‘ಮುಕ್ತಿಯೆನ್ನ ಮನೆಗೆ ನಡೆದು ಬಂದಿತ್ತು’ ಕಥೆಯಲ್ಲಿ, ತನ್ನ ಮಗಳ ಮಡಿಲಿಗೆ ಮಗುವನ್ನು ಇಟ್ಟು ‘ಪಾರೋತಿ’ ಹೇಳುವ ಮಾತು, ಆಕೆ ಅನ್ನ ತಿಂದ ಮನೆಯ ಋಣ ತೀರಿಸಿದ ನಡೆ, ಶೀರ್ಷಿಕೆಗೆ ತಕ್ಕಂತೆ ‘ಗಂಧವಿಲ್ಲದ ಹೂವು’ ಕಥೆಯಲ್ಲಿನ ‘ಚಂದ್ರಭಾಗ’ಳ ಬದುಕು, ಆಕೆ ಎದುರಿಸಿದ ತಿರಸ್ಕಾರ ಹೀಗೆ ಈ ಸಂಕಲನದಲ್ಲಿನ ಬಹುತೇಕ ಕಥೆಗಳು ಹೆಚ್ಚಾಗಿ ಹೆಣ್ಣಿನ ಆಸೆ ಆಕಾಂಕ್ಷೆಗಳು, ನೋವು–ನಲಿವು, ತಲ್ಲಣಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿವೆ. ಜೊತೆಗೆ ನೂರೊಂದು ಬದುಕಿನ ಕಥೆಗಳನ್ನೂ ಇವು ಹೇಳಿವೆ. ‘ಚಂದು ಎಂಬ ಗಾಂಧಿ’ಯಲ್ಲೂ ‘ಸಹನಾ’ಳ ಮೌನದ ಜೊತೆಗೆ ಮನುಷ್ಯ ಹಾಗೂ ಪ್ರಾಣಿಗಳ ಸಂಘರ್ಷವೂ ಕಥೆಯ ಎಳೆಯಾಗಿದೆ. ‘ಮುಕ್ತಿಯೆನ್ನ ಮನೆಗೆ..’, ‘ಚಂದು ಎಂಬ ಗಾಂಧಿ’, ‘ಗಂಧವಿಲ್ಲದ ಹೂವು’ ಬಿಟ್ಟರೆ ಉಳಿದೆಲ್ಲ ಕಥೆಗಳು ನಗರ ಪರಿಸರದ ಹಿನ್ನೆಲೆಯಲ್ಲಿವೆ. ಇವುಗಳಲ್ಲಿ ಹೆಚ್ಚಿನ ಕಥೆಗಳಿಗೆ ಮದುವೆ, ಕೂಡುಕುಟುಂಬ ಅದರ ಸುತ್ತಲಿನ ಸಮಸ್ಯೆಗಳನ್ನು ಶೋಧಿಸುವ ಉಮೇದು ಇದೆ.