೆ ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.ಸುಮಾರು ಏಳು ದಶಕಗಳ ತಮ್ಮ ಸಾಹಿತ್ಯ ಕೃಷಿಯಲ್ಲಿ ಭಾವಜೀವಿಯಾಗಿ, ಸ್ನೇಹಿಜೀವಿಯಾಗಿ,ಪ್ರೀತಿ,ಅಂತಃಕರಣಗಳಿಂದ ಮಾನವೀಯ ಸಂಬಂಧಗಳನ್ನು ಹೊಳೆಯಾಗಿ ಅವರು ಹರಿಸಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ,ನವ್ಯೋತ್ತರ ಸಾಹಿತ್ಯ ಕೊನೆಯವರೆಗೂ ಅವರ ಲೇಖನಿಯಿಂದ ಹೊರಹೊಮ್ಮುತ್ತಲೇ ಬಂದಿತು.

ಕಣವಿ ಅವರ ಜೀವನವೇ ಕಾವ್ಯ,ಕಾವ್ಯವೇ ಜೀವನ ಎನ್ನುವಂತ್ತಿತ್ತು ಅವರ ವ್ಯಕ್ತಿತ್ವ.ತಾವು ಹುಟ್ಟಿದ್ದು ಗದಗ ಜಿಲ್ಲೆಯ ಹೊಂಬಳದಲ್ಲಾದರೂ,ಧಾರವಾಡದ ಸೊಬಗು ಅವರನ್ನು ಸಂಪೂರ್ಣವಾಗಿ ಆವರಿಸಿತ್ತು.ಇದರ ಪರಿಣಾಮವೇ ಅವರ ಕಾವ್ಯಗಳಲ್ಲಿ ಪ್ರಕೃತಿಯ ರಮ್ಯತೆ ಸುಂದರವಾಗಿ ಸ್ಪುರಿಸಿವೆ.ಇಷ್ಟು ಮಾತ್ರವಲ್ಲ ತಮ್ಮ ವಿದ್ಯಾರ್ಥಿ ದಿಸೆಯಲ್ಲಿ ಆಶ್ರಯ ನೀಡಿ ಕಲಿಕೆಗೆ ಪ್ರೇರಣೆಯಾದ ಮುರುಘಾಮಠವನ್ನು ಕೃತಜ್ಞತೆಯಿಂದ ಅವರು ನೆನೆದಿದ್ದಾರೆ.

ಗಳಗನಾಥರ ‘ಮಾಧವ ಕರುಣಾ ವಿಲಾಸ’ ಅವರಲ್ಲಿ ಬಹಳಷ್ಟು ಪ್ರಭಾವ ಬೀರಿತ್ತು.ಬೇಂದ್ರೆ ಅವರ ಗರಿ,ಕವೆಂಪು ಅವರ ನವಿಲು,ಮಧುರಚೆನ್ನರ ನನ್ನ ನಲ್ಲ,ಕಡೆಂಗೋಡ್ಲು ಶಂಕರಭಟ್ಟರ ನಲ್ಮೆ ಮೊದಲಾದ ಕವನ ಸಂಕಲನಗಳು ಕಣವಿ ಅವರ ಭಾವಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದವು.ಇಷ್ಟೇ ಅಲ್ಲದೇ,ಮಾಸ್ತಿ ಅವರ ಸಣ್ಣಕಥೆಗಳು,ಅನಕೃತ ಅವರ ಮಂಗಳಸೂತ್ರ,ಸಂಧ್ಯಾರಾಗ,ಗೋರೂರ ನಮ್ಮ ಊರಿನ ರಸಿಕರು.ಶರಶ್ಚಂದ್ರರ ದೇವದಾಸ,ಕಾರಂತರ ಮರಳಿ ಮಣ್ಣಿಗೆ,ಕವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ.ಸ್ವಾವಿ ವಿವೇಕಾನಂದ,ಮೂರ್ತಿರಾಯರ ಲಲಿತ ಪ್ರಬಂಧಗಳು, ಶೇಕ್ಸ್‌ಪಿಯರ್‌ನ ನಾಟಕಗಳ ಅಧ್ಯಯನ ಅವರ ವಿಶಾಲವಾದ ವೈವಿದ್ಯಮಯ ಪ್ರಪಂಚನವನ್ನು,ಮನುಷ್ಯ ವ್ಯಕ್ತಿಯ ಸ್ವಭಾವಗಳನ್ನು ಅವರಿಗೆ ದರ್ಶನ ಮಾಡಿಸಿದವು.

ಕಾಲೇಜು ದಿಸೆಯಲ್ಲೇ ಧಾರವಾಡದ ಮಾಳಮಡ್ಡಿಯಲ್ಲಿದ್ದ ತಮ್ಮ ವಿಶಾಲವಾದ ಕೋಣೆಯಲ್ಲಿ ‘ಕಾವ್ಯಾನುಭವ ಮಂಟಪ’ವನ್ನು ಆರಂಭಿಸಿ ಅಲ್ಲಿ ಕವನ ವಾಚನ,ಅದರ ರಸವಿಮರ್ಶೆ,ಸಾಹಿತ್ಯ ವಿಚಾರ ಚರ್ಚೆ ನಡೆಸುತ್ತಿದ್ದರು.ಇವರ ಈ ಮಂಟಪದಲ್ಲಿ ಗೋಕಾಕರು ಹಾಗೂ ಬೇಂದ್ರೆ ಅವರೂ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕವಿತಾ ವಾಚನವೇ ಇರಲಿ,ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದೇ ಆಗಿರಲಿ ತಾವು ಹೇಳಬೇಕಿರುವುದನ್ನು ಮೊದಲೇ ಸಿದ್ದಪಡಿಸಿ ಅದನ್ನು ಬರೆದುಕೊಂಡೇ ಬರುತ್ತಿದ್ದರು.ಪತ್ರಿಕೆಗಳಿಗೆ ಹೇಳಿಕೆ ನೀಡುವುದನ್ನೂ ಅವರು ಬರವಣಿಗೆ ಮೂಲಕವೇ ನೀಡುತ್ತಿದ್ದುದು ಕಣವಿ ಅವರ ವಿಶೇಷ.

ಹೀಗೆ ತಮ್ಮ ಕಾವ್ಯ ಕೃಷಿಯನ್ನು ನಿರಂತರವಾಗಿ ನಡೆಸಿಕೊಂಡು ಬಂದ ಅವರು ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಬರವಣಿಗೆಯನ್ನು ನಿಲ್ಲಿಸದವರಲ್ಲ.

‘ಏನಾದರೂ ಇರಲಿ ಹಾಡು ನಿಲ್ಲಿಸಬೇಡ,ದೀಪ ತಟ್ಟನೆ ಆರಿ ಹೋಗಬಹುದು’ ಎಂಬ ಕಾವ್ಯದ ಸಾಲುಗಳು ಕಾವ್ಯಶ್ರದ್ಧೆಯಿಂದಲೇ ಏಳು ದಶಕಗಳಿಂದ ಕವಿತೆಯನ್ನು ನಿರಂತರವಾಗಿ ರಚಿಸಿಕೊಂಡೇ ಬರುತ್ತಿದ್ದ ಕಣವಿ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT